ಬಳ್ಳಾರಿಗೆ ಹೋಗಬೇಕು, ಪ್ಲೀಸ್ ಅನುಮತಿ ಕೊಡಿ: ಸುಪ್ರೀಂಕೋರ್ಟ್ಗೆ ಜನಾರ್ದನ ರೆಡ್ಡಿ ಕೋರಿಕೆ
ನವದೆಹಲಿ, ಜೂನ್ 6: ಬಳ್ಳಾರಿ ಜಿಲ್ಲೆ ಪ್ರವೇಶಿಸಲು ನಿರ್ಬಂಧಕ್ಕೆ ಒಳಗಾಗಿರುವ ಮಾಜಿ ಸಚಿವ, ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ, ಬಳ್ಳಾರಿಗೆ ಭೇಟಿ ನೀಡಲು ಅನುಮತಿ ನೀಡುವಂತೆ ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದಾರೆ.
ಅನಾರೋಗ್ಯಕ್ಕೆ ಒಳಗಾಗಿರುವ ತಮ್ಮ ಮಾವನನ್ನು ನೋಡಲು ಬಳ್ಳಾರಿ ಜಿಲ್ಲೆಗೆ ಪ್ರವೇಶಿಸಲು ಅನುಮತಿ ಕೋರಿ ಜನಾರ್ದನ ರೆಡ್ಡಿ ಮಂಗಳವಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿದಿದ್ದಾರೆ. ಈ ಅರ್ಜಿಯನ್ನು ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರ ನೇತೃತ್ವದ ರಜೆಕಾಲದ ನ್ಯಾಯಪೀಠ ಶುಕ್ರವಾರ ಕೈಗೆತ್ತಿಕೊಳ್ಳಲಿದೆ.
ಪ್ರಸ್ತುತ ಸುಪ್ರೀಂಕೋರ್ಟ್ ವಿಧಿಸಿರುವ ನಿಬಂಧನೆಯಂತೆ ಜನಾರ್ದನ ರೆಡ್ಡಿ ಅವರು ಬಳ್ಳಾರಿ ಜಿಲ್ಲೆಗೆ ಕಾಲಿಡುವಂತಿಲ್ಲ. ಅನಾರೋಗ್ಯಕ್ಕೆ ಒಳಗಾಗಿರುವ ತಮ್ಮ ಮಾವ ಬಳ್ಳಾರಿಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ಅವರನ್ನು ನೋಡಲು ಬಳ್ಳಾರಿಗೆ ಹೋಗಬೇಕಿದೆ ಎಂದು ರೆಡ್ಡಿ ಅರ್ಜಿಯಲ್ಲಿ ವಿವರಿಸಿದ್ದಾರೆ.
ಮರ ಹತ್ತಿ ಮಾವಿನ ಹಣ್ಣು ಕಿತ್ತ ಜನಾರ್ದನ ರೆಡ್ಡಿ ವಿಡಿಯೋ ವೈರಲ್!
ಅಕ್ರಮ ಗಣಿಗಾರಿಕೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಜನಾರ್ದನ ರೆಡ್ಡಿ ಅವರ ಪ್ರಕರಣ ವಿಚಾರಣೆಗೆ ಬಾಕಿ ಇರುವ ಹಿನ್ನೆಲೆಯಲ್ಲಿ ಅವರು ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇರುವುದರಿಂದ ಬಳ್ಳಾರಿಗೆ ಪ್ರವೇಶಿಸಬಾರದು ಎಂದು ಸುಪ್ರೀಂಕೋರ್ಟ್ ನಿರ್ಬಂಧ ವಿಧಿಸಿತ್ತು.
ಮಗಳ ಮದುವೆಗಾಗಿ ಬಳ್ಳಾರಿಗೆ
2016ರ ನವೆಂಬರ್ 16ರಂದು ಜನಾರ್ದನ ರೆಡ್ಡಿ ಅವರ ಮಗಳು ಬ್ರಹ್ಮಿಣಿ ಮದುವೆ ನಡೆದಿತ್ತು. ಆ ಸಂದರ್ಭದಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಲು ನವೆಂಬರ್ 1ರಿಂದ ನವೆಂಬರ್ 21ರವರೆಗೆ ಮಾತ್ರ ಬಳ್ಳಾರಿಯಲ್ಲಿ ಇರಲು ಅವರಿಗೆ ತಾತ್ಕಾಲಿಕ ಅನುಮತಿ ನೀಡಲಾಗಿತ್ತು.
