ಪೆಗಾಸಸ್ ಬೇಹುಗಾರಿಕೆ: "ದೇಶದ ಪ್ರಗತಿ ಸಹಿಸದವರಿಂದ ಗೂಢಚರ್ಯೆ ಆರೋಪ"
ನವದೆಹಲಿ, ಜುಲೈ 20: ಇಸ್ರೇಲಿನ ಪೆಗಾಸಸ್ ತಂತ್ರಾಂಶದ ಮೂಲಕ ಬೇಹುಗಾರಿಕೆ ನಡೆಸಿ ಭಾರತದ ಪ್ರತಿಪಕ್ಷ ನಾಯಕರು, ಪತ್ರಕರ್ತರು, ಸುಪ್ರೀಂಕೋರ್ಟ್ ನ್ಯಾಯಾಧೀಶರು ಸೇರಿದಂತೆ 300ಕ್ಕೂ ಹೆಚ್ಚು ಜನರ ಮೇಲೆ ಕಣ್ಣಿರಿಸಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಿಸಿದ್ದಾರೆ.
ಸೋಮವಾರ ನಡೆದ ಮೊದಲ ದಿನದ ಸಂಸತ್ ಅಧಿವೇಶನದಲ್ಲಿ ಪೆಗಾಸಸ್ ಬೇಹುಗಾರಿಕೆ ವಿಷಯವೇ ಪ್ರಮುಖವಾಗಿ ಚರ್ಚೆ ಆಗಿದೆ. ಮಳೆಗಾಲ ಅಧಿವೇಶನದ ಸಮಯದಲ್ಲೇ ಈ ವರದಿ ಪ್ರಕಟವಾಗಿದ್ದು, ಅದರ ಕಾಲಗಣನೆಯನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.
ಪೆಗಾಸಸ್ ಬೇಹುಗಾರಿಕೆ: ಮೋದಿ ವಿರುದ್ದ ತನಿಖೆ, ಶಾ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
"ಕಳೆದ 2017 ರಿಂದ 2019ರ ಅವಧಿಯಲ್ಲಿ ಸ್ನೋಬಾಲ್ ಸ್ಕ್ಯಾಂಡಲ್ ಮೂಲಕ ಬೇಹುಗಾರಿಕೆ ನಡೆಸಿ ಮೊಬೈಲ್ ಸಂಖ್ಯೆಗಳನ್ನು ಕದಿಯಲಾಗಿತ್ತು. ಭಾರತದಲ್ಲಿ 300ಕ್ಕೂ ಹೆಚ್ಚು ಜನರ ಮೊಬೈಲ್ ಮೇಲೆ ಬೇಹುಗಾರಿಕೆ ನಡೆಸಲಾಗಿತ್ತು ಎಂಬ ಆರೋಪವಿದ್ದರೂ ಯಾವುದೇ ಸಾಕ್ಷಾಧಾರಗಳು ಇರಲಿಲ್ಲ," ಎಂದು ಸಚಿವ ಅಮಿತ್ ಶಾ ಉಲ್ಲೇಖಿಸಿದ್ದಾರೆ.
ಕಾಲಘಟ್ಟವನ್ನು ಅರ್ಥ ಮಾಡಿಕೊಳ್ಳಿರಿ ಎಂದ ಶಾ
"ನನ್ನ ವಿರುದ್ಧ ಹಗುರ ಧಾಟಿಯಲ್ಲಿ ಆರೋಪಿಸುತ್ತಿದ್ದಾರೆ. ಅದನ್ನು ನಾನೀಗ ಗಂಭೀರವಾಗಿ ತೆಗೆದುಕೊಂಡಿದ್ದೇನೆ ಹಾಗೂ ಆ ಬಗ್ಗೆ ಹೇಳುವುದಕ್ಕೆ ಬಯಸುತ್ತೇನೆ. ಮಾಹಿತಿ ಸೋರಿಕೆ ಬಗ್ಗೆ ಆರೋಪಿಸುವ ಆಯ್ದ ಸಮಯವನ್ನು ಮತ್ತು ಅದರ ಕಾಲಘಟ್ಟವನ್ನು ನೀವು ಅರ್ಥಮಾಡಿಕೊಳ್ಳಬೇಕಿದೆ," ಎಂದು ಅಮಿತ್ ಶಾ ಹೇಳಿದ್ದಾರೆ.
