ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮುಸ್ಲಿಮರು ಭಯಪಡಬೇಕಿಲ್ಲ: ಅಮಿತ್ ಶಾ ಭರವಸೆ

|
Google Oneindia Kannada News

ನವದೆಹಲಿ, ಡಿಸೆಂಬರ್ 10: ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ, 2019 ಲೋಕಸಭೆಯಲ್ಲಿ ಸೋಮವಾರ ಮಂಡನೆಯಾಗಿ, ಅಂಗೀಕಾರವಾಗಿದೆ. ಗೃಹಸಚಿವ ಅಮಿತ್ ಶಾ, ಚಳಿಗಾಲದ ಅಧಿವೇಶನದ ವೇಳೆ ಪೌರತ್ವ ತಿದ್ದುಪಡಿ ಮಸೂದೆ (ಕ್ಯಾಬ್) ಮಂಡಿಸಿದರು. ಇದಕ್ಕೆ ವಿರೋಧಪಕ್ಷಗಳ ತೀವ್ರ ವಿರೋಧ, ಪ್ರತಿಭಟನೆಗಳ ನಡುವೆಯೂ ಅನುಮೋದನೆ ದೊರಕಿತು. ಮಸೂದೆ ಪರ 311 ಮತಗಳು ಬಿದ್ದರೆ, ಮಸೂದೆ ವಿರುದ್ಧ ಕೇವಲ 82 ಮತಗಳು ಬಿದ್ದವು. ಎಐಎಡಿಎಂಕೆ. ಶಿವಸೇನಾ, ಜೆಡಿಯು ಮುಂತಾದ ಪಕ್ಷಗಳು ಸಹ ಈ ಮಸೂದೆಗೆ ಬೆಂಬಲ ನೀಡಿದವು.

ಈ ಮಸೂದೆ ಕಾಯ್ದೆಯಾಗಿ ರೂಪುಗೊಳ್ಳಲು ರಾಜ್ಯಸಭೆಯ ಅನುಮೋದನೆ ಕೂಡ ಅಗತ್ಯವಾಗಿದೆ. ಬುಧವಾರ ಈ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. ಲೋಕಸಭೆಯಲ್ಲಿ ಸುಲಭವಾಗಿ ಅನುಮೋದನೆ ದೊರೆತರೂ, ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಪಾಸ್ ಮಾಡುವುದು ಎನ್‌ಡಿಎ ಸರ್ಕಾರಕ್ಕೆ ಸುಲಭವಾಗಿಲ್ಲ.

ಪೌರತ್ವ ತಿದ್ದುಪಡಿ ಮಸೂದೆ, ರಾಜ್ಯಸಭೆಯಲ್ಲಿ ಎನ್ಡಿಎ ಸಂಖ್ಯಾಬಲ?ಪೌರತ್ವ ತಿದ್ದುಪಡಿ ಮಸೂದೆ, ರಾಜ್ಯಸಭೆಯಲ್ಲಿ ಎನ್ಡಿಎ ಸಂಖ್ಯಾಬಲ?

ರಾಜ್ಯಸಭೆಯಲ್ಲಿ ಒಟ್ಟು 245 ಸ್ಥಾನಗಳಿದ್ದು, ಮಸೂದೆ ಅನುಮೋದನೆಗೊಳ್ಳಲು ಒಟ್ಟು 120 ರಿಂದ 122 ಸದಸ್ಯರ ಬೆಂಬಲ ಬೇಕಿದೆ. ಸದ್ಯ 238 ಸದಸ್ಯರಿದ್ದು, 119-120 ಸದಸ್ಯರು ಮಸೂದೆಯ ಪರ ಮತ ಹಾಕಿದರೆ ಬಿಜೆಪಿ ಗೆಲುವು ಸಾಧಿಸಬಹುದು. ಬಿಜೆಪಿ 83 ಸ್ಥಾನ ಹೊಂದಿದೆ. ಬಿಜೆಡಿ(7), ತೆಲಂಗಾಣ ರಾಷ್ಟ್ರೀಯ ಸಮಿತಿ(6), ವೈಎಸ್ ಆರ್ ಕಾಂಗ್ರೆಸ್ (2) ಬೆಂಬಲ ದೊರೆತರೆ ಬಿಜೆಪಿ ಉದ್ದೇಶ ಈಡೇರಲಿದೆ.

