ಜೆಎನ್ಯು ಹಿಂಸಾಚಾರ: ತಮಗೆ ತಾವೇ ಕ್ಲೀನ್ ಚಿಟ್ ಕೊಟ್ಟುಕೊಂಡ ಪೊಲೀಸರು
ನವದೆಹಲಿ, ನವೆಂಬರ್ 19: ಜನವರಿ 5ರಂದು ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ಆವರಣದ ಒಳಗೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 'ಸ್ಥಳೀಯ ಪೊಲೀಸರ ನಿರ್ಲಕ್ಷ್ಯ' ಮತ್ತು 'ಘಟನೆಗಳ ಸಂದರ್ಭಗಳ ತನಿಖೆ'ಗಾಗಿ ರಚಿಸಲಾಗಿದ್ದ ದೆಹಲಿ ಪೊಲೀಸರ ಸತ್ಯಶೋಧನಾ ಸಮಿತಿಯು ಪೊಲೀಸರಿಗೆ ಕ್ಲೀನ್ ಚಿಟ್ ನೀಡಿದೆ.
ಜನವರಿ 5ರಂದು ವಿಶ್ವವಿದ್ಯಾಲಯದ ಆವರಣದೊಳಗೆ ನುಗ್ಗಿದ್ದ ಸುಮಾರು ನೂರಾರು ಮುಸುಕುಧಾರಿ ವ್ಯಕ್ತಿಗಳು ಬಡಿಗೆ ಮತ್ತು ರಾಡ್ ಹಿಡಿದು ದಾಂಧಲೆ ನಡೆಸಿದ್ದರು. ಘಟನೆಯಲ್ಲಿ 36 ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಗಾಯಗೊಂಡಿದ್ದರು. ಈ ಕುರಿತು ಎಫ್ಐಆರ್ ದಾಖಲಾಗಿ, ಪ್ರಕರಣವನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಬಂಧನವಾಗಿಲ್ಲ.
ದೀಪಿಕಾ ಪಡುಕೋಣೆ, ಡ್ರಗ್ಸ್ ಮತ್ತು ಜೆಎನ್ಯು ಪ್ರತಿಭಟನೆ: ವಿವಾದದ ಹೊಸ ಬೆಸುಗೆ
ವಿವಿ ಆವರಣದ ಒಳಗೆ ಹಿಂಸಾಚಾರ ನಡೆಯುತ್ತಿದ್ದರೂ ಪೊಲೀಸರು ಒಳಗೆ ಬಾರದೆ ಹೊರಗೇ ನಿಂತಿದ್ದು ಏಕೆ ಎಂದು ಪ್ರಶ್ನೆಗಳು ಉದ್ಭವವಾಗಿದ್ದವು. ಈ ಘಟನೆಯೂ ಕೆಲವು ವಾರಗಳ ಮುನ್ನ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯಲ್ಲಿ ಇದಕ್ಕೆ ವಿರುದ್ಧವಾದ ರೀತಿಯಲ್ಲಿ ಪೊಲೀಸರು ವರ್ತಿಸಿದ್ದರು. ಡಿಸೆಂಬರ್ನಲ್ಲಿ ಆವರಣದ ಒಳಗೆ ನುಗ್ಗಿದ್ದ ಪೊಲೀಸರು ಗ್ರಂಥಾಲಯದಲ್ಲಿ ಕುಳಿತಿದ್ದ ವಿದ್ಯಾರ್ಥಿಗಳನ್ನೂ ಥಳಿಸಿದ್ದರು ಎಂದು ಆರೋಪಿಸಲಾಗಿತ್ತು. ಗಲಭೆಕೋರರನ್ನು ಬೆನ್ನಟ್ಟುವಾಗ ಜಾಮಿಯಾದೊಳಗೆ ಪ್ರವೇಶಿಸಿದ್ದೆವು. ಆದರೆ ಅಧಿಕಾರಿಗಳ ಅನುಮತಿ ಇಲ್ಲದ ಕಾರಣ ಜೆಎನ್ಯುದೊಳಗೆ ಪ್ರವೇಶಿಸಲು ಆಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದರು. ಮುಂದೆ ಓದಿ.
