ಜನರು ಪ್ರಯೋಗ ಪಶುಗಳೆಂದುಕೊಂಡಿದ್ದೀರಾ?; ಮನೀಶ್ ತಿವಾರಿ
ನವದೆಹಲಿ, ಜನವರಿ 13: ಕೊರೊನಾ ಲಸಿಕೆಗಳಲ್ಲಿ ಜನರಿಗೆ ಆಯ್ಕೆಯ ಸ್ವಾತಂತ್ರ್ಯವಿರುವುದಿಲ್ಲ. ಸದ್ಯಕ್ಕೆ ಸರ್ಕಾರ ನೀಡಿದ ಲಸಿಕೆಗಳನ್ನು ಪಡೆದುಕೊಳ್ಳಬೇಕಿದೆ ಎಂದು ಮಂಗಳವಾರ ಆರೋಗ್ಯ ಸಚಿವಾಲಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, "ಸರ್ಕಾರದ ಈ ಮಾತು ಲಸಿಕೆಗಳ ಬಗ್ಗೆಯೇ ಅನುಮಾನ ಮೂಡುವಂತೆ ಮಾಡುತ್ತಿವೆ" ಎಂದು ಹೇಳಿದ್ದಾರೆ.
ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಲಸಿಕೆಯು ಮೂರನೇ ಹಂತದ ಪ್ರಯೋಗದಲ್ಲಿದೆ. ಜೊತೆಗೆ ಇದಕ್ಕೆ ತುರ್ತು ಸಂದರ್ಭದಲ್ಲಿ ನಿರ್ಬಂಧಿತ ಬಳಕೆಗೆ ಅನುಮತಿ ನೀಡಲಾಗಿದೆ. ಈಗ ಜನರಿಗೆ ಲಸಿಕೆಗಳ ಆಯ್ಕೆಯ ಅವಕಾಶವನ್ನೂ ಸರ್ಕಾರ ನೀಡಿಲ್ಲ. ಹೀಗಿದ್ದಾಗ, ಮೂರನೇ ಹಂತದ ಪ್ರಯೋಗದಲ್ಲಿರುವ ಕೊವ್ಯಾಕ್ಸಿನ್ ಲಸಿಕೆಯ ಪರಿಣಾಮಕಾರಿತ್ವದ ಕುರಿತು ಪ್ರಶ್ನೆ ಏಳುತ್ತಿದೆ ಎಂದಿದ್ದಾರೆ.
"ದೇಶದ ಲಸಿಕೆ ಮೇಲೆ ನಂಬಿಕೆ ಇರದ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ"
ಹೀಗೆ ಗೊಂದಲಗಳಿದ್ದಾಗ ಸರ್ಕಾರ ಲಸಿಕೆಗಳನ್ನು ವಿತರಣೆ ಮಾಡಬಾರದು. ಲಸಿಕೆಯ ಪರಿಣಾಮಕಾರಿ ಗುಣ ಸಾಬೀತಾಗುವವರೆಗೂ ಬಳಕೆಗೆ ಅನುಮತಿ ನೀಡಬಾರದು. ಜನರಲ್ಲಿ ಈ ಲಸಿಕೆಗಳ ಬಗ್ಗೆ ಸಂಪೂರ್ಣ ಆತ್ಮವಿಶ್ವಾಸ ಬರುವ ಹಾಗೆ ಸರ್ಕಾರ ಕಾರ್ಯನಿರ್ವಹಿಸಬೇಕು. ಲಸಿಕೆಗಳನ್ನು ಸುಮ್ಮನೆ ವಿತರಣೆ ಮಾಡುವುದಲ್ಲ. ಜನರು ನಿಮ್ಮ ಪ್ರಯೋಗಗಳಿಗೆ ಒಳಪಡುವ ಗಿನ್ನಿ ಪಿಗ್ ಗಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ಆಕ್ಸ್ ಫರ್ಡ್ ಯೂನಿವರ್ಸಿಟಿಯ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆಗಳಿಗೆ ಅನುಮತಿ ನೀಡಲಾಗಿದ್ದು, ಜನವರಿ 16ರಿಂದ ಭಾರತದಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಆರಂಭಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ, ಜನರಿಗೆ ಎರಡು ಲಸಿಕೆಗಳಲ್ಲಿ ಆಯ್ಕೆಗಳಿರುವುದಿಲ್ಲ. ಬೇರೆ ದೇಶಗಳಲ್ಲಿಯೂ ಒಂದಕ್ಕಿಂತ ಹೆಚ್ಚು ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ ಯಾವುದೇ ದೇಶದಲ್ಲಿಯೂ ಜನರಿಗೆ ಆಯ್ಕೆಯನ್ನು ಬಿಟ್ಟಿಲ್ಲ ಎಂದು ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಂಗಳವಾರ ತಿಳಿಸಿದ್ದರು.
ಈ ಹಿಂದೆಯೂ ಲಸಿಕೆ ಬಗ್ಗೆ ಮನೀಶ್ ತಿವಾರಿ ಪ್ರಶ್ನಿಸಿದ್ದು, ಬಿಜೆಪಿ ಕೊರೊನಾ ಪರಿಸ್ಥಿತಿಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಪ್ರಶ್ನೆಗಳೇ ತುಂಬಿರುವ ಈ ಲಸಿಕೆಯನ್ನು ಯಾರಿಗೆ, ಏಕೆ ನೀಡಬೇಕು ಎಂದು ಕೇಳಿದ್ದರು.