ವಿದ್ಯಾರ್ಥಿಗಳ ಹೋರಾಟಕ್ಕೆ ಕೇಂದ್ರವೇ ತಲೆ ಬಾಗಿದೆ: ಇದು JNU ಕಥೆ
ನವದೆಹಲಿ, ನವೆಂಬರ್.13: ವಿದ್ಯಾರ್ಥಿ ಶಕ್ತಿ ಮುಂದೆ ಯಾವ ಶಕ್ತಿಯೂ ನಿಲ್ಲೋದಿಲ್ಲ. ಯಾವ ಅಧಿಕಾರದ ಆಟವೂ ನಡೆಯೋದಿಲ್ಲ. ಯುವ ಸಮೂಹ ಕೆರಳಿ ನಿಂತರೆ ಎಂಥ ಸರ್ಕಾರವೂ ಅದರ ಮುಂದೆ ತಲೆ ಬಾಗಲೇಬೇಕು. ಈ ಮಾತು ದೆಹಲಿಯಲ್ಲಿ ಮತ್ತೊಮ್ಮೆ ನಿಜವಾಗಿದೆ.
ನವದೆಹಲಿ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸಿದ ಹೋರಾಟ ಕೊನೆಗೂ ಫಲಿಸಿದೆ. ಬಡಮಕ್ಕಳ ನೆರವಿಗೆ ಕೇಂದ್ರ ಮಾನನ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಧಾವಿಸಿದೆ. ಮೂರು ದಿನಗಳಿಂದ ನಡೆಯುತ್ತಿದ್ದ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾಲೇಜು ಆಡಳಿತ ಮಂಡಳಿ ಕೂಡಾ ಮಣಿದಿದೆ.
ಮತ್ತೆ ರಸ್ತೆಗಿಳಿದ ಜೆಎನ್ಯು ವಿದ್ಯಾರ್ಥಿಗಳು : ಕಾರಣವೇನು?
ದೆಹಲಿಯ ಜವಾಹರ್ ಲಾಲ್ ನೆಹರೂ ಕಾಲೇಜಿನ ಕಾರ್ಯನಿರ್ವಾಹಕ ಸಮಿತಿ ವಿದ್ಯಾರ್ಥಿಗಳಿಗೆ ಹೊಸ ಭರವಸೆ ನೀಡಿದೆ. ಈ ಹಿಂದೆ ಕಾಲೇಜು ಹೆಚ್ಚಿಸಿದ್ದ ವಿದ್ಯಾರ್ಥಿಗಳ ದಾಖಲಾತಿ ಶುಲ್ಕ, ಹಾಸ್ಟೆಲ್ ಶುಲ್ಕವನ್ನು ಕಡಿತಗೊಳಿಸುವುದಾಗಿ ತಿಳಿಸಿದೆ.
ಜೆಎನ್ ಯು ವಿದ್ಯಾರ್ಥಿಗಳ ಪ್ರತಿಭಟನೆ ವಾಪಸ್!
ಒಂದಲ್ಲಾ, ಎರಡಲ್ಲಾ, ಬರೋಬ್ಬರಿ ಶೇ.999ರಷ್ಟು ವಿದ್ಯಾರ್ಥಿಗಳ ಶುಲ್ಕವನ್ನು ಜೆಎನ್ ಯು ಹೆಚ್ಚಳ ಮಾಡಿತ್ತು. ಇದರಿಂದ ಕೆರಳಿದ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದರಕ್ಕೆ ಮಣಿದ ಕಾಲೇಜಿನ ಕಾರ್ಯನಿರ್ವಾಹಕ ಸಮಿತಿ ಶುಲ್ಕ ಹೆಚ್ಚಳ ಮಾಡುವ ಕ್ರಮವನ್ನು ವಾಪಸ್ ಪಡೆದಿದೆ. ಹೀಗಾಗಿ ವಿದ್ಯಾರ್ಥಿಗಳು ಕೂಡಾ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ.
ಟ್ವಿಟ್ಟರ್ ನಲ್ಲಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ
ಜೆಎನ್ ಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಮತ್ತೊಂದು ಸಿಹಿಸುದ್ದಿ ಕೊಟ್ಟಿದೆ. ಕಾರ್ಯನಿರ್ವಾಹಕ ಸಮಿತಿಯ ಶೈಕ್ಷಣಿಕ ಕಾರ್ಯದರ್ಶಿ ಆರ್.ಸುಬ್ರಮಣ್ಯಂ ಈ ಕುರಿತು ಟ್ವೀಟ್ ಮಾಡಿದ್ದಾರೆ. ಈ ಮೊದಲು ಏರಿಕೆ ಮಾಡಿದ್ದ ವಿದ್ಯಾರ್ಥಿಗಳ ಹಾಸ್ಟೆಲ್ ಶುಲ್ಕವನ್ನು ಕಡಿತಗೊಳಿಸಲಾಗಿದೆ. ಜೊತೆಗೆ ಆರ್ಥಿಕವಾಗಿ ಹಿಂದುಳಿದ ಕಾಲೇಜಿನ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ವಿದ್ಯಾರ್ಥಿಗಳ ಮೇಲೆ ಜಲಫಿರಂಗಿ ಪ್ರಯೋಗ
ಕಳೆದ ನವೆಂಬರ್.11ರ ಸೋಮವಾರ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಆವರಣದಲ್ಲಿ ಜೆಎನ್ ಯು ವಿವಿಯ ಘಟಿಕೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಅಂದಿನ ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾಗವಹಿಸುವ ವಿಚಾರ ವಿದ್ಯಾರ್ಥಿಗಳಿಗೆ ತಿಳಿದಿತ್ತು. ಹೀಗಾಗಿ ಪ್ರತಿಭಟನಾನಿರತ ವಿದ್ಯಾರ್ಥಿಗಳು ಉಪ ರಾಷ್ಟ್ರಪತಿ ಭೇಟಿಗೆ ಪಟ್ಟು ಹಿಡಿದರು. ಇದಕ್ಕೆ ಅಡ್ಡಿಪಡಿಸುತ್ತಿದ್ದಂತೆ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿತು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಜಲಫಿರಂಗಿ ಸಿಡಿಸಿದ್ದರು.
ಹಾಸ್ಟೆಲ್ ಫೀಸ್ ಕೇಳಿದ್ರೆ ಹೌಹಾರುತ್ತಿೀರಾ!
ಸಿಂಗಲ್ ಶೇರಿಂಗ್ ಹಾಸ್ಟೆಲ್ ರೂಮ್ ನ ಶುಲ್ಕವನ್ನು 20 ರೂಪಾಯಿಯಿಂದ 600 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಡಬಲ್ ಶೇರಿಂಗ್ ರೂಮ್ ಬಾಡಿಗೆಯ ಶುಲ್ಕವನ್ನು 10 ರೂಪಾಯಿಯಿಂದ 300 ರೂಪಾಯಿಗೆ ಹೆಚ್ಚಿಸಲಾಗಿತ್ತು. ಇಷ್ಟೇ ಅಲ್ಲದೇ ಮೆಸ್ ಶುಲ್ಕವನ್ನು 5,500 ರೂಪಾಯಿಯಿಂದ 12 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿತ್ತು. ಇದು ಬಡ ವಿದ್ಯಾರ್ಥಿಗಳನ್ನು ರೊಚ್ಚಿಗೇಳುವಂತೆ ಮಾಡಿತ್ತು.