ಸಜ್ಜನ್ ಜಿಂದಾಲ್-ನವಾಜ್ ಷರೀಫ್ ಪಾಕ್ ನಲ್ಲಿ ಭೇಟಿ, ಏನೀ ರಹಸ್ಯ?
ಪಾಕಿಸ್ತಾನದಲ್ಲಿ ಗುರುವಾರ ಪ್ರಧಾನಿ ನವಾಜ್ ಷರೀಫ್ ರನ್ನು ಉದ್ಯಮಿ ಸಜ್ಜನ್ ಜಿಂದಾಲ್ ಭೇಟಿಯಾಗಿದ್ದಾರೆ. ಈ ಮಾತುಕತೆ ಬಗ್ಗೆ ನಾನಾ ರೀತಿಯಲ್ಲಿ ಸುದ್ದಿ ಹರಿದಾಡುತ್ತಿದೆ. ಪಾಕಿಸ್ತಾನದಲ್ಲಿ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ
ನವದೆಹಲಿ, ಏಪ್ರಿಲ್ 28: ಪಾಕಿಸ್ತಾನ ಜತೆಗೆ ಸಂಬಂಧ ಸುಧಾರಣೆ ವಿಚಾರವಾಗಿ ಭಾರತ ಹೊಸ ಬಗೆಯ ಪ್ರಯತ್ನ ಅರಂಭಿಸಿದೆಯಾ ಎಂಬ ಪ್ರಶ್ನೆ ಮೂಡುವಂಥ ಬೆಳವಣಿಗೆಯೊಂದು ನಡೆದಿದೆ. ಉದ್ಯಮಿ ಸಜ್ಜನ್ ಜಿಂದಾಲ್ ಗುರುವಾರ ಪಾಕಿಸ್ತಾನದ ಪ್ರಧಾನಮಂತ್ರಿ ನವಾಜ್ ಷರೀಫ್ ರನ್ನು ಭೇಟಿ ಮಾಡಿದ್ದಾರೆ.
ಆ ಹಿನ್ನೆಲೆಯಲ್ಲಿ ಎರಡೂ ದೇಶಗಳ ಮಧ್ಯೆ ದ್ವಿಪಕ್ಷೀಯ ಮಾತುಕತೆಗೆ ಹೊಸ ಪ್ರಯತ್ನ ನಡೆದಿದೆಯಾ ಎಂಬ ಗುಮಾನಿ ಮೂಡಿದೆ. ಕಾಂಗ್ರೆಸ್ ನ ನವೀನ್ ಜಿಂದಾಲ್ ಅವರ ಸಹೋದರ ಈ ಸಜ್ಜನ್ ಜಿಂದಾಲ್. 2015ರಲ್ಲಿ ನವಾಜ್ ಷರೀಫ್ ಜನ್ಮದಿನ ಹಾಗೂ ಅವರ ಮೊಮ್ಮಗಳ ಮದುವೆ ವೇಳೆ ಪಾಕ್ ಗೆ ಮೋದಿ ದಿಢೀರ್ ಭೇಟಿ ವ್ಯವಸ್ಥೆ ಮಾಡಿಸಿದ್ದು ಇದೇ ಸಜ್ಜನ್ ಜಿಂದಾಲ್ ಎಂಬ ಮಾತಿದೆ.[ಪಾಕಿಸ್ತಾನಕ್ಕೆ ನೀರಿಳಿಸಿದ ತಾರೀಕ್ ಫತಾ ಮಾತು ಕೇಳಿದಿರಾ?]
Mr. Jindal is an old friend of the Prime Minister. Nothing 'secret' about the meeting & should not be blown out of proportion. Thank you.
— Maryam Nawaz Sharif (@MaryamNSharif) 27 April 2017
ನೇಪಾಳದಲ್ಲಿ 2014ರಲ್ಲಿ ನಡೆದ ಸಾರ್ಕ್ ಸಮ್ಮೇಳನದ ಸಂದರ್ಭದಲ್ಲೂ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರಂತೆ ಸಜ್ಜನ್. ಅಂದಹಾಗೆ, ಷರೀಫ್ ರನ್ನು ಜಿಂದಾಲ್ ಭೇಟಿ ಮಾಡಿರುವುದು ಇಸ್ಲಾಮಾಬಾದ್ ನಿಂದ 45 ಕಿಲೋಮೀಟರ್ ದೂರವಿರುವ ಮರ್ರಿ ಎಂಬಲ್ಲಿರುವ ಖಾಸಗಿ ನಿವಾಸದಲ್ಲಿ.
