'ಅಂತರ್ಜಾತಿಯೋ, ಅಂತರ್ ಧರ್ಮೀಯ ವಿವಾಹವೋ ಹೆಂಡತಿಗೆ ನಿಷ್ಠೆ ಇರಲಿ'
Recommended Video
ನವದೆಹಲಿ, ಸೆಪ್ಟೆಂಬರ್ 11: ಛತ್ತೀಸ್ ಗಡದಲ್ಲಿ ನಡೆದ ಅಂತರ್ ಧರ್ಮೀಯ ವಿವಾಹದ ವಿವಾದ ಪ್ರಕರಣವನ್ನು ಬುಧವಾರ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತು. ಹಿಂದೂ ಮಹಿಳೆಯನ್ನು ಮದುವೆಯಾದ ಮುಸ್ಲಿಂ ವ್ಯಕ್ತಿ ಹಿಂದೂ ಧರ್ಮಕ್ಕೆ ಮತಾಂತರ ಆಗಿದ್ದರು. ಪತ್ನಿಯ ಕುಟುಂಬದವರು ತನ್ನನ್ನು ಒಪ್ಪಿಕೊಳ್ಳಲಿ ಎಂಬ ಕಾರಣಕ್ಕೆ ಆತ ಹಾಗೆ ಮಾಡಿದ್ದರು.
ಆದರೆ, ಮಹಿಳೆಯ ಕುಟುಂಬದವರು 'ಇದೆಲ್ಲ ನಾಟಕ' ಎಂದು ಕರೆದಿದ್ದಾರೆ. ಅರುಣ್ ಮಿಶ್ರಾ ನೇತೃತ್ವದ ಪೀಠವು, ನಮಗೆ ಆ ಮಹಿಳೆಯ ಭವಿಷ್ಯದ ಬಗ್ಗೆ ಮಾತ್ರ ಕಾಳಜಿ. ಯಾವುದೇ ಅಂತರ್ ಧರ್ಮೀಯ, ಅಂತರ್ಜಾತಿ ವಿವಾಹಕ್ಕೆ ವಿರೋಧ ಮಾಡಲ್ಲ ಎಂದು ಹೇಳಿದೆ. ಇದರ ಜತೆಗೆ ಆ ವ್ಯಕ್ತಿ ತನ್ನ ಹೆಂಡತಿಗೆ ನಿಷ್ಠನಾದ ಗಂಡ ಹಾಗೂ ಅದ್ಭುತವಾದ ಪ್ರೇಮಿ ಆಗಿದ್ದರೆ ಸಾಕು ಎಂದು ಕೂಡ ಹೇಳಿದೆ.
ವೈರಲ್ ಆಯ್ತು ಹಿಂದೂ ಯುವತಿ, ಮುಸ್ಲಿಂ ಯುವಕನ ಪ್ರೇಮ ವಿವಾಹದ ಲಗ್ನ ಪತ್ರಿಕೆ
ಮಹಿಳೆಯ ತಂದೆ ಪರ ವಕೀಲರು, ಹೆಣ್ಣುಮಕ್ಕಳನ್ನು ಬಲೆಗೆ ಕೆಡವುವ ಜಾಲ ಇದು ಎಂದು ವಾದ ಮಂಡಿಸಿದ್ದಾರೆ. ಸತ್ಯ ಎಂದು ಸಾಬೀತು ಪಡಿಸಲು ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಹಿಂದೂ ಧರ್ಮಕ್ಕೆ ಮತಾಂತರ ಆಗಿ, ಆರ್ಯ ಸಮಾಜದಲ್ಲಿ ಮದುವೆ ಆದ ನಂತರ ಆ ವ್ಯಕ್ತಿ ತನ್ನ ಹೆಸರು ಬದಲಿಸಿದ್ದಾರಾ, ಜತೆಗೆ ಹೆಸರು ಬದಲಿಸಲು ಸರಿಯಾದ ಕಾನೂನು ಅನುಸರಿಸಿದ್ದಾರಾ ಎಂದು ಕೋರ್ಟ್ ಪ್ರಶ್ನಿಸಿದೆ.
ಇನ್ನು ಈ ಪ್ರಕರಣದ ಬಗ್ಗೆ ರಾಜ್ಯ ಸರಕಾರದಿಂದ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ಕೇಳಿದೆ ಮತ್ತು ಮಹಿಳೆಯು ತನ್ನ ಪರವಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.