ಹಿಂದೂ ವಿರೋಧಿ, ಅಲ್ಪಸಂಖ್ಯಾತರ ಓಲೈಕೆ: ಮಮತಾ ವಿರುದ್ಧ ನಡ್ಡಾ ಆರೋಪ
ನವದೆಹಲಿ, ಸೆಪ್ಟೆಂಬರ್ 10: ಮಮತಾ ಬ್ಯಾನರ್ಜಿ ಸರ್ಕಾರವು ಹಿಂದೂ ವಿರೋಧಿ ಮನೋಭಾವ ಹೊಂದಿದ್ದು, ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರವನ್ನು ಹೊತ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದರು.
ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತರ ಓಲೈಕೆಯ ನೀತಿಯನ್ನು ಅನುಸರಿಸುತ್ತಿದೆ. ಹಿಂದೂ ವಿರೋಧಿ ಧೋರಣೆಯು ರಾಜ್ಯದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಎಡೆಮಾಡಿಕೊಡುತ್ತಿದ್ದು, 100ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಸಾವಿಗೆ ಕಾರಣವಾಗಿದೆ ಎಂದು ಕಿಡಿಕಾರಿದರು.
ಮಮತಾ ಬ್ಯಾನರ್ಜಿಯಿಂದ ಪ್ರಧಾನಿ ಮೋದಿಗೆ ಆಕ್ರೋಶಭರಿತ ಪತ್ರ
ಇಡೀ ದೇಶ ಅಯೋಧ್ಯೆಯ ರಾಮ ಮಂದಿರದ ಭೂಮಿ ಪೂಜೆಯನ್ನು ನೋಡುತ್ತಿದ್ದಾಗ, ರಾಜ್ಯದ ಜನರು ಅದರಲ್ಲಿ ಭಾಗಿಯಾಗಬಾರದು ಎಂಬ ಉದ್ದೇಶದಿಂದ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಆಗಸ್ಟ್ 5ರಂದು ಲಾಕ್ಡೌನ್ ಹೇರಿದ್ದರು. ಆದರೆ ಬಕ್ರೀದ್ಗಾಗಿ ಲಾಕ್ಡೌನ್ ಹಿಂದಕ್ಕೆ ಪಡೆದಿದ್ದರು ಎಂದು ಟೀಕಾಪ್ರಹಾರ ನಡೆಸಿದರು.
ಅಗತ್ಯ ಇರುವವರಿಗೆ ರೂಪಿಸಿರುವ ಒಳ್ಳೆಯ ಯೋಜನೆಗಳು ಮತ್ತು ಬಂಗಾಳದ ಜನತೆಯ ನಡುವೆ ಮಮತಾ ದೀದಿ ಬೇಲಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬಡವರಿಗಾಗಿ ಒದಗಿಸಿರುವ ಐದು ಲಕ್ಷ ಕೋಟಿ ವೆಚ್ಚದ ಆಯುಷ್ಮಾನ್ ಭಾರತ್, ಪಶ್ಚಿಮ ಬಂಗಾಳದಲ್ಲಿನ 4.57 ಕೋಟಿ ಅರ್ಹರಿಗೆ ತಲುಪಿಲ್ಲ ಎಂದು ಆರೋಪಿಸಿದರು.
'2021ರ ಚುನಾವಣೆಯಲ್ಲಿ ಬಿಜೆಪಿಯನ್ನು ಬಂಗಾಳದಿಂದ ಹೊರಹಾಕುತ್ತೇವೆ'
'ನಮ್ಮ ಪಕ್ಷದ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಇಲ್ಲಿ ಹತ್ಯೆಮಾಡಲಾಗಿದೆ. ಇದು ಜಂಗಲ್ ರಾಜ್ ಅಲ್ಲದೆ ಹೋದರೆ ಇನ್ನೇನು? ಆದರೆ ದೆಹಲಿಯಲ್ಲಿ ಕುಳಿತಿರುವ 'ಪ್ರಜಾಪ್ರಭುತ್ವದ ಚಾಂಪಿಯನ್ಗಳು' ಇದರ ಬಗ್ಗೆ ಒಂದೂ ಮಾತು ಆಡುವುದಿಲ್ಲ' ಎಂದು ಹೇಳಿದರು.