ಬರಮಾಡಿಕೊಂಡವರು ಪ್ರಧಾನಿ ಕುಟುಂಬದವರು
ಆಫ್ಘಾನಿಸ್ತಾನದಿಂದ ಇಸ್ಲಾಮಾಬಾದ್ ವಿಮಾನ ನಿಲ್ದಾಣಕ್ಕೆ ಬಂದ ಸಜ್ಜನ್ ಜಿಂದಾಲ್ ರನ್ನು ನವಾಜ್ ಷರೀಫ್ ಕುಟುಂಬ ಸದಸ್ಯರೇ ಬರಮಾಡಿಕೊಂಡಿದ್ದಾರೆ. ಅಲ್ಲಿಂದ ಮರ್ರಿಗೆ ಕರೆದೊಯ್ಯಲಾಗಿದೆ. ಈ ವೇಳೆ ನವಾಜ್ ಷರೀಫ್ ರೊಂದಿಗೆ ಜಿಂದಾಲ್ ಒಂದು ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ.
ಭೇಟಿ ರಹಸ್ಯ ಜನರಿಗೆ ತಿಳಿಸಿ ಎಂದ ವಿಪಕ್ಷಗಳು
ಇದೇ ವೇಳೆ ಈ ಭೇಟಿಗೆ ಪಾಕಿಸ್ತಾನದಲ್ಲಿನ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಪಾಕಿಸ್ತಾನದ ಪಂಜಾಬ್ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಮಿಯಾನ್ ಮಹ್ಮದುರ್ ರಷೀದ್ ನಿರ್ಣಯವೊಂದನ್ನು ಸಲ್ಲಿಸಿದ್ದಾರೆ. "ಜಿಂದಾಲ್ ರೊಂದಿಗೆ ಈ ರಹಸ್ಯ ಸಭೆಯನ್ನು ಏರ್ಪಡಿಸಿದ್ದು ಏಕೆ ಎಂಬುದನ್ನು ಪಾಕಿಸ್ತಾನದ ಜನತೆಗೆ ತಿಳಿಸಬೇಕು" ಎಂದು ನಿರ್ಣಯದಲ್ಲಿ ಕೇಳಲಾಗಿದೆ.
ಕುಲಭೂಷಣ್ ಜಾಧವ್ ವಿಚಾರ ಎಂದ ಇಮ್ರಾನ್ ಖಾನ್
ಕುಲಭೂಷಣ್ ಜಾಧವ್ ಮರಣದಂಡನೆ ವಿಚಾರವಾಗಿ ಮೋದಿ ಅವರು ಕಳಿಸಿರುವ ಸಂದೇಶವನ್ನು ಪ್ರಧಾನಿ ನವಾಜ್ ಷರೀಫ್ ಗೆ ತಲುಪಿಸಲು ಜಿಂದಾಲ್ ಬಂದಿದ್ದರು ಎಂದು ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್ ಆರೋಪ ಮಾಡಿದ್ದಾರೆ.
ಷರೀಫ್ ಪುತ್ರಿ ಮರ್ಯಾನ್ ಸ್ಪಷ್ಟನೆ
ಈ ಎಲ್ಲ ವಿವಾದ, ಆಕ್ಷೇಪಗಳಿಗೆ ಪ್ರತಿಕಿರಿಯಿಸಿರುವ ನವಾಜ್ ಷರೀಫ್ ಅವರ ಪುತ್ರಿ ಮರ್ಯಾಮ್, ಇ ಭೇಟಿಯಲ್ಲಿ ಯಾವುದೇ 'ರಹಸ್ಯ' ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಸಜ್ಜನ್ ಜಿಂದಾಲ್ ಅವರು ಜೆಎಸ್ ಡಬ್ಲ್ಯು ಗುಂಪಿನ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು.