ಕೊನೆಗೂ ನತಾಶಾಗೆ ತಂದೆಯ ಮುಖ ನೋಡಲಾಗಲಿಲ್ಲ, ಮಹಾವೀರ್ ಕೊರೊನಾದಿಂದ ನಿಧನ
ನವದೆಹಲಿ, ಮೇ 10: ಈಗಾಗಲೇ ಜೈಲಿನಲ್ಲಿರುವ ಪಂಜರ ಮುರಿ ಆಂದೋಲದ ಕಾರ್ಯಕರ್ತೆ ನತಾಶಾ ನರ್ವಾಲ್ ತಂದೆ ವಿಜ್ಞಾನಿ ಮಹಾವೀರ್ ಕೊರೊನಾ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.
ಮಹಾವೀರ್ ನರ್ವಾಲ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ ನಿಧನರಾದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಮಹಾವೀರ್ ನರ್ವಾಲ್ ಅವರ ಪುತ್ರ ಆಕಾಶ್ ನರ್ವಾಲ್ ಅವರಿಗೂ ಕೋವಿಡ್ ದೃಢಪಟ್ಟಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾರತದಲ್ಲಿ 17 ಕೋಟಿಗೂ ಅಧಿಕ ಮಂದಿಗೆ ಕೊರೊನಾವೈರಸ್ ಲಸಿಕೆ
ಪಂಜರ ಮುರಿ ಕಾರ್ಯಕರ್ತೆಯಾಗಿರುವ ಮಹಾವೀರ್ ಅವರ ಪುತ್ರಿ ನತಾಶಾ ನರ್ವಾಲ್ ತಿಹಾರ್ ಜೈಲಿನಲ್ಲಿದ್ದಾರೆ. ಮಹಾವೀರ್ ಅವರಿಗೆ ಕೊನೆಯಲ್ಲಿ ಮಗಳೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಕಳೆದ ವರ್ಷ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪದಡಿ ಪೊಲೀಸರು ನತಾಶಾಳನ್ನು ಬಂಧಿಸಿದ್ದರು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ನತಾಶಾ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವುದಾಗಿ ವರದಿ ಹೇಳಿದೆ.
ದೇಶದಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಕೈದಿಗಳನ್ನು ಕೂಡಲೇ ಜೈಲಿನಿಂದ ಬಿಡುಗಡೆಗೊಳಿಸುವಂತೆ ಎಡಪಕ್ಷದ ಕಾರ್ಯಕರ್ತರು ಹಾಗೂ ಮಾನವಹಕ್ಕು ಕಾರ್ಯಕರ್ತರು ಇತ್ತೀಚೆಗಷ್ಟೇ ಆಗ್ರಹಿಸಿದ್ದರು.
ಮಹಾವೀರ್ ಅವರಿಗೆ 71 ವರ್ಷ ವಯಸ್ಸಾಗಿತ್ತು, ಹಾಗೂ ಕಳೆದೊಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮಹಿಳಾ ಸಂಘಟನೆ ಪಿಂಜ್ರಾ ತೋಡ್ ಕಾರ್ಯಕರ್ತೆಯಾಗಿರುವ ನತಾಶಾ, ದೆಹಲಿಯ ಜವಾಹರ್ಲಾಲ್ ನೆಹರೂ ವಿವಿಯ ವಿದ್ಯಾರ್ಥಿನಿಯಾಗಿದ್ದು, ದೆಹಲಿ ಹಿಂಸಾಚಾರದಲ್ಲಿ ಆಕೆಯ ಪಾತ್ರವಿದೆ ಎಂದು ಆರೋಪಿಸಿ ಕಳೆದ ವರ್ಷದ ಮೇ 23 ರಂದು ಸಹ ಕಾರ್ಯಕರ್ತರಾದ ದೇವಾಂಗನಾ ಕಲಿತಾ ಅವರ ಜತೆಗೆ ಆಕೆಯ ಮನೆಯಿಂದ ಬಂಧಿಸಲಾಗಿತ್ತು.
ನ್ಯಾಯಾಲಯವು ಈ ಪ್ರಕರಣದಲ್ಲಿ ಜಾಮೀನು ನೀಡಿದ್ದರೂ ಮೇ 30ರಂದು ಆಕೆಯ ವಿರುದ್ಧ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯ್ದೆ ಹೇರಲಾಗಿತ್ತು. ಈಗ ತಿಹಾರ್ ಜೈಲಿನಲ್ಲಿರುವ ನತಾಶಾ ಅವರಿಗೆ ತಮ್ಮ ತಂದೆಯ ಜತೆಗೆ ಕೊನೆಯ ಬಾರಿ ಮಾತನಾಡುವ ಅವಕಾಶವೂ ದೊರೆಯಲಿಲ್ಲ.
Recommended Video
ಆಕೆಯ ಸೋದರ ಆಕಾಶ್ ಕೂಡ ಸೋಂಕಿನಿಂದ ಬಳಲುತ್ತಿದ್ದಾರೆ. ತಂದೆಯನ್ನು ನೋಡುವ ಅವಕಾಶ ಕೋರಿ ನತಾಶಾ ಸಲ್ಲಿಸಿದ್ದ ಜಾಮೀನು ಅಪೀಲು ಇಂದು ವಿಚಾರಣಗೆ ಬರುತ್ತಿತ್ತು.