ಜೆಎನ್ ಯು ಕುಲಪತಿ ವಜಾಗೊಳಿಸುವಂತೆ ಆಗ್ರಹಿಸಿ ಪ್ರಾಧ್ಯಾಪಕರ ರಾಜೀನಾಮೆ
ನವದೆಹಲಿ, ಜನವರಿ.14: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಗೌರವ ಪ್ರಾಧ್ಯಾಪಕ ಸ್ಥಾನಕ್ಕೆ ಅಮಿತ್ ಭದುರಿ ರಾಜೀನಾಮೆ ಸಲ್ಲಿಸಿದ್ದಾರೆ. ಜೆಎನ್ ಯು ಕುಲಪತಿ ಜಗದೀಶ್ ಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನವರಿ.05ರಂದು ಜೆಎನ್ ಯುನಲ್ಲಿ ಹಿಂಸಾಚಾರ ನಡೆದಿದ್ದು ಆಡಳಿತ ನಿರ್ವಹಣೆಯಲ್ಲಿ ಕುಲಪತಿ ಜಗದೀಶ್ ಕುಮಾರ್ ಸಂಪೂರ್ಣ ವಿಫಲಾಗಿದ್ದಾರೆ ಎಂದು ಅಮಿತ್ ಭದುರಿ ಆರೋಪಿಸಿದ್ದಾರೆ. ಅಲ್ಲದೇ ಕುಲಪತಿಗಳನ್ನು ವಜಾಗೊಳಿಸುವಂತೆ ಪ್ರತಿಭಟನೆಗೆ ಮುಂದಾಗಿದ್ದಾರೆ.
ಜೆಎನ್ ಯು ತಿಕ್ಕಾಟ: ಕುಲಪತಿ ರಾಜೀನಾಮೆ ನಂತರವೇ ವಿದ್ಯಾರ್ಥಿಗಳಿಗೆ ಪಾಠ
ಕುಲಪತಿ ಜಗದೀಶ್ ಕುಮಾರ್ ವಿರುದ್ಧ ಟೀಚರ್ಸ್ ಅಸೋಸಿಯೇಷನ್ ಹೋರಾಟ ನಡೆಸುತ್ತಿದೆ. ಜೆಎನ್ ಯುನಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಾಧ್ಯಾಪಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತರಗತಿಯನ್ನು ಬಹಷ್ಕರಿಸುವ ಪ್ರಾಧ್ಯಾಪಕರ ಹೋರಾಟಕ್ಕೆ ವಿದ್ಯಾರ್ಥಿಗಳು ಕೂಡಾ ಕೈ ಜೋಡಿಸಿದ್ದಾರೆ. ಕುಲಪತಿಯನ್ನು ಜೆಎನ್ ಯುನಿಂದ ತೆಗೆದು ಹಾಕುವವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕುಲಪತಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಅಸಮಾಧಾನ:
ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಆಡಳಿತಾತ್ಮಕ ವಿಭಾಗದ ಮುಖ್ಯಸ್ಥರಾಗಿ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಕುಲಪತಿ ಜಗದೀಶ್ ಕುಮಾರ್ ವಿಫಲಾಗಿದ್ದಾರೆ. ಜೆಎನ್ ಯುನಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿದೆ. ಅವರ ದಿವ್ಯನಿರ್ಲಕ್ಷ್ಯವನ್ನು ಕಂಡಾಗ ಅಸಹ್ಯ ಹುಟ್ಟತ್ತದೆ ಎಂದು ಗೌರವ ಪ್ರಾಧ್ಯಾಪಕರಾಗಿದ್ದ ಆರ್ಥಕ ತಜ್ಞ ಅಮಿತ್ ಭದುರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
1973ರಲ್ಲಿ ಯುವ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿ 2001ರಲ್ಲಿ ಬದಲಾವಣೆ ಬಯಸಿ ಸ್ವಲ್ಪ ಕಾಲ ಪ್ರಾಧ್ಯಾಪಕ ವೃತ್ತಿಯಿಂದ ಅಂತರ ಕಾಯ್ದುಕೊಂಡಿದ್ದೆನು. ಮತ್ತೆ ವಿವಿಯಲ್ಲಿ ಗೌರವ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದ್ದು ಖುಷಿ ಕೊಟ್ಟಿತ್ತು. ಆದರೆ, ಇತ್ತೀಚಿಗೆ ಜೆಎನ್ ಯುನಲ್ಲಿ ನಡೆದ ಬೆಳವಣಿಗೆಗಳಿಂದ ಮನಸಿಗೆ ತುಂಬಾ ನೋವಾಗುತ್ತಿದೆ.
ದೇಶದ ಪ್ರತಿಷ್ಠಿ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಜವಾಹರ್ ಲಾಲ್ ನಹೆರೂ ವಿಶ್ವವಿದ್ಯಾಲಯದಲ್ಲೇ ಆಡಳಿತ ನಿರ್ವಹಿಸುವಲ್ಲಿ ಕುಲಪತಿಗಳು ಸೋತಿದ್ದಾರೆ. ಅವರ ಬೇಜವಾಬ್ದಾರಿಯಂದ ಪರಿಸ್ಥಿತಿ ವಿಕೋಪಕ್ಕೆ ತೆರಳಿದ್ದು, ಕುಲಪತಿಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ತಾವು ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಗೌರವ ಪ್ರಾಧ್ಯಾಪಕರಾದ ಅಮಿತ್ ಭದುರಿ ತಿಳಿಸಿದ್ದಾರೆ.