ಮೋದಿ ವಾಕ್ಸಿನ್ ಎಂದವರು ಈಗ ಲಸಿಕೆಗಾಗಿ ಕಿರುಚುತ್ತಿದ್ದಾರೆ: ಕಾಂಗ್ರೆಸ್ ನಾಯಕರಿಗೆ ಜೆಪಿ ನಡ್ಡಾ ಗುದ್ದು
ನವದೆಹಲಿ, ಮೇ 30: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ವಿರೋಧಪಕ್ಷಗಳು ಕ್ವಾರಂಟೈನ್ ಆಗಿವೆ ಎಂದಿದ್ದಾರೆ. ಬಿಜೆಪಿಯ ಕಾರ್ಯಕರ್ತರು ಒಂದು ಲಕ್ಷ ಹಳ್ಳಿ ಮತ್ತು ಕುಗ್ರಾಮಗಳಲ್ಲಿ ಅಗತ್ಯವಿರುವವರಿಗಾಗಿ ಸೇವೆಗಳನ್ನು ಮಾಡುತ್ತಿದ್ದಾರೆ ಎಂದು ಜೆಪಿ ನಡ್ಡಾ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಅವರು ಹರಿಹಾಯ್ದರು. ಕೇಂದ್ರ ಸರ್ಕಾರದ ನೈತಿಕ ಬಲವನ್ನು ಕುಗ್ಗಿಸಲು ಸಾಕಷ್ಟು ಪ್ರಯತ್ನವನ್ನು ಕಾಂಗ್ರೆಸ್ ನಡೆಸಿತು. ವಾಕ್ಸಿನ್ಅನ್ನು ಮೋದಿ ವಾಕ್ಸಿನ್ ಎಂದು ಕರೆದರು. ಆದರೆ ಈಗ ವಾಕ್ಸಿನ್ಗಾಗಿ ಕಿರುಚುತ್ತಿದ್ದಾರೆ ಎಂದಿದ್ದಾರೆ ಜೆಪಿ ನಡ್ಡಾ.
ಕೋವಿಡ್-19 ಸಂದರ್ಭದಲ್ಲಿ ಆಮ್ಲಜನಕ ಚಿಕಿತ್ಸಾ ವಿಧಾನ
"ಮೊದಲಿಗೆ ಲಸಿಕೆಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದವರು ಈಗ ವಾಕ್ಸಿನ್ ಲಭ್ಯತೆಯ ಬಗ್ಗೆ ಸದ್ದು ಮಾಡಲು ಆರಂಭಿಸಿದ್ದಾರೆ" ಎಂದು ಜೆಪಿ ನಡ್ಡಾ ವ್ಯಂಗ್ಯವಾಡಿದ್ದಾರೆ. ಮೊದಲಿಗೆ ಎರಡು ಕಂಪನಿಗಳಿಗೆ ಲಸಿಕೆ ತಯಾರಿಕೆಗೆ ಅನುಮತಿಯನ್ನು ನೀಡಲಾಗಿತ್ತು. ಈಗ 13 ಕಂಪನಿಗಳಿಗೆ ಅನುಮತಿ ನೀಡಿದ್ದೇವೆ. ಶೀಘ್ರದಲ್ಲಿಯೇ ಇದನ್ನು 19 ಕಂಪನಿಗಳಿಗೆ ಏರಿಸಲಿದ್ದೇವೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.
ಭಾರತ್ ಬಯೋಟೆಕ್ ಈಗ ತಿಂಗಳಿಗೆ 1.3 ಕೋಟಿ ಲಸಿಕೆಯನ್ನು ತಯಾರಿಸುತ್ತಿದೆ. ಇದರ ಉತ್ಪಾದನಾ ಸಾಮರ್ಥ್ಯ ಮುಂದಿನ ಅಕ್ಟೋಬರ್ ವೇಳೆಗೆ ತಿಂಗಳಿಗೆ 10 ಕೋಟಿ ಡೋಸ್ಗಳಿಗೆ ಏರಿಕೆಯಾಗಲಿದೆ ಎಂದು ಜೆಪಿ ನಡ್ಡಾ ವಿವರಗಳನ್ನು ನೀಡಿದ್ದಾರೆ. ಎನ್ಡಿಎ ಸರ್ಕಾರ ಅಧಿಕಾರಕ್ಕೆ ಏರಿ 7 ವರ್ಷವಾಗಿರುವ ಸಂದರ್ಭದಲ್ಲಿ ಜೆಪಿ ನಡ್ಡಾ ಮಾತನಾಡಿದರು.
Addressing #SevaHiSangathan program on the occasion of Seven years of Modi Government #7YearsOfSeva https://t.co/4cszBlRT8Y
— Jagat Prakash Nadda (@JPNadda) May 30, 2021
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಉದ್ಧೇಶಿಸಿ ಟೀಕಿಸಿದ ಜೆಪಿ ನಡ್ಡಾ ಕೊರೊನಾ ವೈರಸ್ನ ಈ ಸಂಕಷ್ಟದ ಸಂದರ್ಭದಲ್ಲಿ ಬಿಜೆಪಿಯ ಕಾರ್ಯಕರ್ತರು ಜನರ ಜೊತೆಗೆ ಬೆಂಬಲವಾಗಿ ನಿಂತಿದ್ದಾರೆ. ಆದರೆ ವಿರೋಧ ಪಕ್ಷದ ಮುಖಂಡರು ಕೇವಲ ವರ್ಚುವಲ್ ಮಾಧ್ಯಮಗೋಷ್ಟಿಯಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.