ಭಾರತ ಬಿಟ್ಟು ಪರಾರಿ ಆಗಿರುವ ನಿತ್ಯಾನಂದ ವಿರುದ್ಧ ಬ್ಲೂ ಕಾರ್ನರ್ ನೊಟೀಸ್
ನವದೆಹಲಿ, ಜನವರಿ 22: ಭಾರತ ಬಿಟ್ಟು ಪರಾರಿ ಆಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಪತ್ತೆಗೆ ಇಂಟರ್ಪೋಲ್ ಬ್ಲೂ ಕಾರ್ನರ್ ನೊಟೀಸ್ ಹೊರಡಿಸಿದೆ.
ಅತ್ಯಾಚಾರ, ಲೈಂಗಿಕ ಕಿರುಕುಳ, ಅಪಹರಣ, ಮಾನವ ಕಳ್ಳ ಸಾಗಾಣಿಕೆ ಆರೋಪಗಳನ್ನು ಹೊತ್ತಿರುವ ನಿತ್ಯಾನಂದ ಕಳೆದ ವರ್ಷ ಭಾರತ ಬಿಟ್ಟು ಪರಾರಿಯಾಗಿದ್ದು, ಗುಜರಾತ್ ಪೊಲೀಸರ ಒತ್ತಾಯದ ಮೇರೆಗೆ ಬ್ಲೂ ಕಾರ್ನರ್ ನೊಟೀಸ್ ಅನ್ನು ಇಂಟರ್ಪೋಲ್ ಹೊರಡಿಸಿದೆ.
ನಿತ್ಯಾನಂದ ಸ್ವಾಮಿ ಪ್ರಕರಣ: ಯುವತಿಯಿಂದ ಸ್ಫೋಟಕ ವಿಡಿಯೋ ಬಹಿರಂಗ
ನಿತ್ಯಾನಂದ ಭಾರತದಿಂದ ಹೊರಗೆ ಅಜ್ಞಾತ ಸ್ಥಳವೊಂದರಲ್ಲಿದ್ದು ಅಲ್ಲಿಂದಲೇ ವಿಡಿಯೋಗಳನ್ನು ಹರಿಬಿಡುತ್ತಿದ್ದಾನೆ. ತಾನು ಹೊಸದೊಂದು ದೇಶವನ್ನು ಕಟ್ಟುವುದಾಗಿ, ಅದೂ ಏಕೈಕ ಹಿಂದೂ ರಾಷ್ಟ್ರ ಆಗುವುದಾಗಿಯೂ ಹೇಳಿದ್ದ ನಿತ್ಯಾನಂದ ಹೊಸ ದೇಶದ ಧ್ವಜ, ಲಾಂಛನಗಳನ್ನು ಬಿಡುಗಡೆಗೊಳಿಸಿದ್ದ.
ನಿತ್ಯಾನಂದ ಇಕ್ವೆಡಾರ್ ನಲ್ಲಿದ್ದು ಅಲ್ಲಿ ಒಂದು ದ್ವೀಪ ಖರೀದಿಸಿದ್ದಾನೆ ಎಂಬ ಸುದ್ದಿಗಳು ಹರಿದಾಡಿದ್ದವು, ಆದರೆ ಈಕ್ವೆಡಾರ್ ದೇಶ ಆಡಳಿತವು ಈ ಸುದ್ದಿಗಳನ್ನು ನಿರಾಕರಿಸಿತು, ನಿತ್ಯಾನಂದ ತಮ್ಮ ದೇಶದಲ್ಲಿ ಇಲ್ಲವೆಂದು ಸ್ಪಷ್ಟಪಡಿಸಿತು.