ಅತ್ಯಾಚಾರಿಗಳನ್ನು ಸೋನಿಯಾ ರೀತಿ ಕ್ಷಮಿಸಿ: ನಿರ್ಭಯಾ ತಾಯಿಗೆ ವಕೀಲೆ ಸಲಹೆ
ನವದೆಹಲಿ, ಜನವರಿ 18: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹಾದಿಯನ್ನು ತುಳಿಯುವ ಮೂಲಕ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಕ್ಷಮಿಸುವಂತೆ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ನಿರ್ಭಯಾ ತಾಯಿಗೆ ಸಲಹೆ ನೀಡಿದ್ದಾರೆ. ಇದು ವ್ಯಾಪಕ ಚರ್ಚೆಗೆ ಒಳಗಾಗಿದೆ.
Recommended Video
2012ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮಗಳು 'ನಿರ್ಭಯಾ'ಳನ್ನು ಕಳೆದುಕೊಂಡ ತಾಯಿ ಆಶಾ ದೇವಿ ಅವರು, ನಾಲ್ವರು ಅಪರಾಧಿಗಳ ಗಲ್ಲುಶಿಕ್ಷೆ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಇಂದಿರಾ ಜೈಸಿಂಗ್ ಟ್ವಿಟ್ಟರ್ನಲ್ಲಿ ಸಲಹೆ ನೀಡಿದ್ದಾರೆ.
1991ರ ಮೇ 21ರಂದು ತಮಿಳುನಾಡಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಶಿಕ್ಷೆಗೆ ಒಳಗಾಗಿದ್ದ ನಳಿನಿಯನ್ನು ಸೋನಿಯಾ ಗಾಂಧಿ ಮತ್ತು ಅವರ ಕುಟುಂಬ ಕ್ಷಮಿಸಿತ್ತು.
"ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದರಲ್ಲೂ ರಾಜಕೀಯ"
ನಿರ್ಭಯಾ ಅತ್ಯಾಚಾರ ಪ್ರಕರಣದ ಗೊಂದಲದ ನಡುವೆ ನಿರ್ಭಯಾ ತಾಯಿ ಆಶಾದೇವಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಡಿದೆ. ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್ ಕೂಡ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಇದನ್ನು ಆಶಾದೇವಿ ತಿರಸ್ಕರಿಸಿದ್ದಾರೆ.
ರಾಜಕೀಯಕ್ಕಾಗಿ ಆಟವಾಡುತ್ತಿದ್ದಾರೆ
'ಇದುವರೆಗೂ ನಾನು ರಾಜಕೀಯದ ಕುರಿತು ಮಾತನಾಡಿರಲಿಲ್ಲ. ಆದರೆ 2012ರಲ್ಲಿ ಬೀದಿಗಿಳಿದು ಅಂದು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಇಂದು ಅದೇ ಜನರು ತಮ್ಮ ರಾಜಕೀಯ ಲಾಭಕ್ಕಾಗಿ ಮಗಳ ಸಾವಿನೊಂದಿಗೆ ಆಟವಾಡುತ್ತಿದ್ದಾರೆ' ಎಂದು ನಿರ್ಭಯಾ ತಾಯಿ ಆಶಾದೇವಿ ನೀಡಿದ್ದ ಹೇಳಿಕೆಯನ್ನು ಹಂಚಿಕೊಂಡು ಇಂದಿರಾ ಟ್ವೀಟ್ ಮಾಡಿದ್ದರು.
ಸೋನಿಯಾ ಗಾಂಧಿ ಮಾದರಿಯಾಗಲಿ
'ಆಶಾದೇವಿ ಅವರ ನೋವು ನನಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ. ಆದರೆ ನಳಿನಿಯನ್ನು ಕ್ಷಮಿಸಿದ ಸೋನಿಯಾ ಗಾಂಧಿ ಅವರನ್ನು ಉದಾಹರಣೆಯಾಗಿ ಅನುಸರಿಸುವಂತೆ ನಾನು ಅವರಿಗೆ ಮನವಿ ಮಾಡುತ್ತೇನೆ. ಸೋನಿಯಾ ಗಾಂಧಿ ಅವರು ನಳಿನಿಗೆ ಮರಣದಂಡನೆ ಶಿಕ್ಷೆ ಜಾರಿಯಾಗುವುದನ್ನು ಬಯಸಿರಲಿಲ್ಲ. ನಾವು ನಿಮ್ಮೊಂದಿಗೆ ಇದ್ದೇವೆ, ಆದರೆ ಮರಣದಂಡನೆಗೆ ವಿರುದ್ಧವಾಗಿ' ಎಂದು ಇಂದಿರಾ ಜೈ ಸಿಂಗ್ ಹೇಳಿದ್ದರು.
