ಏಪ್ರಿಲ್ 30ರವರೆಗೆ ರೈಲು ಸಂಚಾರವಿಲ್ಲ: ಮುಂಗಡ ಕಾಯ್ದಿರಿಸಿದ್ದವರಿಗೆ ಹಣ ವಾಪಸ್
ನವದೆಹಲಿ, ಏಪ್ರಿಲ್ 7: ಏಪ್ರಿಲ್ 30ರವರೆಗೆ ಯಾವುದೇ ರೈಲು ಸಂಚರಿಸುವುದಿಲ್ಲ ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಹಾಗೆಯೇ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದ್ದವರಿಗೆ ಸಂಪುರ್ಣ ಹಣವನ್ನು ಹಿಂದಿರುಗಿಸುವುದಾಗಿ ತಿಳಿಸಿದೆ. ಏಪ್ರಿಲ್ 14ರಂದು ಲಾಕ್ಡೌನ್ ಮುಗಿದ ಬಳಿಕ ರೈಲುಗಳ ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇತ್ತು. ಆದರೆ ರೈಲ್ವೆ ಇಲಾಖೆ ಇದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ.
ದೇಶದಲ್ಲಿ ಕೊರೊನಾ ವೈರಸ್ ಸೋಂಕು ಇನ್ನೂ ಕೂಡ ಹೆಚ್ಚಾಗುತ್ತಿರುವ ಕಾರಣ ರೈಲು ಕಾರ್ಯಾಚರಣೆಯನ್ನು ಈ ತಿಂಗಳ ಅಂತ್ಯದವರೆಗೆ ಮುಂದೂಡಿದೆ.
ಖಾಸಗಿ ರೈಲುಗಳು ಸೇರಿ ಯಾವುದೇ ರೈಲಿಗೆ ಮುಂಗಡ ಟಿಕೆಟ್ ಕಾಯ್ದಿರಿಸಿದ್ದವರಿಗೆ ಸಂಪೂರ್ಣ ಮೊತ್ತ ಹಿಂದಕ್ಕೆ ಕೊಡಲಾಗುವುದು ಎಂದು ಐಆರ್ಸಿಟಿಸಿ ಸ್ಪಷ್ಟಪಡಿಸಿದೆ.
ಐಆರ್ಸಿಟಿಸಿ ವತಿಯಿಂದ 3 ಖಾಸಗಿ ರೈಲು- 2 ತೇಜಸ್ ಹಾಗೂ ಒಂದು ಕಾಶಿ ಮಹಾಕಾಲ್ ಎಕ್ಸ್ಪ್ರೆಸ್ ರೈಲಿಗೂ ಈ ನಿರ್ಧಾರ ಅನ್ವಯವಾಗಲಿದೆ.
ಭಾರತದಲ್ಲಿ ಒಟ್ಟು 4421 ಕೊರೊನಾ ಪ್ರಕರಣಗಳಿವೆ. 114 ಮಂದಿ ಮೃತಪಟ್ಟಿದ್ದಾರೆ. ಕೇರಳದಲ್ಲಿ 327 ಮಂದಿ ಕೊರೊನಾ ಸೋಂಕಿತರಿದ್ದಾರೆ. ಅದರಲ್ಲಿ 58 ಮಂದಿ ಗುಣಮುಖರಾಗಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದ ಕಾರಣ ರೈಲು, ವಿಮಾನ, ಬಸ್ಗಳ ಸೇವೆ ಸ್ಥಗಿತಗೊಳಿಸಲಾಗಿತ್ತು.