ಜೈಷೆ ಸದಸ್ಯ, ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್ ಸಹಚರನ ಸೆರೆ
ನವದೆಹಲಿ, ಮಾರ್ಚ್ 22: ನಿಷೇಧಿತ ಭಯೋತ್ಪಾದನಾ ಸಂಘಟನೆ ಜೈಷ್-ಇ-ಮೊಹ್ಮದ್ ನ ಸದಸ್ಯ, ಇಪ್ಪತ್ತೇಳು ವರ್ಷದ ಸಜ್ಜದ್ ಖಾನ್ ನನ್ನು ಗುರುವಾರ ರಾತ್ರಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ನ ಸಹಚರ ಈತ ಎಂದು ಆರೋಪ ಮಾಡಲಾಗಿದೆ. ಈತ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ ಐಎ) ಮೋಸ್ಟ್ ವಾಂಟೆಡ್ ಆಗಿದ್ದ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಸಜ್ಜದ್ ಖಾನ್ ಪುಲ್ವಾಮಾದವನೇ ಆಗಿದ್ದು, ಆತನನ್ನು ಲಜಪತ್ ರಾಯ್ ಮಾರ್ಕೆಟ್ ನಲ್ಲಿ ಬಂಧಿಸಲಾಗಿದೆ. ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಮುದಾಸಿರ್ ಖಾನ್ ನ ಸಹಚರ ಸಜ್ಜದ್ ಖಾನ್ ಎಂದು ಪೊಲೀಸರು ಹೇಳಿದ್ದಾರೆ. ಈಚೆಗೆ ಭದ್ರತಾ ಸಿಬ್ಬಂದಿ ನಡೆಸಿದ ಗುಂಡಿನ ಚಕಮಕಿಯಲ್ಲಿ ಮುದಾಸಿರ್ ಖಾನ್ ನನ್ನು ಕೊಲ್ಲಲಾಗಿತ್ತು.
ದೆಹಲಿಯಲ್ಲಿ ಸ್ಲೀಪರ್ ಸೆಲ್ ಗಳನ್ನು ನಿಯೋಜನೆ ಮಾಡುವ ಸಲುವಾಗಿ ಮುದಾಸಿರ್ ಖಾನ್ ಸ್ವತಃ ಈ ಸಜ್ಜದ್ ಖಾನ್ ಗೆ ಜವಾಬ್ದಾರಿ ನೀಡಿದ್ದ ಎನ್ನಲಾಗುತ್ತಿದೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ ಈ ಸಜ್ಜದ್ ಖಾನ್ ರಾಷ್ಟ್ರೀಯ ತನಿಖಾ ದಳಕ್ಕೆ ಮೋಸ್ಟ್ ವಾಂಟೆಡ್ ಆಗಿದ್ದ.