ಯೋಗಿ ವಿರುದ್ಧ 'ಆಕ್ಷೇಪಾರ್ಹ' ಪೋಸ್ಟ್; ಪತ್ರಕರ್ತ ಕನೋಜಿಯಾ ಬಿಡುಗಡೆ
ನವದೆಹಲಿ, ಜೂನ್ 12: ಸುಪ್ರೀಂ ಕೋರ್ಟ್ ತಕ್ಷಣ ಬಿಡುಗಡೆ ಮಾಡುವಂತೆ ಆದೇಶ ನೀಡಿದ ಒಂದು ದಿನ ಆದ ಮೇಲೆ, ಬುಧವಾರದಂದು ದೆಹಲಿ ಮೂಲದ ಪತ್ರಕರ್ತ- ಇಪ್ಪತ್ತಾರು ವರ್ಷದ ಪ್ರಶಾಂತ್ ಕನೋಜಿಯಾ ಅವರನ್ನು ಗೋಸಾಯ್ ಗಂಜ್ ನಲ್ಲಿರುವ ಲಖನೌ ಜಿಲ್ಲಾ ಜೈಲಿನಿಂದ ಬಿಡುಗಡೆ ಮಾಡಿದೆ. ವೈಯಕ್ತಿಕ ಶ್ಯೂರಿಟಿ ಆಧಾರದಲ್ಲಿ ಸ್ಥಳೀಯ ಕೋರ್ಟ್ ಜಾಮೀನು ನೀಡಿದೆ.
ಕನೋಜಿಯಾ ಅವರನ್ನು ದೆಹಲಿಯಲ್ಲಿ ಇರುವ ಅವರ ಮನೆಯಿಂದ ಶನಿವಾರ ಬಂಧಿಸಿ ಕರೆದೊಯ್ಯಲಾಗಿತ್ತು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಅನ್ನು ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಷೇರ್ ಮಾಡಿದ ಆರೋಪ ಅವರ ಮೇಲೆ ಮಾಡಲಾಗಿತ್ತು.
ಯೋಗಿಗೆ ಅವಮಾನ ಮಾಡಿದ್ದು, ಕೊಲೆಯಲ್ಲ! ಪತ್ರಕರ್ತನ ಬಿಡುಗಡೆಗೆ ಸುಪ್ರೀಂ ಆದೇಶ
ಯೋಗಿ ಆದಿತ್ಯನಾಥ್ ವರ್ಚಸ್ಸಿಗೆ ಮಸಿ ಬಳಿಯುವ ಯತ್ನ, ಆಕ್ಷೇಪಾರ್ಹವಾದ ಅಭಿಪ್ರಾಯವನ್ನು ಹಂಚಿಕೊಂಡ ಆರೋಪವನ್ನು ಹೊರಿಸಿ, ಕನೋಜಿಯಾ ವಿರುದ್ಧ ಲಖನೌನ ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಯಿತು.
ಲಖನೌ ಕಾರಾಗೃಹದ ಹಿರಿಯ ಸೂಪರಿಂಟೆಂಡೆಂಟ್ ಪಿ.ಎನ್.ಪಾಂಡೆ ಅವರು ಪ್ರಶಾಂತ್ ಕನೋಜಿಯಾ ಬಿಡುಗಡೆ ಆಗಿರುವುದನ್ನು ಖಾತ್ರಿ ಪಡಿಸಿದ್ದಾರೆ. ಸಂಜೆ ಆರು ಗಂಟೆ ಹೊತ್ತಿಗೆ ಕೋರ್ಟ್ ನಿಂದ ಬಿಡುಗಡೆ ಆದೇಶ ಬಂದ ಮೇಲೆ ಅಗತ್ಯ ಪ್ರಕ್ರಿಯೆ ಮುಗಿಸಿದ್ದೇವೆ ಎಂದು ಹೇಳಿದ್ದಾರೆ.
ಇಪ್ಪತ್ತು ಸಾವಿರ ರುಪಾಯಿಗಳ ಇಬ್ಬರು ವೈಯಕ್ತಿಕ ಶ್ಯೂರಿಟಿ ಪಡೆದು, ಕನೋಜಿಯಾ ಅವರನ್ನು ಬಿಡುಗಡೆ ಮಾಡಲು ತಿಳಿಸಲಾಯಿತು. ಈ ತಪ್ಪನ್ನು ಪುನರಾವರ್ತನೆ ಮಾಡದಂತೆ, ಯಾವುದೇ ಸಾಕ್ಷ್ಯ ನಾಶ ಮಾಡದಂತೆ ಹಾಗೂ ಸಾಕ್ಷಿಗಳಿಗೆ ಬೆದರಿಕೆ ಒಡ್ಡದಂತೆ, ಪೊಲೀಸರ ತನಿಖೆಗೆ ಸಹಕರಿಸುವಂತೆ ಸೂಚನೆ ನೀಡಲಾಯಿತು.