ಹರ್ಯಾಣ ನಂತರ ದೆಹಲಿ ಮೇಲೆ ಕಣ್ಣಿಟ್ಟ ಜೆಜೆಪಿಯ ದುಷ್ಯಂತ್
ನವದೆಹಲಿ, ಜನವರಿ 12: ಹರ್ಯಾಣದಲ್ಲಿ ಪ್ರಮುಖ ಪಕ್ಷಗಳಿಗೆ ಸೆಡ್ಡು ಹೊಡೆದು ಅಧಿಕಾರ ಹಿಡಿಯುವಲ್ಲಿ ಸಫಲವಾದ ಜೆಜೆಪಿ ಪಕ್ಷದ ದುಷ್ಯಂತ್ ಚೌಟಾಲ ಅವರು ಈಗ ದೆಹಲಿ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಹರ್ಯಾಣದಲ್ಲಿ ಬಿಜೆಪಿ-ಜೆಜೆಪಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಆದರೆ, ದೆಹಲಿಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಜೊತೆಗೆ ಜೆಜೆಪಿ ಕಣಕ್ಕಿಳಿಯುವುದೋ ಅಥವಾ ಏಕಾಂಗಿಯಾಗಿ ಸ್ಪರ್ಧಿಸುವುದೋ ಕಾದು ನೋಡಬೇಕಿದೆ.
ದೆಹಲಿ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಪ್ರಶ್ನಿಸಿದಾಗ, ಈ ಬಗ್ಗೆ ಬಿಜೆಪಿ ತೀರ್ಮಾನ ಕೈಗೊಳ್ಳಲಿದೆ ಎಂದಷ್ಟೇ ಉತ್ತರ ಹೇಳುವ ಮೂಲಕ ಬಿಜೆಪಿ ಅಂಗಳಕ್ಕೆ ಚೆಂಡು ಎಸೆದಿದ್ದಾರೆ.
ದೆಹಲಿ ಸಿಎಂ ಸ್ಥಾನಕ್ಕೆ 7 ಬಿಜೆಪಿ ಮುಖಂಡರನ್ನು ಆರಿಸಿದ ಕೇಜ್ರಿವಾಲ್
ಹರ್ಯಾಣ ಉಪ ಮುಖ್ಯಮಂತ್ರಿ, ಜನನಾಯಕ ಜನತಾ ಪಾರ್ಟಿ(ಜೆಜೆಪಿ) ಅಧ್ಯಕ್ಷ ದುಷ್ಯಂತ್ ಚೌಟಲಾ ಅವರ ನೇತೃತ್ವದಲ್ಲಿ ನಡೆದ ಅಸ್ಭೆಯಲ್ಲಿ ದೆಹಲಿ ಚುನಾವಣೆಯಲ್ಲಿ ಸ್ಪರ್ಧಿಸುವ ತೀರ್ಮಾನ ಕೈಗೊಳ್ಳಲಾಯಿತು.
"ಬಿಜೆಪಿ ಜೊತೆ ಮೈತ್ರಿ ಮುಂದುವರೆಸಲು ನಾವು ಸಿದ್ಧ ಈ ಬಗ್ಗೆ ಬಿಜೆಪಿಯಿಂದ ಯಾವುದೇ ಮನವಿ ಬಂದಿಲ್ಲ, ಈ ಬಗ್ಗೆ ಪಕ್ಷದ ಸ್ಥಾಪಕ ಡಾ ಅಜಯ್ ಸಿಂಗ್ಚೌಟಾಲ ನಿರ್ಧರಿಸಲಿದ್ದಾರೆ" ಎಂದು ಜೆಜೆಪಿ ಹಿರಿಯ ನಾಯಕ, ದುಷ್ಯಂತ್ ಸೋದರ ದಿಗ್ವಿಜಯ್ ಚೌಟಾಲ ಹೇಳಿದರು.
ಬಡ, ಶ್ರಮಿಕ, ರೈತ ವರ್ಗಕ್ಕಾಗಿ ಜೆಜೆಪಿ ಶ್ರಮಿಸಲಿದೆ. ಪ್ರತ್ಯೇಕ ಚುನಾವಣಾ ಪ್ರಣಳಿಕೆ ಬಿಡುಗಡೆ ಮಾಡಲಿದೆ ಎಂದರು.
2015ರಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಸ್ಥಾನಗಳನ್ನು ಆಮ್ ಆದ್ಮಿ ಪಕ್ಷ ಗೆದ್ದುಕೊಂಡಿತ್ತು. ಬಿಜೆಪಿ ಮೂರು ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಆದರೆ 2017ರಲ್ಲಿ ಮುನ್ಸಿಪಾಲ್ ಕಾರ್ಪೊರೇಷನ್ ಚುನಾವಣೆ, 2019ರ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತೆ ಲಯಕ್ಕೆ ಮರಳಿದೆ.
ದೆಹಲಿಯಲ್ಲಿ ಫೆಬ್ರವರಿ 08ರಂದು ಮತದಾನ ನಡೆಯಲಿದ್ದು, ಫೆಬ್ರವರಿ 11ರಂದು ಫಲಿತಾಂಶ ಹೊರಬರಲಿದೆ