ಜೆಸ್ಸಿಕಾ ಲಾಲ್ ಹತ್ಯೆ ಕೇಸ್: ಮನುಶರ್ಮ ಜೈಲಿನಿಂದ ಬಿಡುಗಡೆ
ನವದೆಹಲಿ, ಜೂನ್ 2: ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದ್ದ ಜೆಸ್ಸಿಕಾ ಲಾಲ್ ಹತ್ಯೆಯ ಅಪರಾಧಿ ಮನುಶರ್ಮ ಇಂದು ಅವಧಿಗೂ ಮುನ್ನವೆ ಜೈಲಿನಿಂದ ಹೊರ ನಡೆದಿದ್ದಾರೆ. ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮನುಶರ್ಮ ಬಿಡುಗಡೆಗೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಸಮ್ಮತಿಸಿದ್ದಾರೆ.
Recommended Video
ಮನುಶರ್ಮ ಸೇರಿದಂತೆ 18 ಮಂದಿಯನ್ನು ಸನ್ನಡತೆ ಆಧಾರದ ಮೇಲೆ ತಿಹಾರ್ ಜೈಲಿನಿಂದ ಮಂಗಳವಾರ(ಜೂನ್ 2)ದಂದು ಹೊರಕ್ಕೆ ಕಳಿಸಲಾಗಿದೆ.
ಹರಿಯಾಣದ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ವಿನೋದ್ ಶರ್ಮ ಪುತ್ರ ಮನು ಶರ್ಮ, 1999ರ ಏಪ್ರಿಲ್ 29ರಂದು ಜೆಸ್ಸಿಕಾಳ ಹತ್ಯೆ ಮಾಡಿದ್ದ. ದೆಹಲಿಯ ರೆಸ್ಟೋರೆಂಟ್ನಲ್ಲಿ ನಡೆದ ಈ ಕೊಲೆ, ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಘಟನೆ ನಡೆದ ಏಳು ವರ್ಷಗಳ ನಂತರ ಪ್ರಕರಣದ ಪ್ರಮುಖ ಆರೋಪಿ ಮನು ಶರ್ಮಗೆ ಶಿಕ್ಷೆಯಾಗಿತ್ತು.
ಕೆಳ ಹಂತದ ನ್ಯಾಯಾಲಯದಲ್ಲಿ ಆರೋಪ ಮುಕ್ತನಾಗಿದ್ದ ಮನು ಶರ್ಮ ವಿರುದ್ಧ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. 2006ರಲ್ಲಿ ವಿಚಾರಣೆ ನಡೆಸಿದ ಅಂದಿನ ದೆಹಲಿ ಹೈಕೋರ್ಟ್ನ ನ್ಯಾ. ಆರ್.ಎಸ್. ಸೋಧಿ ಮತ್ತು ಪಿ.ಕೆ.ಭಾಸಿನ್ರನ್ನೊಳಗೊಂಡ ನ್ಯಾಯಪೀಠವು ಜೀವಾವಧಿ ಶಿಕ್ಷೆ ಜೊತೆಗೆ ಜೆಸ್ಸಿಕಾ ಕುಟುಂಬಕ್ಕೆ 50ಸಾವಿರ ಪರಿಹಾರ ಧನ ನೀಡುವಂತೆ ಆದೇಶಿಸಿತ್ತು. ನಂತರ 2010ರಲ್ಲಿ ಸುಪ್ರೀಂಕೋರ್ಟ್ ಕೂಡಾ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿತ್ತು.
1999ರ ಏಪ್ರಿಲ್ 30ರಂದು ದೆಹಲಿಯ ಮೆಹ್ರೊಲಿ ಪ್ರದೇಶದಲ್ಲಿರುವ ಬಿನಾ ರಮಣಿ ಒಡೆತನದ ಖುತಬ್ ಕೊಲನಾಡೆಯಲ್ಲಿರುವ ತಾಮರಿಂಡ್ ಕೋರ್ಟ್ ರೆಸ್ಟೋರೆಂಟ್ ನಲ್ಲಿ ಹತ್ಯೆ ನಡೆದಿತ್ತು. ಮನುಶರ್ಮಗೆ ಮದ್ಯ ಸರ್ವ್ ಮಾಡಲು ಜೆಸ್ಸಿಕಾ ನಿರಾಕರಿಸಿದ್ದರಿಂದ ಸಿಟ್ಟಿಗೆದ್ದು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.