'ಅಯೋಧ್ಯಾ ಕುರಿತ ಸುಪ್ರೀಂ ತೀರ್ಪು ಕಪ್ಪುಚುಕ್ಕೆ: ಮೇಲ್ಮನವಿ ಸಲ್ಲಿಸಲ್ಲ'
ನವದೆಹಲಿ, ನವೆಂಬರ್ 22: ದೇಶದ ಇತಿಹಾಸದಲ್ಲಿ ಅಯೋಧ್ಯೆ ರಾಮಜನ್ಮಭೂಮಿ ತೀರ್ಪು ಕಪ್ಪುಚುಕ್ಕೆಯಾಗಿರಲಿದೆ, ಆದರೆ ಕೋರ್ಟ್ ಆದೇಶ ಪ್ರಶ್ನಿಸಿ ಮರುಪರಿಶೀಲನಾ ಅಥವಾ ಮೇಲ್ಮನವಿ ಅರ್ಜಿ ಸಲ್ಲಿಸುವುದಿಲ್ಲ ಎಂದು ಜಮಾಯತ್ ಉಲಾಮಾ ಈ ಹಿಂದ್ ಸಂಘಟನೆ ಮುಖ್ಯಸ್ಥ ಮೌಲಾನಾ ಮೊಹಮ್ಮದ್ ಮದಾನಿ ತಿಳಿಸಿದ್ದಾರೆ.
ಕೋರ್ಟ್ ಆದೇಶ ಪ್ರಶ್ನಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧರಿಸಿರುವ ಬೆನ್ನಲ್ಲೇ ಈ ಸಂಘಟನೆಯಿಂದ ಈ ಹೇಳಿಕೆ ಹೊರಬಿದ್ದಿದೆ.
ಅಯೋಧ್ಯಾ ತೀರ್ಪು: ಗಮನಿಸಬೇಕಾದ ಕುತೂಹಲಕಾರಿ 10 ಸಂಗತಿಗಳು
ಗುರುವಾರ ನಡೆದ ಸಂಘಟನೆಯ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೋರ್ಟ್ ಆದೇಶ ಏಕಮುಖವಾಗಿದೆ. ದೇವಸ್ಥಾನದ ಮೇಲೆ ಮಸೀದಿ ಕಟ್ಟಿಲ್ಲ ಎಂದು ಹೇಳಿದ್ದರೂ, ನೂರಾರು ವರ್ಷ ಇತಿಹಾಸವಿರುವ ಮಸೀದಿ ಹಾಗೂ ಅಲ್ಲಿ ಪ್ರಾರ್ಥಿಸುವವರ ನಂಬಿಕೆಯನ್ನು ಪರಿಗಣಿಸಲಾಗಿಲ್ಲ.
ಆದಾಗ್ಯೂ ಮರುಪರಿಶೀಲನಾ ಅರ್ಜಿ ಸಲ್ಲಿಸುವುದರಿಂದ ವಿವಾದ ಬೆಳೆಯುತ್ತಿದೆಯೇ ಹೊರತು ಯಾವುದೇ ಪ್ರಯೋಜನವಿಲ್ಲ. ಈ ರೀತಿಯ ಋಣಾತ್ಮಕ ಹೆಜ್ಜೆಗಳಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ.
ಹೀಗಾಗಿ ಮರುಪರಿಶೀಲನಾ ಅರ್ಜಿ ಬದಲಿಗೆ ಅಯೋಧ್ಯಾದಲ್ಲಿ ನಿರ್ಮಾಣವಾಗಿರುವ ಸಾಕಷ್ಟು ಮಸೀದಿಗಳು ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರದಲ್ಲಿದೆ. ಇಲ್ಲಿ ಪ್ರಾರ್ಥನೆಗೆ ಮುಸ್ಲಿಮರಿಗೆ ಅವಕಾಶ ನೀಡಬೇಕು ಎಂದು ಮೌಲಾನಾ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರು ಸಭೆ ಸೇರಿ ಸುಪ್ರೀಂಕೋರ್ಟ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಹೀಗಾಗಿ ಮುಸ್ಲಿಮರ ಧಾರ್ಮಿಕ ನಂಬಿಕೆಗಳ ರಕ್ಷಣೆ ಹಾಗೂ ಶರಿಯತ್ ರಕ್ಷಣೆಗಾಗಿ ಮೇಲ್ಮನವಿ ಅರ್ಜಿ ಸಲ್ಲಿಕೆ ಅನಿವಾರ್ಯ ಎಂದು ವೈಯಕ್ತಿಕ ಕಾನೂನು ಮಂಡಳಿ ಅಭಿಪ್ರಾಯ ಪಟ್ಟಿತ್ತು.