ಮತದಾನಕ್ಕೆ ಲಂಡನ್ನಿಂದ ಬಂದ ಮಗ: ಸಂಭ್ರಮ ಹಂಚಿಕೊಂಡ ಗಾಲಿ ರೆಡ್ಡಿ
ಪ್ರವೇಶ ನಿರಾಕರಿಸಿದ್ದ ಸುಪ್ರೀಂ
2018ರ ವಿಧಾನಸಭೆ ಚುನಾವಣೆಯಲ್ಲಿ ಸಹೋದರ ಜಿ. ಸೋಮಶೇಖರ ರೆಡ್ಡಿ ಪರ ಪ್ರಚಾರ ನಡೆಸುವ ಸಲುವಾಗಿ ಬಳ್ಳಾರಿಗೆ ಹೋಗಲು ಅನುಮತಿ ನೀಡುವಂತೆ ರೆಡ್ಡಿ ಕೋರಿದ್ದರು. ಆದರೆ, ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ನಿರ್ಬಂಧ ಸಡಿಲಿಸಲು ಪೂರಕವಾದ ಗಟ್ಟಿ ಅಂಶಗಳಿಲ್ಲ. ನೀವು ಅಲ್ಲಿ ಹೋಗಿ ಪ್ರಚಾರ ಮಾಡುವುದು ಬೇಡ ಎಂದು ಸುಪ್ರೀಂಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು.
ಸುಪ್ರೀಂನಿಂದ ಷರತ್ತುಬದ್ಧ ಜಾಮೀನು
ಅಕ್ರಮ ಗಣಿಗಾರಿಕೆಯ ನಂಬರ್ ಒನ್ ಆರೋಪಿಯಾಗಿರುವ ಜನಾರ್ದನ ರೆಡ್ಡಿ ಅವರು ಮೂರೂವರೆ ವರ್ಷ ಸೆರೆವಾಸ ಅನುಭವಿಸಿದ್ದರು. 2015ರಲ್ಲಿ ಸುಪ್ರೀಂಕೋರ್ಟ್ನಿಂದ ಷರತ್ತುಬದ್ಧ ಜಾಮೀನು ಪಡೆದು ಬಿಡುಗಡೆ ಹೊಂದಿದ್ದರು. ಬಳ್ಳಾರಿ ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಿಗೆ ಅವರು ಭೇಟಿ ನೀಡುವಂತಿಲ್ಲ ಮತ್ತು ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು.
ಅಕ್ರಮ ಗಣಿಗಾರಿಕೆ: ಜನಾರ್ದನ ರೆಡ್ಡಿ ಪತ್ನಿ ಅರುಣಾಗೆ ನೋಟಿಸ್
ರಾಜಕೀಯಕ್ಕೆ ಮರಳುವ ಪ್ರಯತ್ನ
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಜನಾರ್ದನ ರೆಡ್ಡಿ ಅವರು ಮತ್ತೆ ರಾಜಕೀಯಕ್ಕೆ ಮರಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗುವ ಮೂಲಕ ಜನರೊಂದಿಗೆ ಸಂಪರ್ಕ ಸಾಧಿಸಲು ಮುಂದಾಗಿದ್ದಾರೆ. ಆದರೆ, ಅವರ ಮೇಲಿನ ಪ್ರಕರಣ ಇನ್ನೂ ಬಾಕಿ ಉಳಿದಿರುವುದರಿಂದ ಹಾಗೂ ಪಕ್ಷ ಸೇರಿಸಿಕೊಂಡರೆ ಕಳಂಕ ಅಂಟುತ್ತದೆ ಎಂದು ಬಿಜೆಪಿ ಅವರನ್ನು ದೂರವೇ ಇರಿಸಲು ಪ್ರಯತ್ನಿಸುತ್ತಿದೆ.