ರಾಹುಲ್ ನೇತೃತ್ವದಲ್ಲಿ ಸಂಸದ ಅನಂತ್ ವಿರುದ್ಧ ಪ್ರತಿಭಟನೆ
ನವದೆಹಲಿ, ಡಿಸೆಂಬರ್ 28 : ಭಾರತದ ಸಂವಿಧಾನಕ್ಕೆ ಅವಮಾನ ಮಾಡಿರುವ ಬಿಜೆಪಿ ಸಂಸದ ಕೂಡಲೆ ರಾಜೀನಾಮೆ ನೀಡಬೇಕು ಇಲ್ಲವೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಸಂಸದರು ರಾಹುಲ್ ಗಾಂಧಿ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಂವಿಧಾನ ಬದಲಾವಣೆ ಹೇಳಿಕೆ : ಕ್ಷಮೆ ಕೋರಿದ ಅನಂತ್ ಕುಮಾರ್ ಹೆಗ್ಡೆ
ಭಾರತದ ಸಂವಿಧಾನವನ್ನೇ ಬದಲಿಸುತ್ತೇವೆಂದು ಹೇಳಿಕೆ ನೀಡಿ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಅವರು ಕೂಡಲೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸುತ್ತಿದೆ.
ಸಂಸತ್ತಿನ ಮಹಾತ್ಮಾ ಗಾಂಧಿ ಎದಿರು ಜಮಾಯಿಸಿದ್ದ ರಾಹುಲ್ ಗಾಂಧಿ, ಗುಲಾಮ್ ನಭಿ ಆಝಾದ್, ಮಲ್ಲಿಕಾರ್ಜುನ ಖರ್ಗೆ ಅವರು, ಸಂವಿಧಾನವನ್ನು ಕಾಪಾಡಿ ದೇಶವನ್ನು ಉಳಿಸಿ, ಸಂಸತ್ತಿಗೆ ಅವಮಾನ ಮಾಡಿದ ಸಚಿವರನ್ನು ವಜಾ ಮಾಡಿ ಮುಂತಾದ ಫಲಕಗಳನ್ನು ಹಿಡಿದು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.
ಉತ್ತರ ಕನ್ನಡ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುವ, ಕೇಂದ್ರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮ ಸಚಿವರಾಗಿರುವ ಅನಂತ್ ಕುಮಾರ್ ಹೆಗಡೆ ಅವರು ತಮ್ಮ ಒಂದಿಲ್ಲೊಂದು ಹೇಳಿಕೆಯಿಂದ ಪೇಚಿಗೆ ಸಿಲುಕುತ್ತಿದ್ದಾರೆ, ವಿರೋಧಿಗಳನ್ನು ಕೆಣಕುತ್ತಿದ್ದಾರೆ.