ದೆಹಲಿ ಹಿಂಸಾಚಾರದ ಫೋಟೋ-ವಿಡಿಯೋ ಬಳಸಿ ಭಯೋತ್ಪಾದನೆಗೆ ಪ್ರಚೋದನೆ
ನವದೆಹಲಿ, ಫೆಬ್ರವರಿ.29: ಅಂತಾರಾಷ್ಟ್ರೀಯ ಉಗ್ರಗಾಮಿ ಸಂಘಟನೆಗಳು ಉರಿಯುವ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿವೆ. ದೆಹಲಿಯಲ್ಲಿ ನಡೆದ ಹಿಂಸಾಚಾರದ ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಕಾರ್ಯಸಾಧನೆಗೆ ಬಳಸಿಕೊಳ್ಳುತ್ತಿವೆ.
ಐಸಿಸ್ ಸೇರಿದಂತೆ ವಿವಿಧ ಉಗ್ರಗಾಮಿ ಸಂಘಟನೆಗಳು ಒಂದು ಸಮುದಾಯದ ಜನರನ್ನು ಪ್ರೇರೇಪಿಸುವ ಉದ್ದೇಶದಿಂದ ಹಿಂಸಾಚಾರದ ಫೋಟೋ ಹಾಗೂ ವಿಡಿಯೋಗಳನ್ನು ವಾಟ್ಸಾಪ್, ಟೆಲಿಗ್ರಾಂ, ಡಾರ್ಕ್ ನೆಟ್ ಗಳ ಮೂಲಕ ಹರಿ ಬಿಡುತ್ತಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಪರ ಮತ್ತು ವಿರೋಧಿ ಹೋರಾಟ ಹಿಂಸಾಚಾರಕ್ಕೆ ತಿರುಗಿದ್ದು. ನಡುರಸ್ತೆಯಲ್ಲಿ ಯುವಕರು ಪೊಲೀಸರ ವಿರುದ್ಧವೇ ಗನ್ ಹಿಡಿದು ನಿಂತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುತ್ತಿದೆ.
ದೆಹಲಿ ಹಿಂಸಾಚಾರಿಗಳಿಗೆ ಪಿಸ್ತೂಲ್ ಸಿಕ್ಕಿದ್ದು ಹೇಗೆ? ಸ್ಫೋಟಕ ಮಾಹಿತಿ
ಐಸಿಸ್ ಕಾರ್ಯಸಾಧನೆಗೆ ದೆಹಲಿ ಫೋಟೋಗಳ ಬಳಕೆ
ಭಾರತದಲ್ಲಿ ಜಿಹಾದ್ ಗಾಗಿ ಯುವಕರು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ಅವರ ಜೊತೆಗೆ ಉಳಿದವರೆಲ್ಲರೂ ಕೈ ಜೋಡಿಸಬೇಕಿದೆ ಎಂದ ಅರ್ಥದಲ್ಲಿ ಸಂದೇಶಗಳನ್ನು ಹರಿ ಬಿಡಲಾಗುತ್ತಿದೆ. ಆ ಮೂಲಕ ಹಿಂಸಾಚಾರಕ್ಕೆ ಪ್ರಚೋದಿಸುವುದರ ಜೊತೆಗೆ ಉಗ್ರವಾದವನ್ನು ಬೆಳೆಸುವ ಷಡ್ಯಂತ್ರವನ್ನು ಮಾಡಲಾಗುತ್ತಿದೆ. ಅಲ್ಲದೇ, ಸ್ವಯಂಪ್ರೇರಿತವಾಗಿ ಈ ಹೋರಾಟಕ್ಕೆ ಕೈ ಜೋಡಿಸುವವರು ತಮ್ಮ ಸಂಘಟನೆಗೆ ಸೇರುವಂತೆ ಪ್ರಚೋದನೆ ನೀಡಲಾಗುತ್ತಿದೆ.
ಅಸಾದುದ್ದೀನ್ ಮತ್ತು ಕನ್ಹಯ್ಯ ಇಲ್ಲಿ ಸ್ವಾತಂತ್ರ್ಯ ಹೋರಾಟಗಾರರು
ಕಳೆದ ಫೆಬ್ರವರಿ.27ರಂದು ಮ್ಯಾಗಜಿನ್ ಒಂದರಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಕನ್ಹಯ್ಯ ಕುಮಾರ್ ಕುರಿತು ವಿಶೇಷ ವರದಿಗಳನ್ನು ಪ್ರಕಟಿಸಲಾಗಿದೆ. ಅದರಲ್ಲಿ ಇಬ್ಬರು ನಾಯಕರನ್ನು ಸ್ವಾತಂತ್ರ್ಯಗಾರರು ಎನ್ನುವಂತೆ ಬಿಂಬಿಸಲಾಗಿದೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಚೋದನಕಾರಿ ಹೇಳಿಕೆ ಮತ್ತು ಸಂದೇಶಗಳ ಹಂಚಿಕೆ
ದೇಶದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಾ ನಕಲಿ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗುತ್ತಿದೆ ಎಂಬುದು ಕೇಂದ್ರ ತನಿಖೆ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ, ವದಂತಿಗಳನ್ನು ಹರಡುತ್ತಿರುವವರ ಮೇಗೆ ತೀವ್ರ ನಿಗಾ ವಹಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಳ್ಳು ಸುದ್ದಿ ಹರಡುವ ತಾಣಗಳ ಮೇಲೆ ತೀವ್ರ ನಿಗಾ
ಇನ್ನು, ಹಿಂಸಾಚಾರಕ್ಕೆ ಪ್ರೇರಿಸುವಂತಾ ಸಂದೇಶ, ವಿಡಿಯೋ ಮತ್ತು ಫೋಟೋಗಳನ್ನು ಯಾರು ಹೆಚ್ಚಾಗಿ ಶೇರ್ ಮಾಡುತ್ತಿದ್ದಾರೆ. ಈ ಸಂದೇಶಗಳ ಮೂಲ ಎಲ್ಲಿದೆ ಎಂಬುದನ್ನು ಟ್ರ್ಯಾಕ್ ಮಾಡಲಾಗುತ್ತಿದೆ. ಸುಳ್ಳು ಸುದ್ದಿ ಮತ್ತು ವದಂತಿಗಳನ್ನು ಹರಡುವ ತಾಣಗಳನ್ನು ಬ್ಲಾಕ್ ಮಾಡಲಾಗುತ್ತದೆ ಎಂದು ದೆಹಲಿ ಕ್ರೈಂ ಬ್ರ್ಯಾಂಚ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.