ಪ್ರಧಾನಿ ಮೋದಿ ಮೇಲೆ ಉಗ್ರರ ದಾಳಿ ಸಾಧ್ಯತೆ: ಗುಪ್ತಚರ ಇಲಾಖೆ ಎಚ್ಚರಿಕೆ
ನವದೆಹಲಿ, ಡಿಸೆಂಬರ್ 20: ರಾಜಧಾನಿಯಲ್ಲಿ ಡಿ. 22ರಂದು ಬಿಜೆಪಿಯ ಬೃಹತ್ ಸಮಾವೇಶದ ವೇಳೆ ಪಾಕಿಸ್ತಾನ ಮೂಲದ ಉಗ್ರರ ಗುಂಪುಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆಗಳು ವರದಿ ನೀಡಿವೆ.
ದೆಹಲಿಯ ಅನಧಿಕೃತ ಕಾಲೊನಿಗಳನ್ನು ಅಧಿಕೃತಗೊಳಿಸುವ ಕೇಂದ್ರ ಸರ್ಕಾರದ ಉದ್ದೇಶದ ಕುರಿತು ಬಿಜೆಪಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಡಿ. 22ರಂದು ಬೃಹತ್ ಸಮಾವೇಶ ಆಯೋಜಿಸಿದೆ. ಈ ವೇಳೆ ಉಗ್ರರ ಗುಂಪುಗಳು ಮೋದಿ ಅವರನ್ನು ಗುರಿಯನ್ನಾಗಿರಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆಗಳು ಎಸ್ಪಿಜಿ ಹಾಗೂ ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಿವೆ.
ಪೂಂಛ್ನಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ
ಭಯೋತ್ಪಾದನಾ ಸಂಘಟನೆ ಜೈಶ್ ಎ ಮೊಹಮ್ಮದ್ನ ಉಗ್ರರು ಭಾರತದಲ್ಲಿ ಸೇರಿಕೊಳ್ಳುತ್ತಿದ್ದು, ರಾಮಲೀಲಾ ಮೈದಾನದಲ್ಲಿ ಭಾರಿ ಸಂಖ್ಯೆಯ ಜನರು ಮತ್ತು ಮಾಧ್ಯಮ ಪ್ರತಿನಿಧಿಗಳು ಸೇರಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧ ದಾಳಿ ನಡೆಸಲು ಸಿದ್ಧತೆ ನಡೆಸಿವೆ ಎಂಬ ಮಾಹಿತಿ ಹಂಚಿಕೊಂಡಿರುವುದಾಗಿ 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ, ಎನ್ಡಿಎ ಸರ್ಕಾರದ ವಿವಿಧ ಸಚಿವರು ಮತ್ತು ಮುಖ್ಯಮಂತ್ರಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ರಾಮಲೀಲಾ ಮೈದಾನದಲ್ಲಿ ಭದ್ರತೆ ವ್ಯವಸ್ಥೆಯನ್ನು ನೋಡಿಕೊಳ್ಳುವ ಜವಾಬ್ದಾರಿ ದೆಹಲಿ ಪೊಲೀಸರು ಮತ್ತು ಎಸ್ಪಿಜಿ ಎರಡರ ಮೇಲೆಯೂ ಇದೆ.
ರಾಜಧಾನಿಯಲ್ಲಿದ್ದಾರಾ ಉಗ್ರ ಬೆಂಬಲಿಗರು?
'ಸೆಕ್ಯುರಿಟಿ ಆರೇಂಜ್ಮೆಂಟ್ ಇನ್ ಎ ಡೆಮಾಕ್ರಟಿಕ್ ಪಾಲಿಟಿ' ಶೀರ್ಷಿಕೆಯ ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ ಬಿಗಿ ಭದ್ರತೆಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಗುಪ್ತಚರ ಸಂಸ್ಥೆ ಹೇಳಿದೆ.
ಇತ್ತೀಚಿನ ಪೌರತ್ವ ತಿದ್ದುಪಡಿ ಕಾಯ್ದೆ, ಅಯೋಧ್ಯಾ ತೀರ್ಪು, 370ನೇ ವಿಧಿ ರದ್ದತಿ ಮತ್ತು ಭಾರತೀಯ ವಾಯುಪಡೆಯು ಪಾಕಿಸ್ತಾನದ ಮಿಲಿಟರಿಯೇತರ ನೆಲೆಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿದ ಘಟನೆಗಳು ಪ್ರಧಾನಿ ಮೋದಿ ಅವರಿಗೆ ಜೀವ ಬೆದರಿಕೆ ಒಡ್ಡಲು ಹೊಸ ಅಂಶಗಳಾಗಿವೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ದಾಳಿ ನಡೆಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎಂದು ಎಚ್ಚರಿಕೆ ನೀಡಿವೆ.
ಬೆಂಗಳೂರು ಬಿಟ್ಟು ಓಡಿ ಹೋಗಿದ್ದ ಜೆಎಂಬಿ ಉಗ್ರನ ಬಂಧನ
ಜಮ್ಮು ಮತ್ತು ಕಾಶ್ಮೀರದಲ್ಲಿನ ಭಾರತೀಯ ಸೇನೆಯ ಪಾರಮ್ಯದ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಧಾನಿ ಸೇರಿದಂತೆ ಭಾರತದ ಗಣ್ಯ ವ್ಯಕ್ತಿಗಳನ್ನು ಗುರಿಯನ್ನಾಗಿರಿಸಿಕೊಂಡು ದಾಳಿ ನಡೆಸುವುದಾಗಿ ಲಷ್ಕರ್ ಎ ತಯಬಾದ ಪತ್ರ ಅಕ್ಟೋಬರ್ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಕೈ ಸೇರಿತ್ತು.