ದೇಶದ ಪ್ರಗತಿ ವಿರುದ್ಧ ಈ ಆರೋಪಗಳ ಸುರಿಮಳೆ
"ಪೆಗಾಸಸ್ ಬೇಹಾಗಾರಿಕೆ ವರದಿಯು ಪ್ರಗತಿಗೆ ಅಡ್ಡಿಪಡಿಸುವ ಉದ್ದೇಶವನ್ನು ಹೊಂದಿದೆ. ಭಾರತದ ಏಳಿಗೆಯನ್ನು ಸಹಿಸಿಕೊಳ್ಳದ ಕೆಲವು ಜಾಗತಿಕ ಸಂಸ್ಥೆಗಳು ಅದಕ್ಕೆ ಅಡ್ಡಿಪಡಿಸುತ್ತಿವೆ. ಅಲ್ಲದೇ ದೇಶದ ಪ್ರಗತಿಯನ್ನು ಅರಗಿಸಿಕೊಳ್ಳದ ಕೆಲವು ರಾಜಕೀಯ ನಾಯಕರು ಈಗ ಅಡ್ಡಪಡಿಸುವಿಕೆ ತಂತ್ರವನ್ನು ಮಾಡುತ್ತಿದ್ದಾರೆ. ಇವುಗಳ ನಡುವಿನ ನಂಟು ಮತ್ತು ಕಾಲಘಟ್ಟವನ್ನು ಭಾರತದ ಪ್ರಜೆಗಳು ಸರಿಯಾಗಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ," ಎಂದು ಸಚಿವ ಅಮಿತ್ ಶಾ ಹೇಳಿದ್ದಾರೆ.
ಎನ್ಆರ್ ಸಿ ಮತ್ತು ಸಿಎಎ ಜಾರಿ ಸಂದರ್ಭದಲ್ಲೂ ಆರೋಪ
"ಭಾರತದಲ್ಲಿ 2019ರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಇಂಥದ್ದೇ ಬೇಹುಗಾರಿಕೆ ಆರೋಪ ಕೇಳಿ ಬಂದಿತ್ತು. ಅಂದು ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ನಾಗರಿಕ ನೋಂದಣಿ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿತ್ತು. ಇದೀಗ ಮತ್ತೆ ಅಂಥದ್ದೇ ಬೇಹುಗಾರಿಕೆ ಆರೋಪವನ್ನು ಮಾಡಲಾಗುತ್ತಿದೆ. ಇವುಗಳ ನಡುವಿನ ನಂಟು ಮತ್ತು ಕಾಲಘಟ್ಟವನ್ನು ನೀವೇ ಅರ್ಥ ಮಾಡಿಕೊಳ್ಳಿರಿ," ಎಂದು ಅಮಿತ್ ಶಾ ಹೇಳಿದ್ದಾರೆ.
ಭಾರತದಲ್ಲಿ ಯಾರ ಮೇಲೆ ಪೆಗಾಸಸ್ ಬೇಹುಗಾರಿಕೆ?
ಇಸ್ರೇಲ್ ಮೂಲದ ಪೆಗಾಸಸ್ ತಂತ್ರಾಂಶವನ್ನು ಬಳಸಿಕೊಂಡು ಭಾರತದಲ್ಲಿ ಬೇಹುಗಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ. ದೇಶದ ಪ್ರಮುಖ ರಾಜಕಾರಣಿಗಳು, ಕೇಂದ್ರ ಸಚಿವರು, ನ್ಯಾಯಾಧೀಶರು ಹಾಗೂ ಪತ್ರಕರ್ತರ ಮೊಬೈಲ್ ಸಂಖ್ಯೆ ಹ್ಯಾಕ್ ಮಾಡಲಾಗುತ್ತಿದೆ ಎಂದ ಆರೋಪವಿದೆ. ಈ ಬೇಹಾಗಾರಿಕೆಗೆ ಒಳಗಾದವರ ಪಟ್ಟಿಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ, ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಪಟೇಲ್ ಮತ್ತು ಅಶ್ವಿನಿ ವೈಷ್ಣವ್ ಜೊತೆಗೆ 40 ಮಂದಿ ಪತ್ರಕರ್ತರ ಹೆಸರು ಕೂಡ ಸೇರಿದೆ.