ಕಿರಣ್ ಬೇಡಿ ಕರೆತಂದಿದ್ದು ಬಿಜೆಪಿ ಮಾಡಿದ ದೊಡ್ಡ ತಪ್ಪು
ನವದೆಹಲಿ, ಫೆ. 10: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕ ಹೀನಾಯ ಸೋಲಿಗೆ ಕಾರಣವೇನು? ಯೋಚಿಸುತ್ತಾ ಸಾಗಿದರೆ ಹಲವು ಕಾರಣಗಳು ಸಿಗುತ್ತವೆ. ಪ್ರಚಾರ ಸಂದರ್ಭದಲ್ಲಿ ಕೇಜ್ರಿವಾಲ್ ಎದುರಿಸಲು ಋಣಾತ್ಮಕವಾಗಿ ಚಿಂತಿಸಿದ್ದು ಅಥವಾ ಅತಿಯಾದ ರಕ್ಷಣಾತ್ಮಕ ಆಟವಾಡಲು ಯತ್ನಿಸಿದ್ದು ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಪ್ರಚಾರ ಸಂದರ್ಭದಲ್ಲಿ ಬಿಜೆಪಿ ಹಲವು ತಪ್ಪುಗಳನ್ನು ಮಾಡಿದೆ. ಮುತ್ಸದ್ಧಿ ಅಲ್ಲದ ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಡಿದ್ದು ದೊಡ್ಡ ಕಾರಣವಲ್ಲದಿದ್ದರೂ ಸೋಲಿಗೆ ಒಂದು ಕಾರಣವಾಗಿಬಿಟ್ಟಿತು.
ಆದರೆ, ಪ್ರಚಾರ ಸಂದರ್ಭ ಅರವಿಂದ್ ಕೇಜ್ರಿವಾಲ್ ಸರಿಯಾದ ಹೆಜ್ಜೆ ಇಟ್ಟಿದ್ದಾರೆ. ಇನ್ನು ಆಡಳಿತ ಹೇಗೆ ನಡೆಸ್ತಾರೆ ಎಂಬುದನ್ನು ನೋಡಬೇಕಷ್ಟೇ. ಈ ಕುರಿತು 'ಒನ್ಇಂಡಿಯಾ ಕನ್ನಡ' ರಾಜಕೀಯ ತಂತ್ರಜ್ಞರನ್ನು ಪ್ರಶ್ನಿಸಿದಾಗ ಅವರು ಪ್ರತಿಕ್ರಿಯಿಸಿದ್ದು ಹೀಗೆ. [ಬಿಜೆಪಿಯದ್ದು ನೆಗೆಟಿವ್ ಪಬ್ಲಿಸಿಟಿ]
ಬಿಜೆಪಿಗೆ ಭಾರೀ ಪ್ರಮಾಣದಲ್ಲಿ ಸೋಲುಂಡಿದ್ದು ಏಕೆ?
ಖ್ಯಾತ ರಾಜಕೀಯ ತಂತ್ರಜ್ಞ ಡಾ. ಸಂದೀಪ್ ಶಾಸ್ತ್ರಿ ಪ್ರಕಾರ "ಬಿಜೆಪಿ ಪ್ರಚಾರ ಸಂದರ್ಭ ತೀವ್ರ ಋಣಾತ್ಮಕ ಅಥವಾ ತೀವ್ರ ರಕ್ಷಣಾತ್ಮಕವಾಗಿ ವರ್ತನೆ ತೋರಿತು. ಬಿಜೆಪಿ ಹಿಡಿತದಲ್ಲಿದ್ದ ಪರಿಸ್ಥಿತಿ ಪ್ರಚಾರ ಸಂದರ್ಭವೇ ತಪ್ಪಿಹೋಯಿತು.
ಬಿಜೆಪಿ ಮುಖಂಡ ಜಿ.ವಿ.ಎಲ್. ನರಸಿಂಹ ರಾವ್ ಪ್ರತಿಕ್ರಿಯಿಸಿ, "ಇದು ಬಿಜೆಪಿ ವಿರುದ್ಧ ಬಿದ್ದ ಜನಮತವಲ್ಲ. ಆದರೆ, ಆಮ್ ಆದ್ಮಿ ಪರವಾಗಿದೆ. ಆದ್ದರಿಂದ ಅವರನ್ನು ಅಭಿನಂದಿಸುತ್ತೇವೆ" ಎಂದು ಹೇಳಿದ್ದಾರೆ. [ಕೇಜ್ರಿವಾಲ್ ಗೆ Z+ ಭದ್ರತೆ]
ಕಿರಣ್ ಬೇಡಿ ತಂದಿದ್ದು ದೊಡ್ಡ ತಪ್ಪೇ?
