ಪಶ್ಚಿಮ ಬಂಗಾಳಕ್ಕೆ ಮತ್ತೆ ಬಿಜೆಪಿ ಅಧ್ಯಕ್ಷರ ಭೇಟಿ
ನವದೆಹಲಿ, ಜನವರಿ ೦2: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಶ್ಚಿಮ ಬಂಗಾಳಕ್ಕೆ ಮತ್ತೆ ಭೇಟಿ ನೀಡಲಿದ್ದಾರೆ. ಇದೇ ಜನವರಿ 9ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುತ್ತಿದ್ದು, ರೋಡ್ ಶೋ ನಡೆಸಿ, ರಾಜ್ಯದಲ್ಲಿನ ಪಕ್ಷದ ಹಿರಿಯ ಮುಖಂಡರನ್ನು ಭೇಟಿಯಾಗಲಿರುವರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಅಹಮದಾಬಾದ್ ನಲ್ಲಿ ಜನವರಿ 5ರಿಂದ 7ರವರೆಗೆ ಬಿಜೆಪಿ ಹಾಗೂ ಆರ್ ಎಸ್ ಎಸ್ ಸಂಘಟನೆಯ ಸಮನ್ವಯ ಸಭೆ ನಡೆಯಲಿರುವುದಾಗಿ ತಿಳಿದುಬಂದಿದೆ. ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಕೂಡ ಭಾಗವಹಿಸಲಿದ್ದಾರೆ. ಎಲ್ಲಾ ಕಡೆಗಳಿಂದ ಹಿರಿಯ ಕಾರ್ಯಕರ್ತರು ಸಭೆಗೆ ಆಗಮಿಸಲಿರುವುದಾಗಿ ತಿಳಿದುಬಂದಿದೆ.
ಕೃಷಿ ಮಸೂದೆ ಬಗ್ಗೆ ರಾಹುಲ್ ಹಳೆಯ ಭಾಷಣ ಅಪ್ಲೋಡ್ ಮಾಡಿದ ಜೆಪಿ ನಡ್ಡಾ
ಅಹಮದಾಬಾದ್ ನಲ್ಲಿ ಎರಡು ದಿನಗಳ ಕಾಲ ತಂಗಲಿರುವ ನಡ್ಡಾ, ಮೊದಲನೇ ದಿನ ಆರ್ ಎಸ್ ಎಸ್ ಸಭೆಯಲ್ಲಿ ಭಾಗಿಯಾಗಿ, ಮಾರನೇ ದಿನ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ. ಜನವರಿ 7ಕ್ಕೆ ಅಹಮದಾಬಾದ್ ನಿಂದ ತೆರಳಲಿದ್ದಾರೆ. ಆನಂತರ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಮುಂದಿನ ವಿಧಾನ ಸಭಾ ಚುನಾವಣೆಗೆ ಬಿಜೆಪಿ ತಯಾರಿ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಕಳೆದ ಡಿ.20ರಂದು ಅಮಿತ್ ಶಾ ಕೂಡ ಪಶ್ಚಿಮ ಬಂಗಾಳದ ವಿಶ್ವ ಭಾರತಿ ವಿಶ್ವವಿದ್ಯಾಲಯದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಡ್ಡಾ ಕಳೆದ ಬಾರಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಸಂದರ್ಭ ಗಲಭೆ ಸೃಷ್ಟಿಯಾಗಿತ್ತು. ಡಿ.10ರಂದು ಡೈಮಂಡ್ ಹಾರ್ಬರ್ ಗೆ ಪಕ್ಷದ ಸಭೆಗೆ ತೆರಳುತ್ತಿದ್ದ ಸಂದರ್ಭ ಜೆ.ಪಿ.ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶದ ವಿಜಯವರ್ಗಿಯಾ ಅವರ ಕಾರಿನ ಮೇಲೆ ಕಲ್ಲು ತೂರಲಾಗಿತ್ತು. ಈ ಘಟನೆಯಲ್ಲಿ ವಿಜಯವರ್ಗಿಯಾ ಅವರ ಕಾರಿನ ಗಾಜು ಪುಡಿಪುಡಿಯಾಗಿದ್ದು, ಕೆಲವರಿಗೆ ಗಾಯವಾಗಿದ್ದ ವರದಿಯಾಗಿತ್ತು. ಈ ಘಟನೆಯ ಹೊಣೆಯನ್ನು ಬಿಜೆಪಿ ಟಿಎಂಸಿ ಮೇಲೆ ಹೊರಿಸಿತ್ತು.