ಪೊಲೀಸರ ಸಮಿತಿ ರಚನೆ
ಈ ಕುರಿತು ವಿಚಾರಣೆ ನಡೆಸಲು, ಜಂಟಿ ಪೊಲೀಸ್ ಆಯುಕ್ತೆ (ಪಶ್ಚಿಮ ವಲಯ) ಶಾಲಿನಿ ಸಿಂಗ್ ನೇತೃತ್ವದಲ್ಲಿ ನಾಲ್ವರು ಇನ್ಸ್ಪೆಕ್ಟರ್ ಮತ್ತು ಇಬ್ಬರು ಎಸಿಪಿಗಳನ್ನು ಒಳಗೊಂಡ ಸಮಿತಿಯೊಂದನ್ನು ಪೊಲೀಸ್ ಆಯುಕ್ತೆ ಅಮೂಲ್ಯ ಪಟ್ನಾಯಕ್ ಆದೇಶದಂತೆ ರಚಿಸಲಾಗಿತ್ತು.
ಎಲ್ಲರ ಹೇಳಿಕೆಯೂ ಒಂದೇ
ವಿಚಾರಣೆ ವೇಳೆ ಆಗಿನ ಡಿಸಿಪಿ ದೇವೇಂದರ್ ಆರ್ಯ, ಎಸಿಪಿ ರಮೇಶ್ ಕಕ್ಕರ್, ಎಸ್ಎಚ್ಒ ವಸಂತ್ ಕುಂಜ್ ಋತುರಾಜ್ ಮತ್ತು ಇನ್ಸ್ಪೆಕ್ಟರ್ ಆನಂದ್ ಯಾದವ್ ಅವರಿಂದ ವಿವರಣೆ ಕೇಳಲಾಗಿತ್ತು. ಈ ಎಲ್ಲ ಪೊಲೀಸರು ಜ. 5ರಂದು ಬೆಳಿಗ್ಗೆ 8 ರಿಂದ ನಡೆದ ಘಟನಾವಳಿಗಳ ಬಗ್ಗೆ ಒಂದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಸಿಎಎ ವಿರೋಧಿ ಹೋರಾಟ: ಜಾಮಿಯಾ ವಿವಿ ಹಿಂಸಾಚಾರಕ್ಕೆ ಈತನೇ ಕಾರಣ?
ಪೊಲೀಸರ ಬಳಿ ಲಾಠಿಯೂ ಇರಲಿಲ್ಲ
ಆಡಳಿತ ಬ್ಲಾಕ್ನ 100 ಮೀಟರ್ ಒಳಭಾಗದ ಪ್ರದೇಶದಲ್ಲಿ ಯಾವುದೇ ಧರಣಿ ಅಥವಾ ಪ್ರತಿಭಟನೆ ನಡೆಯದಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ಹೈಕೋರ್ಟ್ ಸೂಚನೆ ನೀಡಿತ್ತು. ಅದನ್ನು ನಿಭಾಯಿಸುವುದು ಪೊಲೀಸರ ಕರ್ತವ್ಯವಾಗಿತ್ತು. ಆ ಯಾವ ಪೊಲೀಸರ ಬಳಿಯೂ ಶಸ್ತ್ರ ಅಥವಾ ಲಾಠಿಗಳು ಇರಲಿಲ್ಲ ಎಂದು ಸಮಿತಿ ಹೇಳಿದೆ.
ಪೊಲೀಸರಿಂದ ನಿಯಂತ್ರಣಕ್ಕೆ
ಘಟನೆಯ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಎಲ್ಲ ಪೊಲೀಸರ ಹೇಳಿಕೆಗಳನ್ನು ದಾಖಲಿಸಿರುವ ಸತ್ಯಶೋಧನಾ ಸಮಿತಿಯು ಪೊಲೀಸರಿಗೆ ಕ್ಲೀನ್ ಚಿಟ್ ನೀಡಿದ್ದು, ಇಡೀ ದಿನ ವಿ.ವಿ. ಆವರಣದಲ್ಲಿ ಉದ್ವಿಗ್ನ ವಾತಾವರಣವಿತ್ತು. ಪೊಲೀಸರ ಮಧ್ಯಪ್ರವೇಶದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು ಎಂದು ವರದಿಯಲ್ಲಿ ಹೇಳಿದೆ.