ಈ ಮಸೂದೆಯು ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿರಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಅನೇಕ ಸಂಘಟನೆಗಳು ಇದರ ಬಗ್ಗೆ ವಿರೋಧ ವ್ಯಕ್ತಪಡಿಸಿವೆ. ಈಶಾನ್ಯ ರಾಜ್ಯಗಳಲ್ಲಿ ಮಸೂದೆಯನ್ನು ಖಂಡಿಸಿ ಹಲವೆಡೆ ಬಂದ್ ಆಚರಿಸಲಾಗುತ್ತಿದೆ. ಆದರೆ ಭಾರತದಲ್ಲಿನ ಮುಸ್ಲಿಮರು ಮಸೂದೆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ವಿರೋಧಪಕ್ಷಗಳಿಂದಾಗಿ ಆತಂಕ ಸೃಷ್ಟಿ

ವಿರೋಧಪಕ್ಷಗಳಿಂದಾಗಿ ಆತಂಕ ಸೃಷ್ಟಿ

'ಈ ಮಸೂದೆಗೂ ಭಾರತೀಯ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಧಾರ್ಮಿಕ ಕಾರಣಗಳಿಗೆ ಭಾರತಕ್ಕೆ ನಿರಾಶ್ರಿತರಾಗಿ ಬಂದ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವ ಉದ್ದೇಶವನ್ನಷ್ಟೇ ಇದು ಹೊಂದಿದೆ' ಎಂದು ಅಮಿತ್ ಶಾ ಹೇಳಿದರು.

'ಭಾರತದಲ್ಲಿನ ಅಲ್ಪಸಂಖ್ಯಾತರ ನಡುವೆ ಭಯವಿಲ್ಲ. ಕಳವಳ ಹುಟ್ಟಿಕೊಂಡರೂ ಅದು ವಿರೋಧಪಕ್ಷದವರು ನೀಡುತ್ತಿರುವ ಹೇಳಿಕೆಗಳಿಂದ ಮಾತ್ರ. ನಾನು ಎಲ್ಲ ಭಾರತೀಯರಿಗೂ ಭರವಸೆ ನೀಡುತ್ತೇನೆ, ನರೇಂದ್ರ ಮೋದಿ ಅವರ ಸರ್ಕಾರದ ಅಡಿಯಲ್ಲಿ ಅಲ್ಪಸಂಖ್ಯಾತರು ಆತಂಕ ಪಡಲು ಯಾವ ಕಾರಣವೂ ಇಲ್ಲ' ಎಂದರು.

ಮಸೂದೆ ಅಕ್ರಮವಲ್ಲ, ಅಸಾಂವಿಧಾನಿಕವೂ ಅಲ್ಲ

ಮಸೂದೆ ಅಕ್ರಮವಲ್ಲ, ಅಸಾಂವಿಧಾನಿಕವೂ ಅಲ್ಲ

'ಪೌರತ್ವ ತಿದ್ದುಪಡಿ ಮಸೂದೆ ಅಕ್ರಮವೂ ಅಲ್ಲ, ಅಸಾಂವಿಧಾನಿಕವೂ ಅಲ್ಲ. ಪ್ರಸ್ತಾವಿತ ಮಸೂದೆಯು ಹಕ್ಕುಗಳನ್ನು ರಕ್ಷಿಸುತ್ತದೆ ಮತ್ತು ನೆರೆಯ ಇಸ್ಲಾಮಿಕ್ ದೇಶಗಳಿಂದ ಶೋಷಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುತ್ತದೆ. ವಿಶ್ವಸಂಸ್ಥೆಯ ನಿರಾಶ್ರಿತರಿಗೆ ಆಶ್ರಯ ನೀಡುವ ಒಡಂಬಡಿಕೆಗೆ ಭಾರತ ಸಹಿ ಹಾಕಿಲ್ಲ. ಭಾರತಕ್ಕೆ ನಿರಾಶ್ರಿತರ ನೀತಿ ಅಗತ್ಯವಿಲ್ಲ. ನಿರಾಶ್ರಿತರನ್ನು ರಕ್ಷಿಸಲು ನಮ್ಮಲ್ಲಿ ಬೇಕಾದಷ್ಟು ಕಾನೂನುಗಳಿವೆ' ಎಂದು ಹೇಳಿದರು.

ಮಹತ್ವದ ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಪಾಸ್ಮಹತ್ವದ ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಪಾಸ್

'ದೇಶ ವಿಭಜನೆಯು ಧರ್ಮದ ಆಧಾರದ ಮೇಲೆ ನಡೆಯದೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಅದು ಹಾಗೆಯೇ ಆಗಿರುವುದು. ಮುಸ್ಲಿಂ ಪ್ರಾಬಲ್ಯದ ಭಾಗಗಳು ಪಾಕಿಸ್ತಾನವಾದರೆ, ಉಳಿದದ್ದು ಭಾರತಕ್ಕೆ ಸಿಕ್ಕಿತು. ಭಾರತವು ಧರ್ಮದ ಆಧಾರದಲ್ಲಿ ವಿಭಜನೆ ಆಗದೆ ಹೋಗಿದ್ದರೆ ಪೌರತ್ವ ತಿದ್ದುಪಡಿ ಮಸೂದೆಯ ಅಗತ್ಯವೇ ಬೀಳುತ್ತಿರಲಿಲ್ಲ' ಎಂದು ಪ್ರತಿಪಾದಿಸಿದರು.

ಹಿಂದೂಗಳ ಸಂಖ್ಯೆ ಕುಸಿದಿದೆ

ಹಿಂದೂಗಳ ಸಂಖ್ಯೆ ಕುಸಿದಿದೆ

'ಜವಹರಲಾಲ್ ನೆಹರೂ ಮತ್ತು ಲಿಖಾಯತ್ ಅಲಿ ಇಬ್ಬರೂ ತಮ್ಮ ತಮ್ಮ ದೇಶಗಳಲ್ಲಿನ ಅಲ್ಪಸಂಖ್ಯಾತರ ಹಿತ ಕಾಪಾಡುವುದಾಗಿ ಒಪ್ಪಂದದ ವೇಳೆ ಹೇಳಿದ್ದರು. ಆದರೆ ಅದು ನೆರವೇರಲಿಲ್ಲ. 1951ರಲ್ಲಿ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಪ್ರಮಾಣ ಶೇ 23ರಷ್ಟಿತ್ತು. ಈಗ ಅದು ಕಡಿಮೆಯಾಗಿದೆ. ಬಾಂಗ್ಲಾದೇಶದಲ್ಲಿ 2011ರಲ್ಲಿ ಶೇ 22ರಷ್ಟಿತ್ತು. ಅದೀಗ ಶೇ 7.8ಕ್ಕೆ ಕುಸಿದಿದೆ. ಆದರೆ ಭಾರತದಲ್ಲಿನ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ 1951ರಲ್ಲಿ ಶೇ 9.8ರಿಂದ ಶೇ 14.3ಕ್ಕೆ ಏರಿದೆ. ನೆರೆಯ ದೇಶಗಳಲ್ಲಿನ ಅಲ್ಪಸಂಖ್ಯಾತರ ಪ್ರಮಾಣ ಕುಸಿದಿದೆ. ಏಕೆಂದರೆ ಅವರನ್ನು ಮತಾಂತರ ಮಾಡಲಾಗಿದೆ, ಕೊಲೆ ಮಾಡಲಾಗಿದೆ ಇಲ್ಲವೇ ಪರಾರಿಯಾಗಿದ್ದಾರೆ' ಎಂದು ತಿಳಿಸಿದರು.

ಹಿಂದೂ ರಾಷ್ಟ್ರದ ಉದ್ದೇಶವಲ್ಲ

ಹಿಂದೂ ರಾಷ್ಟ್ರದ ಉದ್ದೇಶವಲ್ಲ

'ಇದರಲ್ಲಿ ನೋವು ಅನುಭವಿಸಿದವರೇ ತಮ್ಮ ಕಥೆಗಳನ್ನು ಹೇಳಲು ಸೂಕ್ತ. ತಮ್ಮ ಹೆಣ್ಣುಮಕ್ಕಳಿಗೆ ರಕ್ಷಣೆ ಹುಡುಕಿಕೊಂಡು ಇಲ್ಲಿಗೆ ಬಂದವರಿಗೆ ಆಶ್ರಯ ನೀಡಲು ಆಗುವುದಿಲ್ಲ ಎಂದು ನಮಗೆ ಹೇಳಲಾಗದು. ಪ್ರಕರಣದ ಆಧಾರದಲ್ಲಿ ನಿರಾಶ್ರಿತರನ್ನು ಭಾರತ ನಿರ್ಧರಿಸಲಿದೆ. ಹೀಗಾಗಿ ಇದರಲ್ಲಿ ನೇಪಾಳ ಮತ್ತು ಶ್ರೀಲಂಕಾಗಳಿಂದ ಬಂದ ಇದೇ ರೀತಿಯ ವಲಸಿಗರನ್ನು ಈ ಮಸೂದೆ ಒಳಗೊಂಡಿಲ್ಲ' ಎಂದ ಅಮಿತ್ ಶಾ, 1991ರಲ್ಲಿ ಶೇ 81ರಷ್ಟಿದ್ದ ಹಿಂದೂಗಳ ಜನಸಂಖ್ಯೆ ಈಗ ಶೇ 79ಕ್ಕೆ ಕುಸಿದಿದೆ. ಈ ಮಸೂದೆಯು ಹಿಂದೂರಾಷ್ಟ್ರ ಮಾಡುವ ಉದ್ದೇಶದ ಸೂಚನೆಯಲ್ಲ ಎಂದು ಸ್ಪಷ್ಟಪಡಿಸಿದರು.

ಲೋಕಸಭೆಯಲ್ಲಿ ಇಂದು ಪೌರತ್ವ ತಿದ್ದುಪಡಿ ಮಸೂದೆ ಮಂಡನೆಲೋಕಸಭೆಯಲ್ಲಿ ಇಂದು ಪೌರತ್ವ ತಿದ್ದುಪಡಿ ಮಸೂದೆ ಮಂಡನೆ

ಮೂರು ದೇಶಗಳ ನಿರಾಶ್ರಿತರಿಗೆ ಮಾತ್ರ

ಮೂರು ದೇಶಗಳ ನಿರಾಶ್ರಿತರಿಗೆ ಮಾತ್ರ

ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ನೀಡಲಾಗಿರುವ ಸೌಲಭ್ಯವು ಹಿಂದೂ, ಬೌದ್ಧ, ಸಿಖ್, ಜೈನ, ಪಾರ್ಸಿ ಮತ್ತು ಕ್ರೈಸ್ತ ಸಮುದಾಯಕ್ಕೆ ಮಾತ್ರ ಅನ್ವಯವಾಗಲಿದೆ. ಆದರೆ ಮುಸ್ಲಿಮರಿಗೆ ಇಲ್ಲ. ಏಕೆಂದರೆ ನೆರೆಯ ಮೂರೂ ದೇಶಗಳು ಇಸ್ಲಾಮಿಕ್ ದೇಶಗಳಾಗಿವೆ. ಅವರ ನಡುವೆ ಇರುವ ಮುಸ್ಲಿಮರು ಧಾರ್ಮಿಕ ಶೋಷಣೆಗೆ ಒಳಗಾಗಲು ಸಾಧ್ಯವಿಲ್ಲ ಎಂದು ಅಮಿತ್ ಶಾ ವಿವರಿಸಿದರು.

'ಧಾರ್ಮಿಕತೆ ಆಧಾರದಲ್ಲಿ ದೇಶ ವಿಭಜನೆಗೆ ನೆಹರೂ ಒಪ್ಪಿಕೊಳ್ಳದೆ ಹೋಗಿದ್ದರೆ, ಇಂದು ಪಾಕಿಸ್ತಾನ ನಮ್ಮದೇ ಆಗಿರುತ್ತಿತ್ತು. ಪಾಕಿಸ್ತಾನ ನಮ್ಮದು. ಅವರ ನಾಗರಿಕರು ನಮ್ಮವರು. ನಾವು ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ಈಗಲೂ 24 ಸೀಟುಗಳನ್ನು ಅವರಿಗೆ ಉಳಿಸಿದ್ದೇವೆ' ಎಂದರು.

ಮುಸ್ಲಿಮರ ವಿರುದ್ಧ ದ್ವೇಷ ಸಾಧಿಸುತ್ತಿಲ್ಲ

ಮುಸ್ಲಿಮರ ವಿರುದ್ಧ ದ್ವೇಷ ಸಾಧಿಸುತ್ತಿಲ್ಲ

'ಈ ಮಸೂದೆಗೂ ಭಾರತದಲ್ಲಿನ ಮುಸ್ಲಿಮರಿಗೂ ಸಂಬಂಧವಿಲ್ಲ. ಶೇ .001ರಷ್ಟು ಕೂಡ ದೇಶದ ಅಲ್ಪಸಂಖ್ಯಾತರ ವಿರುದ್ಧವಾಗಿಲ್ಲ. ಇದು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಬಾಂಗ್ಲಾದೇಶಗಳಿಂದ ಬಂದ ಅಲ್ಪಸಂಖ್ಯಾತರನ್ನು ಮಾತ್ರ ನಾವಿಲ್ಲಿ ಉಲ್ಲೇಖೀಸುತ್ತಿದ್ದೇವೆ. ಇದು ವಾಸ್ತವ. ಇಲ್ಲಿ ಅನೇಕ ಮುಸ್ಲಿಮರಿದ್ದಾರೆ. ಯಾವ ಸಮಸ್ಯೆಯೂ ಇಲ್ಲದೆ ಅವರು ಬದುಕುತ್ತಿದ್ದಾರೆ. ಎಲ್ಲ ಸಹೋದರ-ಸಹೋದರಿಯರಿಗೆ ನಾನಿಂದು ಭರವಸೆ ನೀಡುತ್ತಿದ್ದೇನೆ, ಯಾರೂ ಭಯಪಡಬೇಕಾಗಿಲ್ಲ. ನಾವು ತಾರತಮ್ಯ ಮಾಡುತ್ತಿಲ್ಲ. ನಾವು ಮುಸ್ಲಿಮರ ವಿರುದ್ಧ ದ್ವೇಷ ಸಾಧಿಸುತ್ತಿಲ್ಲ. ಅದನ್ನು ಸೃಷ್ಟಿಸಬೇಡಿ. ಈ ಮಸೂದೆಗೂ ಭಾರತೀಯ ಮುಸ್ಲಿಮರಿಗೂ ಯಾವುದೇ ನಂಟು ಇಲ್ಲ' ಎಂದು ಹೇಳಿದರು.

ಇಂದಿರಾ ಗಾಂಧಿ ಏಕೆ ನೀಡಿರಲಿಲ್ಲ?

ಇಂದಿರಾ ಗಾಂಧಿ ಏಕೆ ನೀಡಿರಲಿಲ್ಲ?

'1971ರಲ್ಲಿ ಬಾಂಗ್ಲಾದೇಶದಿಂದ ಬಂದ ಎಲ್ಲರಿಗೂ ಭಾರತದ ಪೌರತ್ವ ನೀಡಲು ಇಂದಿರಾ ಗಾಂಧಿ ನಿರ್ಧರಿಸಿದ್ದರು. ಹಾಗಾದರೆ ಆಗ ಪಾಕಿಸ್ತಾನದಿಂದ ಬಂದವರಿಗೆ ಏಕೆ ಪೌರತ್ವ ನೀಡಿರಲಿಲ್ಲ? 1971ರ ಬಳಿಕವೂ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಧಾರ್ಮಿಕ ಶೋಷಣೆಗೆ ಒಳಪಡುತ್ತಲೇ ಇದ್ದಾರೆ. ಹತ್ಯಾಕಾಂಡ ಇನ್ನೂ ನಿಂತಿಲ್ಲ' ಎಂದು ಶಾ ಹೇಳಿದರು.

English summary
Home Minister Amit Shah in Lok Sabha during Parliament Winter Session said, Indian Muslims have no nothing to fear on Citizenship Amendment Bill 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X