ಸೊಹ್ರಾಬುದ್ದಿನ್ ಎನ್ ಕೌಂಟರ್ ತನಿಖೆ ನಡೆಸುತ್ತಿದ್ದ ಐಪಿಎಸ್ ಅಮಾನತು
ನವದೆಹಲಿ, ಡಿಸೆಂಬರ್ 21: ಸೊಹ್ರಾಬುದ್ದಿನ್ ಮತ್ತು ತುಳಸಿರಾಮ್ ಪ್ರಜಾಪತಿ ಎನ್ ಕೌಂಟರ್ ಪ್ರಕರಣದ ತನಿಖೆ ನಡೆಸುತ್ತಿದ್ದ ಐಪಿಎಸ್ ಅಧಿಕಾರಿಯನ್ನು ಗೃಹಸಚಿವಾಲಯ ಅಮಾನತುಗೊಳಿಸಿದೆ.
ಗುಜರಾತ್ ಕೆಡರ್ ನ 1992 ರ ಬ್ಯಾಚಿನ ಐಪಿಎಸ್ ಅಧಿಕಾರಿ ರಜನೀಶ್ ರೈ ಸಿಐಎಟಿ(Counter Insurgency and Anti-Terrorism) ಮತ್ತು ಸಿಆರ್ ಪಿಎಫ್(Central Reserve Police Force) ನ ಮುಖ್ಯಾಧಿಕಾರಿಯಾಗಿ ಆಂಧ್ರಪ್ರದೇಶದ ಚಿತ್ತೂರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಸೊಹ್ರಾಬುದ್ದಿನ್ ಕೇಸ್: ಡಿ.21ರಂದು ಸಿಬಿಐ ನ್ಯಾಯಾಲಯದಿಂದ ತೀರ್ಪು
ಕಳೆದ ಆಗಸ್ಟ್ ನಲ್ಲಿ ಸ್ವಯಂ ನಿವೃತ್ತಿ(ವಿಆರ್ ಎಸ್)ಗೆ ಅರ್ಜಿ ಹಾಕಿದ್ದ ರಜನೀಶ್ ತಮಗೆ ವಿಆರ್ ಎಸ್ ಗೆ ಅನುಮತಿ ದೊರೆಯದಿದ್ದರೂ ಕಚೇರಿಗೆ ಹಲವು ತಿಂಗಳಿನಿಂದ ಗೈರಾಗಿದ್ದರು. ಆದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ ಎಂದು ಗೃಹಸಚಿವಾಲಯ ಹೇಳಿದೆ.
ರಾಜಸ್ಥಾನ ಮತ್ತು ಗುಜರಾತ್ ನ ಜಂಟಿ ಪೊಲೀಸ್ ತಂಡ ಸೊಹ್ರಾಬುದ್ದಿನ್ ನನ್ನು 2005ರಲ್ಲಿ ಮತ್ತು ಆತನ ಹತ್ತಿರದ ಸಹಚರ ತುಳಸಿರಾಮ್ ಪ್ರಜಾಪತಿಯನ್ನು 2006ರಲ್ಲಿ ಎನ್ಕೌಂಟರ್ ಮಾಡಿ ಸಾಯಿಸಿತ್ತು. ಈವೆರಡೂ ಎನ್ಕೌಂಟರ್ ಗಳು ನಕಲಿ ಎಂದು ಆರೋಪಿಸಲಾಗಿತ್ತು.
ಸೊಹ್ರಾಬುದ್ದಿನ್, ಪ್ರಜಾಪತಿ ಎನ್ಕೌಂಟರ್ ನಕಲಿ : ಸಿಬಿಐ ವಾದ ಅಂತಿಮ
ಈ ಪ್ರಕರಣದ ತೀರ್ಪನ್ನು ಇಂದು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಲಿದೆ.