ಆದಾಯ ತೆರಿಗೆ ದಾಳಿ: 215 ಕೋಟಿ ರೂ. ಕಪ್ಪು ಹಣ ಪತ್ತೆ
ನವದೆಹಲಿ, ಮೇ 23: ಎರಡು ಬೃಹತ್ ರಿಯಲ್ ಎಸ್ಟೇಟ್ ಸಮೂಹಗಳ ಮೇಲೆ ಹಲವು ದಾಳಿಗಳನ್ನು ನಡೆಸಿದ ಆದಾಯ ತೆರಿಗೆ ಇಲಾಖೆ 215 ಕೋಟಿಗೂ ಅಧಿಕ ಮೊತ್ತದ ಕಪ್ಪುಹಣವನ್ನು ಪತ್ತೆಹಚ್ಚಿದೆ.
ರಾಜಧಾನಿ ದೆಹಲಿಯ ಯಮುನಾ ಪ್ರದೇಶ ವ್ಯಾಪ್ತಿಯಲ್ಲಿ ಈ ಸಮೂಹಗಳು ಭೂಮಿ ಮತ್ತು ಫಾರ್ಮ್ಹೌಸ್ಗಳ ಮಾರಾಟ ಮಾಡುತ್ತಿವೆ.
ಚುನಾವಣೆಗೂ ಒಂದು ದಿನ ಮುನ್ನ ವಿವಿಧೆಡೆ IT, EC ದಾಳಿ
ಐಟಿ ಇಲಾಖೆಯ ದೆಹಲಿ ತನಿಖಾ ದಳವು ಈ ಎರಡೂ ಸಮೂಹಗಳು ಗುಟ್ಟಾಗಿ ವ್ಯವಹಾರ ನಡೆಸುತ್ತಿದ್ದ 33 ಶಾಖೆಗಳ ಮೇಲೆ ದಾಳಿ ನಡೆಸಿ ಪತ್ತೆ ಕಾರ್ಯಾಚರಣೆ ನಡೆಸಿತ್ತು.
ಆದಾಯ ತೆರಿಗೆಯಿಂದ ಪಾರಾಗಲು ಈ ಸಮೂಹಗಳು ಭಾರಿ ಪ್ರಮಾಣದ ವ್ಯವಹಾರಗಳನ್ನು ನಗದು ರೂಪದಲ್ಲಿಯೇ ನಡೆಸುತ್ತಿದ್ದರು. ಈ ಸಮೂಹಗಳೊಂದಿಗೆ ವ್ಯವಹಾರ ನಡೆಸಿದ ಗ್ರಾಹಕರ ಮಾಹಿತಿಗಳನ್ನು ಸಹ ಐಟಿ ಕಲೆಹಾಕುತ್ತಿದೆ.
ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಆಸ್ತಿ ಮಾರಾಟ ಮಾಡಿರುವುದಾಗಿ ಐಟಿ ರಿಟರ್ನ್ಸ್ನಲ್ಲಿ ತೋರಿಸುತ್ತಿದ್ದ ಸಮೂಹಗಳು, ವಾಸ್ತವವಾಗಿ ಅದಕ್ಕಿಂತ ಹೆಚ್ಚು ಹಣವನ್ನು ಗ್ರಾಹಕರಿಂದ ಪಡೆದುಕೊಳ್ಳುತ್ತಿದ್ದರು.
