ಐಎನ್ಎಕ್ಸ್ ಮೀಡಿಯಾ ಕೇಸ್: ಚಿದಂಬರಂ, ಕಾರ್ತಿಗೆ ಖುದ್ದು ಹಾಜರಿಯಿಂದ ವಿನಾಯಿತಿ
ನವದೆಹಲಿ, ಏಪ್ರಿಲ್ 7: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿನ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದ ವಿಚಾರಣೆಗೆ ಖುದ್ದು ಹಾಜರಾತಿಯಿಂದ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಮತ್ತು ಅವರ ಮಗ, ಸಂಸದ ಕಾರ್ತಿ ಚಿದಂಬರಂ ಅವರಿಗೆ ದೆಹಲಿ ನ್ಯಾಯಾಲಯವೊಂದು ವಿನಾಯಿತಿ ನೀಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಸಲ್ಲಿಸಿದ ಪೂರಕ ಆರೋಪಪಟ್ಟಿಯನ್ನು ಮಾರ್ಚ್ 24ರಂದು ನ್ಯಾಯಾಲಯ ಪರಿಗಣಿಸಿದ ಬಳಿಕ ಆರೋಪಿಗಳಾದ ಚಿದಂಬರಂ ಮತ್ತು ಕಾರ್ತಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.
INX media case: ಪಿ ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿಗೆ ಸಮನ್ಸ್
ತಂದೆ ಮತ್ತು ಮಗನ ಪರವಾಗಿ ಹಾಜರಿದ್ದ ವಕೀಲ ಅರ್ಷದೀಪ್ ಸಿಂಗ್ ಅವರು ಖುದ್ದು ಹಾಜರಿಯಿಂದ ಇಬ್ಬರಿಗೂ ವಿನಾಯಿತಿ ನೀಡುವಂತೆ ಕೋರಿದ್ದರು. ಅದಕ್ಕೆ ನ್ಯಾಯಾಧೀಶ ಎಂಕೆ ನಾಗಪಾಲ್ ಒಪ್ಪಿಗೆ ನೀಡಿದರು. ಇಬ್ಬರೂ ಅವರ ಪಕ್ಷದ 'ತಾರಾ ಪ್ರಚಾರಕ'ರಾಗಿದ್ದು, ತಮಿಳುನಾಡು ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ ಎಂದು ವಕೀಲರು ಹೇಳಿದ್ದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 16ಕ್ಕೆ ಮುಂದೂಡಲಾಗಿದೆ.
2019ರ ಆಗಸ್ಟ್ 21ರಂದು ಐಎನ್ಎಕ್ಸ್ ಮೀಡಿಯಾ ಕೇಸ್ನಲ್ಲಿ ಪಿ. ಚಿದಂಬರಂ ಅವರನ್ನು ಸಿಬಿಐ ಬಂಧಿಸಿತ್ತು. 2019ರ ಅಕ್ಟೋಬರ್ 16ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಇ.ಡಿ ಬಂಧಿಸಿತ್ತು. 2019ರ ಅಕ್ಟೋಬರ್ 22ರಂದು ಸಿಬಿಐ ಪ್ರಕರಣದಲ್ಲಿ ಮತ್ತು 2019ರ ಡಿ. 4ರಂದು ಇ.ಡಿ ಪ್ರಕರಣದಲ್ಲಿ ಜಾಮೀನು ದೊರಕಿತ್ತು.
ಚಿದಂಬರಂ, ಕಾರ್ತಿ ವಿರುದ್ಧ ಪಾಸ್ವರ್ಡ್ ಸುರಕ್ಷಿತ ಚಾರ್ಜ್ ಶೀಟ್ ಸಲ್ಲಿಕೆ
ಚಿದಂಬರಂ ಅವರ ಮಗ ಕಾರ್ತಿ ಅವರನ್ನು 2018ರ ಫೆಬ್ರವರಿಯಲ್ಲಿ ಸಿಬಿಐ ಬಂಧಿಸಿತ್ತು. 2018ರ ಮಾರ್ಚ್ನಲ್ಲಿ ಅವರಿಗೆ ಜಾಮೀನು ಮಂಜೂರಾಗಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರಿಗೆ ದೆಹಲಿ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿತ್ತು.