ಡಾ. ಶಾಸ್ತ್ರಿ ಹೇಳುವ ಪ್ರಕಾರ ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಡಿದ್ದು ಬಿಜೆಪಿಯ ರಕ್ಷಣಾತ್ಮಕ ತಂತ್ರಕ್ಕೆ ಉದಾಹರಣೆ. ಅವರ ಕಾರಣದಿಂದಲೇ ಪಕ್ಷ ಎರಡು ಭಾಗವಾಯಿತು.
ಜನರ ಗಮನವನ್ನು ಅರವಿಂದ್ ಕೇಜ್ರಿವಾಲ್ ಅವರಿಂದ ಬೇರೆಡೆ ತಿರುಗಿಸುವಲ್ಲಿ ಕಿರಣ್ ಬೇಡಿ ವಿಫಲರಾದರು. ಬಿಜೆಪಿಗೆ ಮತ ತಂದುಕೊಡುವಲ್ಲಿಯೂ ಸಫಲರಾಗಲಿಲ್ಲ. ಒಟ್ಟಿನಲ್ಲಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ್ದು ಬಿಜೆಪಿಯ ಅತ್ಯಂತ ದೊಡ್ಡ ತಪ್ಪು ನಡೆ ಎಂದು ಶಾಸ್ತ್ರಿ ಹೇಳಿದರು. [ಎಕ್ಸಿಟ್ ಪೋಲ್ ಗಳೂ ಧೂಳೀಪಟ]
ಪರಿಸ್ಥಿತಿ ಕೇಜ್ರಿವಾಲ್ಗೆ ಪೂರಕವಾಗಿದ್ದು ಯಾವಾಗ?
ಈ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಸಂಪೂರ್ಣ ವಿಭಿನ್ನ ತಂತ್ರ ಅನುಸರಿಸಿದರು. ಈ ಚುನಾವಣೆ ಪ್ರಚಾರ ಸಂದರ್ಭ ಅವರು ಹೆಚ್ಚು ತಪ್ಪು ಮಾಡಲಿಲ್ಲ. ತಾವೋರ್ವ ಪಲಾಯನವಾದಿ ಎಂಬ ಅಭಿಪ್ರಾಯವನ್ನೂ ದೂರ ಮಾಡಿದರು. ಜನರ ಹತ್ತಿರ ಬಂದು ಕ್ಷಮೆಯಾಚಿಸಿದರು. ಕ್ಷಮೆ ಕೇಳುವವರ ಮೇಲೆ ಜನರು ಕನಿಕರ ತೋರುತ್ತಾರೆ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟರು. [ಭ್ರಷ್ಟಾಚಾರ ವಿರುದ್ಧ ಹೋರಾಡಿ]
ದೆಹಲಿ ಫಲಿತಾಂಶ ಬಿಹಾರದ ಮೇಲೂ ಪರಿಣಾಮ ಬೀರುತ್ತಾ?
ಬಿಹಾರದಲ್ಲಿ ಭಿನ್ನ ಆಟ ನಡೆಯುತ್ತಿದೆ. ಅಲ್ಲಿ ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷಗಳ ನಡುವೆ ಸ್ಪರ್ಧೆ ನಡೆಯಲಿದೆ. ಇಲ್ಲಿಯೂ ಕಾಂಗ್ರೆಸ್ ಲೆಕ್ಕಕ್ಕಿಲ್ಲ. ದೆಹಲಿಯಲ್ಲಿ ಬಿಜೆಪಿ ಸೋತಿರುವ ಕಾರಣ ಬಿಜೆಪಿಯೇತರ ಪಕ್ಷಗಳು ಒಂದಾಗುತ್ತವೆ. ಇದನ್ನು ಬಿಹಾರ ಚುನಾವಣೆಯಲ್ಲಿ ನೋಡಬಹುದು ಎಂದರು.