ಜೆಎನ್ಯುದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ವಿರೂಪ
ನವದೆಹಲಿ, ನವೆಂಬರ್ 14: ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ಆವರಣದಲ್ಲಿ ಇನ್ನೂ ಅನಾವರಣಗೊಳ್ಳಬೇಕಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಯ ಮೇಲೆ ಮತ್ತು ಸುತ್ತಮುತ್ತ ಆಕ್ಷೇಪಾರ್ಹ ಬರಹಗಳನ್ನು ಬರೆದು ಅದನ್ನು ವಿರೂಪಗೊಳಿಸಿದ ಘಟನೆ ಗುರುವಾರ ನಡೆದಿದೆ.
ಸ್ವಾಮಿ ವಿವೇಕಾನಂದರ ಪ್ರತಿಮೆ ವಿರೂಪಗೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಆದರೆ ಈ ಕುರಿತು ಜೆಎನ್ಯು ಆಡಳಿತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನೂ ಉದ್ಘಾಟನೆಯಾಗಬೇಕಿರುವ ವಿವೇಕಾನಂದರ ಪ್ರತಿಮೆ ವಿಶ್ವವಿದ್ಯಾಲಯದ ಆಡಳಿತ ಬ್ಲಾಕ್ನ ಬಲಬದಿಯಲ್ಲಿ ಪಂಡಿತ್ ನೆಹರೂ ಅವರ ಪ್ರತಿಮೆಯ ಎದುರಿಗಿದ್ದು, ಅದನ್ನು ಕೇಸರಿ ಬಣ್ಣದ ಬಟ್ಟೆಯಿಂದ ಮುಚ್ಚಲಾಗಿದೆ.
ವಿದ್ಯಾರ್ಥಿಗಳ ಹೋರಾಟಕ್ಕೆ ಕೇಂದ್ರವೇ ತಲೆ ಬಾಗಿದೆ: ಇದು JNU ಕಥೆ
ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು ಉಪ ಕುಲಪತಿ ಮಮಿದಲಾ ಜಗದೀಶ್ ಕುಮಾರ್ ಅವರನ್ನು ಭೇಟಿ ಮಾಡಲು ಒತ್ತಾಯಿಸಿತ್ತು. ಬಳಿಕ ಆಡಳಿತ ವಿಭಾಗಕ್ಕೆ ತೆರಳಿ ಅಲ್ಲಿ ಕಪ್ಪು ಬಣ್ಣದಲ್ಲಿ ಸಂದೇಶಗಳನ್ನು ಬರೆದಿದ್ದರು.
ಪ್ರತಿಭಟನೆಗೆ ಮಣಿದಿದ್ದ ಜೆಎನ್ಯು ಆಡಳಿತ ಹಾಸ್ಟೆಲ್ ಶುಲ್ಕ ಹೆಚ್ಚಳದ ಕ್ರಮವನ್ನು ಭಾಗಶಃ ಹಿಂಪಡೆದುಕೊಂಡಿತ್ತು. ಜತೆಗೆ ಹಾಸ್ಟೆಲ್ನಲ್ಲಿನ ವಸ್ತ್ರಸಂಹಿತೆ ಮತ್ತು ಸಮಯ ನಿರ್ಬಂಧದ ನಿಯಮಗಳನ್ನು ಕೂಡ ತೆಗೆದುಹಾಕುವುದಾಗಿ ತಿಳಿಸಿತ್ತು.
ಎಬಿವಿಪಿ ವಿರುದ್ಧ ಆರೋಪ
ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟ (ಜೆಎನ್ಯುಎಸ್ಯು) ವಿವೇಕಾನಂದರ ಪ್ರತಿಮೆ ವಿರೂಪದ ಘಟನೆಯಲ್ಲಿ ತಮ್ಮ ಕೈವಾಡವನ್ನು ನಿರಾಕರಿಸಿದೆ. ವಿದ್ಯಾರ್ಥಿ ಘಟಕದ ಸದಸ್ಯರಾಗಲೀ ಅಥವಾ ಇತರೆ ಎಡಪಂಥೀಯ ವಿಚಾರಧಾರೆಯುಳ್ಳ ವಿದ್ಯಾರ್ಥಿಗಳಾಗಲೀ ಈ ರೀತಿ ಮಾಡಿಲ್ಲ. ವಿಶ್ವವಿದ್ಯಾಲಯಕ್ಕೆ ಹಾಗೂ ಅದರ ವಿದ್ಯಾರ್ಥಿಗಳಿಗೆ ಕೆಟ್ಟಹೆಸರು ತರಲು ಎಬಿವಿಪಿ ಈ ಕೃತ್ಯ ಎಸಗಿದೆ ಎಂದು ಘಟಕದ ಅಧ್ಯಕ್ಷ ಎನ್. ಸಾಯಿ ಬಾಲಾಜಿ ಆರೋಪಿಸಿದ್ದಾರೆ.
