106 ದಿನದ ಬಳಿಕ ತಿಹಾರ್ ಜೈಲಿನಿಂದ ಹೊರಬಂದ ಚಿದಂಬರಂ
ನವದೆಹಲಿ, ಡಿಸೆಂಬರ್ 4: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ 106 ದಿನ ತಿಹಾರ್ ಜೈಲಿನಲ್ಲಿ ಕಳೆದ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ, ಬುಧವಾರ ಸಂಜೆ ಬಿಡುಗಡೆಯಾದರು.
'106 ದಿನ ಜೈಲಿನಲ್ಲಿ ಕಳೆದ ಬಳಿಕವೂ ಒಂದೇ ಒಂದು ಆರೋಪವನ್ನೂ ನನ್ನ ಮೇಲೆ ನಿಗದಿ ಮಾಡಲು ಸಾಧ್ಯವಾಗಿಲ್ಲ' ಎಂದು ಜೈಲಿನಿಂದ ಹೊರಬಂದ ಬಳಿಕ ಚಿದಂಬರಂ ಹೇಳಿದರು.
ಆದರೆ ಅವರು ಪ್ರಕರಣದ ಕುರಿತು ಯಾವುದೇ ಹೇಳಿಕೆ ನೀಡಲು ನಿರಾಕರಿಸಿದರು. ಚಿದಂಬರಂ ಅವರಿಗೆ ಜಾಮೀನು ನೀಡುವ ವೇಳೆ ಸುಪ್ರೀಂಕೋರ್ಟ್, ಪ್ರಕರಣದ ಬಗ್ಗೆ ಯಾವುದೇ ಪತ್ರಿಕಾ ಸಂದರ್ಶನ ಅಥವಾ ಸಾರ್ವಜನಿಕ ಹೇಳಿಕೆ ನೀಡಬಾರದು ಎಂದು ಷರತ್ತು ವಿಧಿಸಿದೆ.
ಚಿದಂಬರಂ ಸೆರೆವಾಸಕ್ಕೆ ದ್ವೇಷ, ಪ್ರತೀಕಾರ ಕಾರಣ: ರಾಹುಲ್ ಗಾಂಧಿ ಆರೋಪ
'ಈ ಪ್ರಕರಣದ ಕುರಿತು ನಾನು ಮಾತನಾಡುವಂತಿಲ್ಲ. ನಾನು ನ್ಯಾಯಾಲಯದ ಆದೇಶವನ್ನು ಪಾಲಿಸುತ್ತೇನೆ. ಆದರೆ 106 ದಿನಗಳ ಕಾಲ ಜೈಲಿನಲ್ಲಿ ಇರಿಸಿದರೂ ನನ್ನ ವಿರುದ್ಧ ಒಂದೇ ಒಂದು ಆರೋಪ ನಿಗದಿಯಾಗಿಲ್ಲ' ಎಂದರು.
'ನಾಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಲಿದ್ದೇನೆ. 106 ದಿನಗಳ ಬಳಿಕ ಹೊರಬಂದು ಸ್ವಾತಂತ್ರ್ಯದ ಉಸಿರಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ' ಎಂದು ಹೇಳಿದರು.
ಜೈಲಿನಿಂದ ಹೊರಬಂದ ಚಿದಂಬರಂ ಅವರನ್ನು ಸ್ವಾಗತಿಸಲು ನೂರಾರು ಕಾಂಗ್ರೆಸ್ ಕಾರ್ಯಕರ್ತರು ತಿಹಾರ್ ಜೈಲಿನ ಹೊರಭಾಗದಲ್ಲಿ ಸೇರಿದ್ದರು. ಇದರಿಂದ ಜೈಲಿನ ಸುತ್ತಮುತ್ತ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು.
ಐಎನ್ಎಕ್ಸ್ ಮೀಡಿಯಾ: ಪಿ ಚಿದಂಬರಂಗೆ ಸುಪ್ರೀಂ ವಿಧಿಸಿರುವ ಷರತ್ತುಗಳೇನು?
ಅಪ್ಪನನ್ನು ಸ್ವಾಗತಿಸಲು ಹಾಜರಿದ್ದ ಸಂಸದ ಕಾರ್ತಿ ಚಿದಂಬರಂ, ಜತೆಗೆ ಚಿದಂಬರಂ ಅವರು ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತೆರಳಿದರು.
ಜಸ್ಟೀಸ್ ಆರ್ ಬಾನುಮತಿ, ಎಎಸ್ ಬೋಪಣ್ಣ ಹಾಗೂ ಹೃತಿಕ್ ರಾಯ್ ಅವರಿದ್ದ ನ್ಯಾಯಪೀಠ, ಜಾರಿ ನಿರ್ದೇಶನಾಲಯವು ಚಿದಂಬರಂ ವಿರುದ್ಧ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೆಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂಗೆ ಜಾಮೀನು
ಜಾರಿನಿರ್ದೇಶನಾಲಯವು ನಡೆಸುತ್ತಿರುವ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ತನಿಖೆ ವಿಚಾರಣೆಗೆ ಕರೆದಾಗ ತಪ್ಪದೇ ಹಾಜರಾಗಬೇಕು. ತನಿಖೆ, ವಿಚಾರಣೆ, ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ಹೇಳಿಕೆ ನೀಡುವಂತಿಲ್ಲ. ವಿದೇಶಕ್ಕೆ ಹಾರುವಂತಿಲ್ಲ. ಪಾಸ್ ಪೋರ್ಟ್ ನ್ಯಾಯಾಲಯದ ವಶಕ್ಕೆ ನೀಡಬೇಕು. ಸಾಕ್ಷ್ಯ ನಾಶ ಮಾಡುವಂತಿಲ್ಲ. ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂತಿಲ್ಲ. 2 ಲಕ್ಷ ರು ವೈಯಕ್ತಿಕ ಬಾಂಡ್ ಶ್ಯೂರಿಟಿ ಸಲ್ಲಿಸಬೇಕು ಎಂದು ಸೂಚಿಸಿದೆ.