ಜೆಎನ್ ಯು ಹಿಂಸಾಚಾರ: ಫೇಸ್ ಬುಕ್, ವಾಟ್ಸಾಪ್ ಗೆ ಹೈಕೋರ್ಟ್ ನೋಟಿಸ್
ನವದೆಹಲಿ, ಜನವರಿ.13: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಪ್ರಕರಣ ಸಂಬಂಧ ದೃಶ್ಯಸಾಕ್ಷಿ ನೀಡುವಂತೆ ದೆಹಲಿ ಹೈಕೋರ್ಟ್ ಕೇಳಿದೆ. ವಾಟ್ಸಾಪ್, ಫೇಸ್ ಬುಕ್, ಗೂಗಲ್ ನಲ್ಲಿನ ವಿಡಿಯೋ ಹಾಗೂ ಸಂದೇಶಗಳನ್ನು ನೀಡುವಂತೆ ಜೆಎನ್ ಯುನ ಮೂವರು ಪ್ರೊಫೆಸರ್ಸ್ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ದೆಹಲಿ ಹೈಕೋರ್ಟ್ ನ್ಯಾಯಾಧೀಶ ಬ್ರಿಜೇಶ್ ಸೇಥಿ ನೇತೃತ್ವದ ಪೀಠವು ಸೋಮವಾರ ಮೂವರು ಪ್ರೊಫೆಸರ್ಸ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಗೂಗಲ್, ವಾಟ್ಸಾಪ್, ಫೇಸ್ ಬುಕ್, ಆಪಲ್ ಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಜೆಎನ್ ಯು ಹಿಂಸಾಚಾರ: ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಅಸಲಿ ಸತ್ಯ
ಕಳೆದ ಜನವರಿ.05ರಂದು ಜೆಎನ್ ಯುನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ವಿಡಿಯೋ, ಫೋಟೋ ಹಾಗೂ ಸಂದೇಶಗಳನ್ನು ಡಿಲೀಟ್ ಮಾಡದೇ, ಕೋರ್ಟ್ ಗೆ ಸಲ್ಲಿಸುವಂತೆ ಸೂಚನೆ ನೀಡಿದ್ದು, ಮಂಗಳವಾರಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.
ಸಿಸಿ ಕ್ಯಾಮರಾ ದೃಶ್ಯಾವಳಿಗಳ ಸಲ್ಲಿಕೆಗೆ ಮನವಿ
ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿರುವ ಎಲ್ಲ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಬೇಕು. ಅದರಲ್ಲಿ ಲಭ್ಯವಾಗುವ ದೃಶ್ಯಾವಳಿಗಳನ್ನು ನೀಡುವಂತೆ ಅರ್ಜಿದಾರರು ಹೈಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಯಾರು ಗೊತ್ತಾ ಹೈಕೋರ್ಟ್ ಗೆ ಅರ್ಜಿ ಸಲ್ಸಿಸಿದವರು?
ಇನ್ನು, ಸಿಸಿ ಕ್ಯಾಮರಾ ದೃಶ್ಯಾವಳಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋ, ಫೋಟೋ, ಸಂದೇಶಗಳ ಡಾಟಾವನ್ನು ನೀಡುವಂತೆ ಮೂವರು ಪ್ರೊಷೆಸರ್ ಗಳು ಅರ್ಜಿ ಸಲ್ಲಿಸಿದ್ದಾರೆ. ಅಮೀತ್ ಪರಮೇಶ್ವರನ್, ಅತೂಲ್ ಸೂದ್, ಶುಕ್ಲಾ ವಿನಾಯಕ್ ಸಾವಂತ್ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ದೃಶ್ಯಸಾಕ್ಷ್ಯ ಲಭ್ಯವಾಗಿಲ್ಲ ಎಂದ ದೆಹಲಿ ಪೊಲೀಸರು
ಜೆಎನ್ ಯುನಲ್ಲಿ ಜನವರಿ.5ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಸಿ ಕ್ಯಾಮದಾ ದೃಶ್ಯಾವಳಿಗಳನ್ನು ನೀಡುವಂತೆ ಆಡಳಿತ ಮಂಡಳಿಯನ್ನು ಕೇಳಿದ್ದೇವೆ. ಆದರೆ, ಇದುವರೆಗೂ ವಿವಿ ಆಡಳಿತ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೈಕೋರ್ಟ್ ಎದುರು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೇ, ಈ ಸಂಬಂಧ ವಾಟ್ಸಾಪ್, ಫೇಸ್ ಬುಕ್ ಸಂಸ್ಥೆಗಳಿಗೂ ಪತ್ರ ಬರೆದಿರುವ ಬಗ್ಗೆ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳ ನೊಂದಣಿ ದಿನಾಂಕ ವಿಸ್ತರಿಸಿದ ಆಡಳಿತ ಮಂಡಳಿ
ಜನವರಿ.05ರಂದು ಜೆಎನ್ ಯುನಲ್ಲಿ ನಡೆದ ಹಿಂಸಾಚಾರದ ನಂತರ ಎರಡನೇ ಬಾರಿ ವಿದ್ಯಾರ್ಥಿಗಳ ಆನ್ ಲೈನ್ ನೊಂದಣಿಯನ್ನು ವಿಸ್ತರಣೆ ಮಾಡಲಾಗಿದೆ. ಜನವರಿ.15ರವರೆಗೂ ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಯಾವುದೇ ದಂಡವನ್ನು ಪಾವತಿಸದೇ ನೊಂದಣಿ ಮಾಡಿಕೊಳ್ಳುವುದಂತೆ ಆಡಳಿತ ಮಂಡಳಿ ತಿಳಿಸಿದೆ. ಮೊದಲಿಗೆ ಜನವರಿ.5ರವರೆಗೂ ನೊಂದಣಿಗೆ ಅವಕಾಶ ಮಾಡಿಕೊಡಲಾಗಿದ್ದು, ಅಲ್ಲಿಂದ ಜನವರಿ.12ಕ್ಕೆ ವಿಸ್ತರಣೆ ಮಾಡಲಾಗಿತ್ತು. ಇದೀಗ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೊಂದಣಿ ದಿನಾಂಕವನ್ನು ಜನವರಿ.15ಕ್ಕೆ ವಿಸ್ತರಿಸಲಾಗಿದೆ.