ಜಾಗತಿಕ ಧ್ವನಿ: ದೆಹಲಿ ರೈತರ ಹೋರಾಟಕ್ಕೆ ಪಾಪ್ ಗಾಯಕಿ ರಿಹನ್ನಾ ಬೆಂಬಲ
ನವದೆಹಲಿ, ಫೆಬ್ರವರಿ.03: ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಅಂತಾರಾಷ್ಟ್ರೀಯ ಪಾಪ್ ಗಾಯಕಿ ರಿಹನ್ನಾ ಬೆಂಬಲ ವ್ಯಕ್ತಪಡಿಸಿದ್ದಾರೆ. ದೆಹಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ ಎನ್ನುವ ಬಗ್ಗೆ ಸಿಎನ್ಎಸ್ ಪ್ರಕಟಿಸಿದ ಸುದ್ದಿಯನ್ನು ಅವರು ಟ್ವೀಟ್ ಮಾಡಿದ್ದಾರೆ.
ಟ್ವಿಟರ್ ನಲ್ಲಿ 10 ಕೋಟಿಗೂ ಅಧಿಕ ಫಾಲೋವರ್ಸ್ ರನ್ನು ಹೊಂದಿರುವ ಪಾಪ್ ಗಾಯಕಿ ರಿಹನ್ನಾ ಅವರು, ಸಿಎಎನ್ ಸುದ್ದಿಯನ್ನು ಟ್ವೀಟ್ ಮಾಡಿದ್ದು, ನಾವೇಕೆ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ದೆಹಲಿಯಲ್ಲಿ ರೈತರ ಹೋರಾಟದ ಹಾದಿಗೆ ಸೀಮೆಂಟ್ ಗೋಡೆ, ಕಬ್ಬಿಣದ ಸೆರಳು!
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ಪಂಜಾಬ್ ಹಾಗೂ ಹರಿಯಾಣದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪಾಪ್ ಗಾಯಕಿ ರಿಹನ್ನಾ ಟ್ವೀಟ್ ಬಗ್ಗೆ ಮೆಚ್ಚುಗೆ:
ರೈತರ ಪ್ರತಿಭಟನೆ ಮತ್ತು ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಟ್ವೀಟ್ ಮಾಡಿರುವ ಅಂತಾರಾಷ್ಟ್ರೀಯ ಪಾಪ್ ಗಾಯಕಿ ರಿಹನ್ನಾ ಅವರ ಬಗ್ಗೆ ಟ್ವಿಟ್ಟಗರು ಮತ್ತು ಬಾಲಿವುಡ್ ನಟ-ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಿಹನ್ನಾ ಅವರು ಮಾಡಿರುವ ಟ್ವೀಟ್ ಗೆ ಒಂದೇ ಗಂಟೆಯಲ್ಲಿ ಲಕ್ಷಕ್ಕಿಂತ ಹೆಚ್ಚು ಲೈಕ್ ಬಂದಿದ್ದು, ಒಂದು ಲಕ್ಷಕ್ಕಿಂತ ಅಧಿಕ ಮಂದಿ ರೀ-ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ನಟ ರಿಚಾ ಚಾಂದ್ ಮತ್ತು ಸ್ವರ ಭಾಸ್ಕರ್, ದಿಲ್ಜಿತ್ ದೋಸಂಜ್, ತಾಪ್ಸಿ ಪನ್ನು, ಸೋನು ಸೂದ್, ಹಂಸನ್ ಮೆಹ್ತಾ, ಮೊಹಮ್ಮದ್ ಜಿಶಾನ್ ಆಯುಬ್, ದಿವ್ಯಾ ದತ್ತಾ, ನೇಹಾ ಶರ್ಮಾ ಅವರು ರೈತರ ಕುರಿತು ರಿಹನ್ನಾ ತೋರಿದ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರೈತರ ಹೋರಾಟಕ್ಕೆ ಬೆಂಬಲಿಸುವುದಾಗಿ ಹೇಳಿದ್ದಾರೆ.