IRCTC ಹಗರಣ : ಲಾಲೂ ಪ್ರಸಾದ್ ಯಾದವ್ ಗೆ ಮಧ್ಯಂತರ ಜಾಮೀನು
ನವದೆಹಲಿ, ಡಿಸೆಂಬರ್ 20: ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್(IRCTC)ನ ಎರಡು ಹೋಟೆಲ್ ಟೆಂಡರ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟಿನಿಂದ ಮಧ್ಯಂತರ ಜಾಮೀನು ಸಿಕ್ಕಿದೆ.
ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ಅವರ ಪತ್ನಿ ರಾಬ್ರಿ ದೇವಿ, ಪುತ್ರ ತೇಜಸ್ವಿ ಯಾದವ್ ಅವರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಈಗ ಎಲ್ಲರಿಗೂ ಜಾಮೀನು ಸಿಕ್ಕಿದ್ದಂತಾಗಿದೆ.
ಲಾಲೂ ಪ್ರಸಾದ್ ಯಾದವ್ ವಿರುದ್ಧ ಸಂಚು ರೂಪಿಸಿ ಬಂಧಿಸಿತಾ ಸಿಬಿಐ?
ದೆಹಲಿಯ ಪಟಿಯಾಲ ಹೌಸ್ ಕೋರ್ಟಿನ ವಿಶೇಷ ನ್ಯಾಯಾಧೀಶರಾದ ಅರುಣ್ ಭಾರದ್ವಾಜ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ, ಜಾಮೀನು ಮಂಜೂರು ಮಾಡಿದ್ದಾರೆ. ಲಾಲೂ ಅವರಿಗೆ ಅನಾರೋಗ್ಯದಿಂದಾಗಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ.
ಲಾಲೂ ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ನ್ಯಾಯಾಲಯವು ಕೇಂದ್ರ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಲಾಲೂಗೆ ಸಿಕ್ಕಿದೆ ಮಧ್ಯಂತರ ಜಾಮೀನು
ಲಾಲು ಅವರು ರೈಲ್ವೆ ಸಚಿವರಾಗಿದ್ದ 2004-2009ರ ಅವಧಿಯಲ್ಲಿ ರಾಂಚಿ ಮತ್ತು ಪುರಿಯಲ್ಲಿ ಐಆರ್ಸಿಟಿಸಿಯ ಎರಡು ಹೋಟೆಲ್ಗಳ ನಿರ್ವಹಣೆಯ ಗುತ್ತಿಗೆಯನ್ನು ಖಾಸಗಿ ಕಂಪನಿಯೊಂದಕ್ಕೆ ನೀಡುವಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣದಲ್ಲಿ ನೀಡಿರುವ ಮಧ್ಯಂತರ ಜಾಮೀನನ್ನು ಜನವರಿ 19ರ ವರೆಗೆ ವಿಸ್ತರಿಸಿದೆ.
ಸಿಬಿಐನಿಂದಲೂ ಪ್ರಕರಣದ ತನಿಖೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 05ರಂದು ಎಫ್ಐಆರ್ ಹಾಕಲಾಗಿದೆ. ರಾಂಚಿಯಲ್ಲಿನ ರೈಲ್ವೆ ಸುಪರ್ದಿಯ ಹೋಟೆಲ್ ಗಳನ್ನು ನಿರ್ವಹಿಸಲು ಸುಜಾತಾ ಹೋಟೆಲ್ ಗೆ ನೀಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಟೆಂಡರ್ ನಿಯಮ ಸೇರಿದಂತೆ ಎಲ್ಲಾ ನಿಯಮಗಳನ್ನು ಮೀರಲಾಗಿತ್ತು ಎಂದು ಸಿಬಿಐ ಆರೋಪಿಸಿದೆ.
ಭೂ ಪರಭಾರೆಯಲ್ಲೂ ಅಕ್ರಮ
2004 ರಿಂದ 14ರ ಅವಧಿಯಲ್ಲಿ ನಡೆದಿರುವ ಅಕ್ರಮ ಇದಾಗಿದ್ದು, ಸುಜಾತಾ ಹೋಟೆಲ್ ಗೆ ಅನುಕೂಲವಾಗುಂತೆ ಮಾಡಲಾಗಿದೆ ಎಂದು ಈ ಹಿಂದಿನ ಸಿಬಿಐ ಹೆಚ್ಚುವರಿ ನಿರ್ದೇಶಕ ರಾಕೇಶ್ ಆಸ್ತಾನ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಇದಲ್ಲದೆ, ಲಾಲೂ ಯಾದವ್ ಕುಟುಂಬಸ್ಥರಿಗೆ ಸೇರಿರುವ ಲಾರಾ ಪ್ರಾಜೆಕ್ಟ್ಸ್ ಸಂಸ್ಥೆಗೆ ಅಕ್ರಮವಾಗಿ ಭೂ ಪರಭಾರೆಯಾಗಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.
ಲಾಲೂ ಕುಟುಂಬಸ್ಥರಿಗೂ ಜಾಮೀನು ಸಿಕ್ಕಿದೆ
ಲಾಲೂ ಪ್ರಸಾದ್ ಯಾದವ್ ಅವರ ಪತ್ನಿ ರಾಬ್ರಿ ದೇವಿ, ತೇಜಸ್ವಿ ಯಾದವ್, ಪಿಸಿ ಗುಪ್ರಾ, ಲಾರಾ ಪ್ರಾಜೆಕ್ಟ್ ಎಲ್ಎಲ್ ಟಿ ಹಾಗೂ ಇನ್ನಿತರ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಲೈಟ್ ಮಾರ್ಕೆಟಿಂಗ್ ಗೆ ಸೇರಿರುವ 44.75 ಕೋಟಿ ರು ಗಳನ್ನು ವಶಪಡಿಕೊಳ್ಳಲಾಗಿದೆ