ಜೆಎನ್ಯು ಗಲಭೆ: ವಾಟ್ಸಾಪ್ ಗ್ರೂಪ್ನ 37 ಮಂದಿಯ ಗುರುತು ಪತ್ತೆ
ನವದೆಹಲಿ, ಜನವರಿ 11: 'ಎಡಪಂಥೀಯರ ವಿರುದ್ಧ ಒಂದಾಗಿ' ಎಂಬ ಹೆಸರಿನ ವಾಟ್ಸಾಪ್ ಗ್ರೂಪ್ನ 60 ಸದಸ್ಯರ ಪೈಕಿ 37 ಸದಸ್ಯರನ್ನು ದೆಹಲಿ ಪೊಲೀಸರು ಗುರುತಿಸಿದ್ದಾರೆ ಎನ್ನಲಾಗಿದೆ.
ಕಳೆದ ವಾರ ಜೆಎನ್ಯುದಲ್ಲಿ ನಡೆದ ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ಮೇಲಿನ ದಾಳಿಗೆ ಇವರು ಸಂಬಂಧಿಸಿದ್ದವರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಶನಿವಾರ ತಿಳಿಸಿವೆ. ಗುರುತು ಪತ್ತೆಯಾಗಿರುವವರಲ್ಲಿ ಸುಮಾರು ಹತ್ತು ಮಂದಿ ಹೊರಗಿನವರಾಗಿದ್ದಾರೆ.
ಜೆಎನ್ಯುದಲ್ಲಿ ಪೊಲೀಸ್ ಠಾಣೆ ಆರಂಭಿಸಿ: ಸುಬ್ರಮಣಿಯನ್ ಸ್ವಾಮಿ
34 ಮಂದಿ ಗಾಯಗೊಳ್ಳಲು ಕಾರಣವಾದ ಮಾರಕ ದಾಳಿಯಲ್ಲಿ ಪಾಲ್ಗೊಂಡವರಲ್ಲಿ ಕೆಲವರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಅಲ್ಲ ಎನ್ನುವುದು ಬಹುತೇಕ ಖಚಿತವಾಗಿದೆ. ಹಿಂಸಾಚಾರದೊಂದಿಗೆ ನಂಟು ಹೊಂದಿರುವ ಎಡಪಕ್ಷ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಮತ್ತು ಬಿಜೆಪಿ ಬೆಂಬಲಿತ ಎಬಿವಿಪಿ ಎರಡೂ ಹೊರಗಿನವರ ಸಹಾಯ ಪಡೆದುಕೊಂಡಿವೆ. ಜೆಎನ್ಯುದಲ್ಲಿರುವ ವಿದ್ಯಾರ್ಥಿಗಳು ಹೊರಗಿನವರು ಆವರಣದ ಒಳಗೆ ಬರಲು ನೆರವು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಗುರುತು ಹಚ್ಚಿರುವ 37 ಮಂದಿಯಲ್ಲಿ ಒಬ್ಬಾತ ಜೆಎನ್ಯು ಎಬಿವಿಪಿ ಘಟಕದ ಕಾರ್ಯದರ್ಶಿ ಮನೀಶ್ ಜಂಗಿದ್ ಎಂದು ತಿಳಿದುಬಂದಿದೆ. ಆದರೆ ಅವರು ಈ ಗುಂಪಿನಲ್ಲಿ ತಮ್ಮ ಹೆಸರು ಇರುವುದೇ ತಿಳಿದಿಲ್ಲ ಎಂದು ಹೇಳಿದ್ದಾರೆ. 'ನನ್ನ ಫೋನ್ ಒಡೆದುಹೋಗಿತ್ತು. ಅದನ್ನು ರಿಪೇರಿ ಮಾಡಿಸಿದಾಗ ಹೊಸ ಗುಂಪಿನಲ್ಲಿ ನನ್ನ ಹೆಸರನ್ನು ಸೇರಿಸಿರುವುದು ಗೊತ್ತಾಯಿತು' ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
"ಜೆಎನ್ ಯು ಹಿಂಸಾಚಾರದ ಹಿಂದೆ ಎಡಪಂಥೀಯ ವಿದ್ಯಾರ್ಥಿಗಳ ಕೈವಾಡ"
ದಾಳಿ ನಡೆದ ಆರು ದಿನಗಳ ಬಳಿಕ ಉಪ ಕುಲಪತಿ ಜಗದೀಶ್ ಕುಮಾರ್ ಅವರು ಶನಿವಾರ ಬೆಳಿಗ್ಗೆ ವಿದ್ಯಾರ್ಥಿಗಳ ಜತೆಗೆ ಮೊದಲ ಸಭೆ ನಡೆಸಿದರು.
ಸಿಸಿಟಿವಿ ದೃಶ್ಯಾವಳಿಗಳು ಮತ್ತು ವಾಟ್ಸಾಪ್ ಸಂದೇಶಗಳನ್ನು ಒಳಗೊಂಡಂತೆ ಪುರಾವೆಗಳ ರಕ್ಷಣೆಗೆ ಕೋರಿ ಜೆಎನ್ಯುದ ಪ್ರೊಫೆಸರ್ಗಳು ಶುಕ್ರವಾರ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದು, ಸೋಮವಾರ ವಿಚಾರಣೆ ನಡೆಯಲಿದೆ.