'ಶ್ರೀರಾಮುಲು ಆಪ್ತನ ಮೇಲೆ ಐಟಿ ದಾಳಿ: ಬಿಜೆಪಿ ಪ್ರಾಯೋಜಿತ ನಾಟಕ'
ಮಾರುಕಟ್ಟೆ ಮೌಲ್ಯ ಮತ್ತು ಮಾರಾಟವಾದ ಹಣದ ಮೊತ್ತದ ವ್ಯತ್ಯಾಸದ ಹಣವನ್ನು ನಗದುರೂಪದಲ್ಲಿ ಪಡೆದುಕೊಳ್ಳಲಾಗುತ್ತಿತ್ತು. ಈ ಹಣವು ಸಮೂಹದ ಲೆಕ್ಕಪತ್ರದೊಳಗೆ ನಮೂದಾಗುತ್ತಿರಲಿಲ್ಲ ಮತ್ತು ಹಣ ನೀಡಿದವರು ವಿವರವನ್ನು ಸಹ ದಾಖಲು ಮಾಡಲಾಗುತ್ತಿರಲಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೆರಿಗೆ ಇಲಾಖೆಯಿಂದ ತಮ್ಮ ನೈಜ ಆದಾಯವನ್ನು ಬಚ್ಚಿಡಲು ರಿಯಲ್ ಎಸ್ಟೇಟ್ ಕಂಪೆನಿಗಳ ಮಾಲೀಕರು ಮತ್ತು ಅವರ ಗ್ರಾಹಕರು ಈ ತಂತ್ರವನ್ನು ಅನೇಕ ವರ್ಷಗಳಿಂದ ಬಳಸುತ್ತಿದ್ದರು ಎಂದು ಅವರು ವಿವರಿಸಿದ್ದಾರೆ.
ಇದೊಂದು ರಾಜಕೀಯ ಹುನ್ನಾರ, ಐಟಿ ದಾಳಿಗೆ ಸಿದ್ದರಾಮಯ್ಯ ಕಿಡಿ
ರಾಜಧಾನಿಯ ಯಮುನಾ ಪ್ರದೇಶದಲ್ಲಿ ಫಾರ್ಮ್ಹೌಸ್ ಮತ್ತು ಭೂಮಿಗಳ ಮೇಲೆ ಕಪ್ಪುಹಣವನ್ನು ಹೂಡಿಕೆ ಮಾಡಿರುವ ಕುಳಗಳ ಪಟ್ಟಿಯನ್ನು ಆದಾಯ ತೆರಿಗೆ ಇಲಾಖೆ ಪರಿಶೀಲನೆ ಮಾಡುತ್ತಿದೆ.
ಈ ದಾಳಿಗಳಿಂದ ಗುಪ್ತ ವ್ಯವಹಾರದ ಮೂಲಕ ನಡೆಸಿದ ಒಟ್ಟು 215 ಕೋಟಿ ನಗದು ಹಣವನ್ನು ಪತ್ತೆಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವ್ಯಕ್ತಿಗಳ ಮೇಲೆ ತೆರಿಗೆ ವಂಚನೆ ಪ್ರಕರಣ ದಾಖಲಿಸಲಾಗುವುದು. ಸ್ಥಿರ ಆಸ್ತಿಯನ್ನು ಮಾರಾಟ ಮಾಡಲು 20 ಸಾವಿರಕ್ಕಿಂತ ಅಧಿಕ ನಗದು ಹಣವನ್ನು ಸ್ವೀಕರಿಸುವುದನ್ನು ನಿಷೇಧಿಸಲಾಗಿದ್ದು, ಐಟಿ ಕಾನೂನಿನ ಅಡಿ ಅವರ ವಿರುದ್ಧ ಪ್ರತ್ಯೇಕ ವಿಚಾರಣೆಗಳನ್ನು ನಡೆಸಲಾಗುವುದು. ಈ ಕಾನೂನು ಉಲ್ಲಂಘನೆ ಪ್ರಕರಣವು ತೆರಿಗೆ ವಂಚನೆಯ ಮೊತ್ತದ ಮೇಲೆ ಶೇ 100ರಷ್ಟು ದಂಡ ವಿಧಿಸಲು ಅರ್ಹವಾಗಿದೆ ಎಂದು ಇಲಾಖೆ ಹೇಳಿದೆ.
2 ಲಕ್ಷಕ್ಕಿಂತ ಅಧಿಕ ಮೊತ್ತದ ನಗದು ಹಣವನ್ನು ಇರಿಸಿಕೊಳ್ಳುವುದನ್ನು ಸಹ ನಿಷೇಧಿಸಲಾಗಿದೆ. ಈ ಕಾನೂನನ್ನು ಉಲ್ಲಂಘಿಸಿದರೆ ಸಹ ಇಲಾಖೆ ದಂಡ ವಿಧಿಸಲಿದೆ ಎಂದು ಹೇಳಿದೆ.