ಅಪರಾಧ ಮಾಡಿರುವುದು ಅವರು, ಶಿಕ್ಷೆ ಆಗುತ್ತಿರುವುದು ನಮಗೆ: ನಿರ್ಭಯಾ ತಾಯಿ ಆಕ್ರೋಶ
ಅಪರಾಧಿಗಳನ್ನು ಬೆಂಬಲಿಸಿ ಜೀವನ ಮಾಡುತ್ತಾರೆ
ಅಪರಾಧಿಗಳನ್ನು ಕ್ಷಮಿಸುವಂತೆ ಸಲಹೆ ನೀಡಿರುವ ಇಂದಿರಾ ಜೈಸಿಂಗ್ ವಿರುದ್ಧ ಆಶಾದೇವಿ ಕಿಡಿಕಾರಿದ್ದಾರೆ. 'ಇಂದಿರಾ ಜೈಸಿಂಗ್ ಅವರು ಈ ರೀತಿ ಸಲಹೆ ನೀಡಲು ಧೈರ್ಯ ಮಾಡಿದ್ದಾರೆ ಎಂಬುದನ್ನೂ ನಂಬಲು ಆಗುತ್ತಿಲ್ಲ. ಸುಪ್ರೀಂಕೋರ್ಟ್ನಲ್ಲಿ ಅವರನ್ನು ಹಲವು ವರ್ಷಗಳಿಂದ ಭೇಟಿ ಮಾಡಿದ್ದೇನೆ. ಇದುವರೆಗೂ ನನ್ನ ಯೋಗಕ್ಷೇಮವನ್ನು ಅವರು ಒಮ್ಮೆಯೂ ವಿಚಾರಿಸಿಲ್ಲ. ಇಂದು ಅವರು ಅಪರಾಧಿಗಳ ಪರವಾಗಿ ಮಾತನಾಡುತ್ತಾರೆ. ಇಂತಹ ವ್ಯಕ್ತಿಗಳು ಅತ್ಯಾಚಾರಿಗಳನ್ನು ಬೆಂಬಲಿಸುವ ಮೂಲಕ ಜೀವನ ಸಾಗಿಸುತ್ತಾರೆ. ಹೀಗಾಗಿಯೇ ಅತ್ಯಾಚಾರ ಪ್ರಕರಣಗಳು ನಿಲ್ಲುತ್ತಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.
ಮಾನವಹಕ್ಕು ಹೆಸರಲ್ಲಿ ದುಡ್ಡು ಮಾಡುತ್ತಾರೆ
'ನನಗೆ ಅಂತಹ ಸಲಹೆ ನೀಡಲು ಇಂದಿರಾ ಜೈಸಿಂಗ್ ಯಾರು? ಇಡೀ ದೇಶ ಅಪರಾಧಿಗಳನ್ನು ಮರಣದಂಡನೆಗೆ ಒಳಪಡಿಸಲು ಒತ್ತಾಯಿಸುತ್ತಿದೆ. ಮಾನವಹಕ್ಕುಗಳ ಹೆಸರಿನಲ್ಲಿ ಅವರು ದುಡ್ಡು ಮಾಡುತ್ತಿದ್ದಾರೆ. ಅವರ ಸಲಹೆಗಳು ನನಗೆ ಬೇಕಿಲ್ಲ. ಅಂತಹವರಿಂದಾಗಿ ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯ ಸಿಗುತ್ತಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದು ರಾಜಕೀಯ ಪ್ರೇರಿತ, ಇದಲ್ಲ
ಟ್ವಿಟ್ಟರ್ನಲ್ಲಿ ಕೂಡ ಇಂದಿರಾ ಜೈಸಿಂಗ್ ವಿರುದ್ಧ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋನಿಯಾ ಗಾಂಧಿ ಅವರ ನಡೆ ರಾಜಕೀಯ ಪ್ರೇರಿತ. ಆದರೆ ನಿರ್ಭಯಾ ಪ್ರಕರಣ ರಾಜಕೀಯವಲ್ಲ. ನಿರ್ಭಯಾ ತಾಯಿಯ ನೋವನ್ನು ಅರ್ಥಮಾಡಿಕೊಳ್ಳಬಲ್ಲ ಮತ್ತೊಮ್ಮ ಮಹಿಳೆ ಈ ರೀತಿ ಹೇಳಿಕೆ ನೀಡಲು ಸಾಧ್ಯವಿಲ್ಲ. ನಿರ್ಭಯಾಳಿಂದ ಅವರಿಗೆ ಆಗಬೇಕಿರುವುದು ಏನೂ ಇಲ್ಲ. ಆದರೆ ಅವರಿಗೆ ಸೋನಿಯಾ ಕೃಪಕಟಾಕ್ಷ ಬೇಕಿದೆ ಎಂದು ಟೀಕಿಸಲಾಗಿದೆ.