ಮಾಜಿ ವಿತ್ತ ಸಚಿವರಿಗೆ ಸದ್ಯ ಜೈಲೇ ಫಿಕ್ಸ್: ED ಗೆ ಸುಪ್ರೀಂಕೋರ್ಟ್ ನೋಟಿಸ್!
ನವದೆಹಲಿ, ನವೆಂಬರ್.20: ಐಎನ್ಎಕ್ಸ್ ಮೀಡಿಯಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಪರಂ ಜೈಲುವಾಸ ಮುಂದುವರಿಕೆ ಆಗಿದೆ. ನವೆಂಬರ್.26ರವರೆಗೂ ಸೆರೆವಾಸ ಮುಂದುವರಿಯಲಿದೆ.
ಇಂದು ಪಿ.ಚಿದಂಬರಂ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಕಳೆದ ಸೋಮವಾರವಷ್ಟೇ ಸುಪ್ರೀಂಕೋರ್ಟ್ ನೂತನ ನ್ಯಾಯಮೂರ್ತಿ ಎಸ್.ಎ.ಬೊಬ್ದೆ, ಸೂಕ್ತಪೀಠಕ್ಕೆ ವಿಚಾರಣೆಯನ್ನು ನೀಡುವುದಾಗಿ ಆದೇಶಿದ್ದರು.
ಪಿ ಚಿದಂಬರಂಗೆ ಜಾಮೀನು ನಿರಾಕರಣೆ, ತಿಹಾರ್ ಜೈಲೇ ಗಟ್ಟಿ
ಕಳೆದ ನವೆಂಬರ್.15ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಪಿ.ಚಿದಂಬರಂ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ನವೆಂಬರ್.26ರವರೆಗೂ ಸೆರೆವಾಸ ತಪ್ಪಿದ್ದಲ್ಲ:
ಸುಪ್ರೀಂಕೋರ್ಟ್ ಏನೋ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಉತ್ತರ ನೀಡುವಂತೆ ನೋಟಿಸ್ ಜಾರಿಗೊಳಿಸಿದೆ. ಆದರೆ, ನವೆಂಬರ್.26ರವರೆಗೂ ಮಾಜಿ ವಿತ್ತ ಸಚಿವ ಚಿದಂಬರಂ ಅವರಿಗೆ ಜೈಲುವಾಸವೇ ಗತಿಯಾಗಿದೆ. ಕಳೆದ ಬಾರಿ ದೆಹಲಿಯಲ್ಲಿ ಹೈಕೋರ್ಟ್ ನಲ್ಲಿ ವಾದ ಮಂಡಿಸಿದ್ದ ಇಡಿ ಅಧಿಕಾರಿಗಳು, ಐಎನ್ಎಕ್ಸ್ ಮೀಡಿಯಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಚಿದಂಬರಂ ಪ್ರಮುಖ ಪಾತ್ರ ವಹಿಸುವುದಾಗಿ ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು.
ಇನ್ನು, ಐಎನ್ಎಕ್ಸ್ ಅಕ್ರಮ ಹಣ ವರ್ಗಾವಣೆ ಕೇಸ್ ನಲ್ಲಿ ಮೊದಲ ಬಾರಿಗೆ ಆಗಸ್ಟ್.21ರಂದು ಸಿಬಿಐ ಅಧಿಕಾರಿಗಳು ಚಿದಂಬರಂ ಅವರನ್ನು ಬಂಧಿಸಿದ್ದರು. ಬಳಿಕ ಅಕ್ಟೋಬರ್.22ರಂದು ಸುಪ್ರೀಂಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಆದರೆ, ಅಕ್ಟೋಬರ್.16ರಂದು ಇಡಿ ಅಧಿಕಾರಿಗಳು ಚಿದಂಬರಂ ಅವರನ್ನು ಬಂಧಿಸಿದ್ದು, ಕೋರ್ಟ್ ಚಿದಂಬರಂರನ್ನು ನವೆಂಬರ್.27ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.