ಟಿಕೆಟ್ ಆಯ್ತು, ಈಗ ರೈಲ್ವೆ ಟೀ ಕಪ್ನಲ್ಲೂ 'ಮೇ ಭೀ ಚೌಕಿದಾರ್'
ನವದೆಹಲಿ, ಮಾರ್ಚ್ 29: 'ಮೇ ಭೀ ಚೌಕಿದಾರ್' ಅಭಿಯಾನ ಮತ್ತೆ ಮತ್ತೆ ವಿವಾದಕ್ಕೆ ಈಡಾಗುತ್ತಿದೆ. ಈ ಆಂದೋಲನದ ಪರಿಣಾಮ ಭಾರತೀಯ ರೈಲ್ವೆ ಕೆಲವೇ ದಿನಗಳ ಅಂತರದಲ್ಲಿ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
'ಮೇ ಭೀ ಚೌಕಿದಾರ್' ಎಂಬ ವಾಕ್ಯವನ್ನು ಮುದ್ರಿಸಿರುವ ಪೇಪರ್ ಕಪ್ಗಳನ್ನು ಶತಾಬ್ದಿ ರೈಲಿನಲ್ಲಿ ಟೀ ಮಾರಲು ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ಸಹಿತ ಪ್ರಕಟಿಸುತ್ತಿರುವಂತೆಯೇ ಎಲ್ಲ ಟೀ ಕಪ್ಗಳನ್ನು ಹಿಂದಕ್ಕೆ ಪಡೆದಿರುವುದಾಗಿ ತಿಳಿಸಿರುವ ರೈಲ್ವೆ ಇಲಾಖೆ, ಗುತ್ತಿಗೆದಾರನಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿರುವುದಾಗಿ ಹೇಳಿದೆ.
ವಿಮಾನದ ಟಿಕೆಟ್ನಲ್ಲಿ ಮೋದಿ ಚಿತ್ರ: ಹಿಂದಕ್ಕೆ ಪಡೆದ ಏರ್ ಇಂಡಿಯಾ
ರೈಲಿನಲ್ಲಿ ಈ ಮಾದರಿಯ ಟೀ ಕಪ್ ಪೂರೈಕೆ ಮಾಡುತ್ತಿರುವ ಚಿತ್ರಗಳಿರುವ ಹಲವಾರು ಟ್ವೀಟ್ಗಳನ್ನು ಮಾಡಲಾಗಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದೆ ಎಂದು ಚುನಾವಣಾ ಆಯೋಗವನ್ನು ಟ್ಯಾಗ್ ಮಾಡಿ ಆರೋಪಿಸಲಾಗಿದೆ.
'ಈ ಘಟನೆ ಇಂದು ನಡೆದಿದೆ. ಆದರೆ, ಕೂಡಲೇ ಈ ಕಪ್ಗಳನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ. ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. ಮೇಲುಸ್ತುವಾರಿ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುತ್ತಿದೆ' ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
Tea being sold in 'Main Bhi Chowkidar' (I am also a watchman) paper cups in Indian Railways. This photo is from Shatabdi Express.
— Uzair Hasan Rizvi (@RizviUzair) 29 March 2019
Does this violate model code of conduct? @SpokespersonECI pic.twitter.com/WQF3RiXzke
ಕೆಲವು ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವಿರುವ ಟಿಕೆಟ್ಗಳನ್ನು ರೈಲ್ವೆ ಇಲಾಖೆ ವಿತರಿಸಿತ್ತು. ಅದು ವಿವಾದ ಸೃಷ್ಟಿಸಿದ ಕೂಡಲೇ ಹಿಂದಕ್ಕೆ ಪಡೆದುಕೊಳ್ಳಲಾಗಿತ್ತು. ಏರ್ ಇಂಡಿಯಾ ಕೂಡ ನರೇಂದ್ರ ಮೋದಿ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಚಿತ್ರವುಳ್ಳ ವೈಬ್ರೆಂಟ್ ಗುಜರಾತ್ನ ಜಾಹೀರಾತನ್ನು ಬೋರ್ಡಿಂಗ್ ಪಾಸ್ಗಳಲ್ಲಿ ಮುದ್ರಿಸಿತ್ತು. ಅದು ಕೂಡ ವಿವಾದ ಉಂಟುಮಾಡಿದ್ದ ಬಳಿಕ ವಾಪಸ್ ಪಡೆದುಕೊಳ್ಳಲಾಗಿತ್ತು.