ನಮ್ಮ ಹಣದಲ್ಲಿಯೇ ಸರಿಪಡಿಸುತ್ತೇವೆ
'ಆಡಳಿತ ವಿಭಾಗದ ಕಟ್ಟಡಕ್ಕೆ ನುಗ್ಗಿ ಅಲ್ಲಿನ ಗೋಡೆಗಳ ಮೇಲೆ ಸಂದೇಶಗಳನ್ನು ಬರೆದ ವಿದ್ಯಾರ್ಥಿಗಳ ಪ್ರಯತ್ನವನ್ನು ನೀವು ಪ್ರಶ್ನಿಸುವುದಾದರೆ, ಶುಲ್ಕ ಹೆಚ್ಚಳದ ನಿರ್ಧಾರವನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆದುಕೊಂಡರೆ ನಾವು ವಿದ್ಯಾರ್ಥಿಗಳೇ ಹಣ ಸಂಗ್ರಹಿಸಿ ಎಲ್ಲವನ್ನೂ ಯಥಾಸ್ಥಿತಿಗೆ ತರುವ ಕೆಲಸ ಮಾಡುತ್ತೇವೆ ಎಂಬ ವಾಗ್ದಾನ ನೀಡುತ್ತೇವೆ' ಎಂದು ಸಾಯಿ ಬಾಲಾಜಿ ಹೇಳಿದ್ದಾರೆ.
ಮತ್ತೆ ರಸ್ತೆಗಿಳಿದ ಜೆಎನ್ಯು ವಿದ್ಯಾರ್ಥಿಗಳು : ಕಾರಣವೇನು?
ಶುಲ್ಕ ಹೆಚ್ಚಿಸಿ ಅಣಕಿಸಿದರು
'ದುರದೃಷ್ಟವಶಾತ್ ಮಾಧ್ಯಮಗಳು ವಿದ್ಯಾರ್ಥಿಗಳ ಆಕ್ರೋಶವನ್ನು ಪ್ರತಿಬಿಂಬಿಸುವ ಘಟನೆಗಳನ್ನಷ್ಟೇ ವೈಭವೀಕರಿಸಿದವು. ಇದರ ಬಳಿಕ ವಿದ್ಯಾರ್ಥಿಗಳಿಗೆ ನ್ಯಾಯ ನಿರಾಕರಿಸಲಾಯಿತು. ಅಧಿಕಾರಿಗಳು ಶುಲ್ಕ ಹೆಚ್ಚಿಸುವ ಮೂಲಕ ತಮ್ಮ ಬದುಕಿನ ಬಗ್ಗೆ ಜೋಕ್ ಮಾಡಿದ್ದಕ್ಕಾಗಿ ಮತ್ತು ಅದನ್ನು ವಾಪಸ್ ಪಡೆಯುವ ಹೆಸರಿನಲ್ಲಿ ತಮಾಷೆ ಮಾಡಿದ್ದಕ್ಕಾಗಿಯಷ್ಟೇ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ' ಎಂದು ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಉಪ ಕುಲಪತಿ ವಿರುದ್ಧ ಗೋಡೆ ಮೇಲೆ ಬರಹ
ಉಪ ಕುಲಪತಿ ಅವರೊಂದಿಗೆ ಮಾತನಾಡಲೇಬೇಕು ಎಂದು ಪಟ್ಟು ಹಿಡಿದಿದ್ದ ಕೆಲವು ವಿದ್ಯಾರ್ಥಿಗಳು ಬುಧವಾರವಿಡೀ ಆಡಳಿತ ವಿಭಾಗದ ಕಟ್ಟಡದೊಳಗೆ ಸೇರಿದ್ದರು. ಆದರೆ ಉಪ ಕುಲಪತಿ ಹಾಗೂ ಇತರೆ ಅಧಿಕಾರಿಗಳಾರೂ ಅಲ್ಲಿ ಸಿಕ್ಕಿರಲಿಲ್ಲ. ಇದರಿಂದ ರೊಚ್ಚಿಗೆದ್ದಿದ್ದ ವಿದ್ಯಾರ್ಥಿಗಳು ಉಪ ಕುಲಪತಿಗಳ ಕಚೇರಿಯ ಒಂದು ಬಾಗಿಲಿನ ಮೇಲೆ, 'ನೀವು ನಮ್ಮ ಉಪ ಕುಲಪತಿಯಲ್ಲ. ನಿಮ್ಮ ಸಂಘಕ್ಕೆ ವಾಪಸ್ ಹೋಗಿ' ಎಂದು ಬರೆದಿದ್ದರು. ಅಲ್ಲದೆ, ನೆಲದ ಮೇಲೆ 'ಮಮಿದಲಾ, ನಿಮಗೆ ಶಾಶ್ವತ ವಿದಾಯ' ಎಂದು ಬರೆದಿದ್ದರು. ಗೋಡೆಯೊಂದರ ಮೇಲೆ 'ಉಪ ಕುಲಪತಿಯ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಕೂಡ ಬರೆಯಲಾಗಿತ್ತು.
ಜೆಎನ್ಯು ವಿದ್ಯಾರ್ಥಿ ಚುನಾವಣೆ: ಎಡ ಮೈತ್ರಿಕೂಟ ಜಯಭೇರಿ, ಎಬಿವಿಪಿಗೆ ಮತ್ತೆ ನಿರಾಸೆ