ಜೆಎನ್ಯು ವಿದ್ಯಾರ್ಥಿ ಚುನಾವಣೆ: ಎಡ ಮೈತ್ರಿಕೂಟ ಜಯಭೇರಿ, ಎಬಿವಿಪಿಗೆ ಮತ್ತೆ ನಿರಾಸೆ
ನವದೆಹಲಿ, ಸೆಪ್ಟೆಂಬರ್ 17: ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ವಿದ್ಯಾರ್ಥಿಗಳ ಒಕ್ಕೂಟದ ಚುನಾವಣೆಯಲ್ಲಿ ಎಲ್ಲ ನಾಲ್ಕೂ ಕೇಂದ್ರ ಹುದ್ದೆಗಳಲ್ಲಿ ಗೆಲ್ಲುವ ಮೂಲಕ ಎಡ ಮೈತ್ರಿಕೂಟ ಕ್ಲೀನ್ ಸ್ವೀಪ್ ಮಾಡಿದೆ.
ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ಎಫ್ಐ), ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಷನ್ (ಡಿಎಸ್ಎಫ್), ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್ಎ) ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಷನ್ (ಎಐಎಸ್ಎಫ್) ಸಂಘಗಳು ಸೇರಿ ರಚಿಸಿರುವ ಯುನೈಟೆಡ್ ಲೆಫ್ಟ್ ಪ್ಯಾನಲ್ ಭರ್ಜರಿ ಜಯಭೇರಿ ಬಾರಿಸಿದೆ.
ಒಂದು ಕಾಲದಲ್ಲಿ ಜೆಎನ್ಯು ಸೆಕ್ಯೂರಿಟಿ ಈಗ ಅದೇ ಕಾಲೇಜಿನ ವಿದ್ಯಾರ್ಥಿ
13 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಎಸ್ಎಫ್ಐ ಅಧ್ಯಕ್ಷಗಿರಿ ಪಡೆದುಕೊಂಡಿದೆ. ಜನವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ (ಜೆಎನ್ಯುಎಸ್ಯು) ಚುನಾವಣೆಯಲ್ಲಿ ಎಸ್ಎಫ್ಐನ ಐಶೆ ಘೋಷ್ ಅವರು 2,313 ಮತಗಳೊಂದಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಅವರು ತಮ್ಮ ಎದುರಾಳಿ, ಎಬಿವಿಪಿಯ ಮನೀಶ್ ಜಾಂಗಿಡ್ ಅವರನ್ನು ಸೋಲಿಸಿದರು. ಮನೀಶ್ ಅವರಿಗೆ 1,128 ಮತಗಳು ದೊರೆತವು.
2016ರಿಂದಲೂ ಕ್ಲೀನ್ ಸ್ವೀಪ್
ಒಕ್ಕೂಟದ ಪ್ರಧಾನ ಕಾರ್ಯದರ್ಶಿಯ ಸ್ಥಾನವು ಎಐಎಸ್ಎದ ಸತೀಶ್ ಚಂದ್ರ ಯಾದವ್ ಅವರಿಗೆ ಒಲಿದಿದ್ದರೆ, ಡಿಎಸ್ಎಫ್ನ ಸಾಕೇತ್ ಮೂನ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಐಎಸ್ಎಫ್ನ ಮೊಹಮದ್ ದಾನಿಶ್ ಅವರು ಜಂಟಿ ಕಾರ್ಯದರ್ಶಿ ಸ್ಥಾನದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. 2016ರಿಂದಲೂ ಎಡಮೈತ್ರಿ ಕೂಟವು ಎಲ್ಲ ನಾಲ್ಕೂ ಸೀಟುಗಳನ್ನು ಗೆಲ್ಲುತ್ತಿದೆ. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಎಬಿವಿಪಿ ಎಲ್ಲ ಸ್ಥಾನಗಳಲ್ಲಿಯೂ ಎರಡನೆಯ ಸ್ಥಾನ ಪಡೆದುಕೊಂಡಿತ್ತು.
370ನೇ ವಿಧಿಯ ಪ್ರಚಾರ
370ನೇ ವಿಧಿಯ ರದ್ದತಿಯ ವಿಷಯದ ಬಲದೊಂದಿಗೆ ಹೆಚ್ಚಿನ ಮತಗಳನ್ನು ಪಡೆಯುವ ನಿರೀಕ್ಷೆ ಹೊಂದಿದ್ದ ಎಬಿವಿಪಿಗೆ ನಿರಾಸೆಯಾಗಿದೆ. ಎಬಿವಿಪಿಯ ಪ್ರಚಾರದಲ್ಲಿ ಈ ನಿರ್ಧಾರ ಮುಂಚೂಣಿಯಲ್ಲಿತ್ತು. ಕಾಂಗ್ರೆಸ್ನ ರಾಷ್ಟ್ರೀಯ ವಿದ್ಯಾರ್ಥಿ ಘಟಕ (ಎನ್ಎಸ್ಯುಐ) ಮತ್ತು ಛಾತ್ರಾ ರಾಷ್ಟ್ರೀಯ ಜನತಾ ದಳದ ವಿದ್ಯಾರ್ಥಿ ಘಟಕಗಳು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಎನ್ಎಸ್ಯುಐ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಅಭ್ಯರ್ಥಿಯನ್ನು ಇಳಿಸಿತ್ತು.
ಜೆಎನ್ ಯು ಹೆಸರು ಬದಲಿಸಿ ಮೋದಿ ಹೆಸರಿಡಲು ಬಿಜೆಪಿ ಸಂಸದ ಸಲಹೆ
ಶೇ 67.9ರಷ್ಟು ಮತದಾನ
ಜೆಎನ್ಯುಎಸ್ಯುಗೆ ನಡೆದ ಚುನಾವಣೆಯಲ್ಲಿ ಶೇ 67.9ರಷ್ಟು ಮತದಾನವಾಗಿತ್ತು. ಕಳೆದ ಏಳು ವರ್ಷಗಳಲ್ಲಿಯೇ ಇದು ಅತ್ಯಧಿಕ ಮತದಾನವಾಗಿದೆ. 5,762 ವಿದ್ಯಾರ್ಥಿಗಳು ಮತ ಚಲಾಯಿಸಿದ್ದರು. ಇವುಗಳಲ್ಲಿ 700 ಮತಗಳ ಘೋಷಣೆಯನ್ನು ತಡೆಹಿಡಿಯಲಾಗಿತ್ತು.
ದೂರು ಸಲ್ಲಿಸಿದ್ದ ವಿದ್ಯಾರ್ಥಿಗಳು
ಈ ಫಲಿತಾಂಶವು ಸೆ. 8ರಂದೇ ಪ್ರಕಟವಾಗಬೇಕಿತ್ತು. ಆದರೆ ಇಬ್ಬರು ವಿದ್ಯಾರ್ಥಿಗಳು ತಮ್ಮ ನಾಮಪತ್ರಗಳನ್ನು ಅಕ್ರಮವಾಗಿ ತಿರಸ್ಕರಿಸಲಾಗಿದೆ ಎಂದು ದೂರು ನೀಡಿದ್ದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಫಲಿತಾಂಶ ಪ್ರಕಟಕ್ಕೆ ತಡೆ ನೀಡಿತ್ತು. ಸೆ. 17ರವರೆಗೂ ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್ ತಡೆಹಿಡಿಯಲಾಗಿತ್ತು.