ಭಾರತೀಯ ಉದ್ಯಮಿ ಅನಿಲ್ ಅಂಬಾನಿ ಮೇಲೂ 'ಪೆಗಾಸಸ್ ಕಣ್ಣು'!
ನವದೆಹಲಿ, ಜುಲೈ 23: ಭಾರತದ ದೊಡ್ಡ ಉದ್ಯಮಿ ಅನಿಲ್ ಅಂಬಾನಿ ಹಾಗೂ ಅನಿಲ್ ಧೀರುಭಾಯ್ ಅಂಬಾನಿ ಗ್ರೂಪ್ ಹಿರಿಯ ಅಧಿಕಾರಿಗಳ ಮೇಲೂ ಇಸ್ರೇಲಿನ ಬೇಹುಗಾರಿಕೆ ತಂತ್ರಾಂಶ ಪೆಗಾಸಸ್ ಕಣ್ಣಿಟ್ಟಿತ್ತು ಎಂದು ಗುರುವಾರ ಪ್ರಕಟಿಸಿದ ವರದಿಯಿಂದ ಗೊತ್ತಾಗಿದೆ.
ಉದ್ಯಮಿ ಅನಿಲ್ ಅಂಬಾನಿ ಮತ್ತು ರಿಲಾಯನ್ಸ್ ಹಿರಿಯ ಅಧಿಕಾರಿಯೊಬ್ಬರು ಬಳಸುತ್ತಿದ್ದ ಮೊಬೈಲ್ ಸಂಖ್ಯೆಗಳು ಸೋರಿಕೆಯಾಗಿದ್ದು, ಪೆಗಾಸಸ್ ಯೋಜನೆ ಒಕ್ಕೂಟದ ಮಾಧ್ಯಮ ಪಾಲುದಾರರ ಕೈ ಸೇರಿವೆ ಎಂದು 'ದಿ ವೈರ್' ವರದಿ ಮಾಡಿದೆ.
ಪೆಗಾಸಸ್; ಸಿಬಿಐ ಮುಖ್ಯಸ್ಥರ ಕರೆ ಮೇಲೂ ನಿಗಾ ವಹಿಸಲಾಗಿತ್ತು!
ರಿಲಾಯನ್ಸ್ ಕಂಪನಿಯ ಮುಖ್ಯಸ್ಥ ಅನಿಲ್ ಅಂಬಾನಿಯ ಹೊರತಾಗಿ ಕಾರ್ಪೊರೇಟ್ ಸಂವಹನ ಮುಖ್ಯಸ್ಥ ಟೋನಿ ಜೆಸುದಾಸನ್ ಮತ್ತು ಅವರ ಪತ್ನಿ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಇತರೆ ಕಂಪನಿಯ ಅಧಿಕಾರಿಗಳು" ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ಅನಿಲ್ ಅಂಬಾನಿ ಪ್ರಸ್ತುತ ಪಟ್ಟಿ ಮಾಡಲಾದ ಸಂಖ್ಯೆಯನ್ನು ಬಳಸುತ್ತಾರೆಯೇ ಇಲ್ಲವೇ ಎಂದು ಖಚಿತಪಡಿಸುವುದಕ್ಕೆ ಸಾಧ್ಯವಿಲ್ಲ. ಇನ್ನು ಈ ವರದಿ ಬಗ್ಗೆ ಅನಿಲ್ ಧೀರುಭಾಯ್ ಅಂಬಾನಿ ಗ್ರೂಪ್ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ.
2018 ರಿಂದ 2019ರ ಅವಧಿಯಲ್ಲಿ ದತ್ತಾಂಶ ಸೋರಿಕೆ
ಕಳೆದ 2018 ಮತ್ತು 2019ರ ಅವಧಿಯಲ್ಲಿ ಭಾರತದ ಡಸಾಲ್ಟ್ ಏವಿಯೇಷನ್ನ ಪ್ರತಿನಿಧಿ ವೆಂಕಟ ರಾವ್ ಪೊಸಿನಾ, ಮಾಜಿ ಸಾಬ್ ಇಂಡಿಯಾ ಮುಖ್ಯಸ್ಥ ಇಂದರ್ಜಿತ್ ಸಿಯಾಲ್ ಮತ್ತು ಬೋಯಿಂಗ್ ಇಂಡಿಯಾ ಬಾಸ್ ಪ್ರತ್ಯುಷ್ ಕುಮಾರ್ ಸೇರಿದಂತೆ ಹಲವರಿಗೆ ಸಂಬಂಧಿಸಿದ ದತ್ತಾಂಶಗಳು ಸೋರಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಫ್ರೆಂಚ್ ಸಂಸ್ಥೆಯ ಎನರ್ಜಿ ಇಡಿಎಫ್ನ ಮುಖ್ಯಸ್ಥ ಹರ್ಮನ್ಜಿತ್ ನೇಗಿ ಸಂಖ್ಯೆಯೂ ಸೋರಿಕೆಯಾದ ದತ್ತಾಂಶಗಳ ಪಟ್ಟಿಯಲ್ಲಿದೆ. ಇದೇ ಅವಧಿಯಲ್ಲಿ ಫ್ರೆಂಚ್ ಅಧ್ಯಕ್ಷರ ಭಾರತ ಭೇಟಿಯ ಸಂದರ್ಭದಲ್ಲಿ ಅವರು ಎಮ್ಯಾನುಯೆಲ್ ಮ್ಯಾಕ್ರನ್ರ ಅಧಿಕೃತ ನಿಯೋಗದ ಸದಸ್ಯರಾಗಿದ್ದರು ಎಂದು ತಿಳಿದು ಬಂದಿದೆ.
ದೇಶದಲ್ಲಿ ಯಾರ ಮೇಲೆ ನಡೆದಿದೆ ಬೇಹುಗಾರಿಕೆ?
ಇಸ್ರೇಲ್ ಮೂಲದ ಪೆಗಾಸಸ್ ತಂತ್ರಾಂಶವನ್ನು ಬಳಸಿಕೊಂಡು ಭಾರತದಲ್ಲಿ ಬೇಹುಗಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ. ದೇಶದ ಪ್ರಮುಖ ರಾಜಕಾರಣಿಗಳು, ಕೇಂದ್ರ ಸಚಿವರು, ನ್ಯಾಯಾಧೀಶರು ಹಾಗೂ ಪತ್ರಕರ್ತರ ಮೊಬೈಲ್ ಸಂಖ್ಯೆ ಹ್ಯಾಕ್ ಮಾಡಲಾಗುತ್ತಿದೆ ಎಂದ ಆರೋಪವಿದೆ. ಈ ಬೇಹಾಗಾರಿಕೆಗೆ ಒಳಗಾದವರ ಪಟ್ಟಿಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ, ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಪಟೇಲ್ ಮತ್ತು ಅಶ್ವಿನಿ ವೈಷ್ಣವ್ ಜೊತೆಗೆ 40 ಮಂದಿ ಪತ್ರಕರ್ತರ ಹೆಸರು ಕೂಡ ಸೇರಿದೆ.
"ಪೆಗಾಸಸ್ ಬೇಹುಗಾರಿಕೆ ಆಧಾರರಹಿತ ಆರೋಪ"
ಪೆಗಾಸಸ್ ತಂತ್ರಾಂಶದ ಮೂಲಕ ಬೇಹುಗಾರಿಕೆ ನಡೆಸಲಾಗುತ್ತಿದೆ ಎಂಬ ವರದಿಯು ಆಧಾರ ರಹಿತ ಆರೋಪವಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಸಂಸತ್ ಅಧಿವೇಶನದ ಮೂರನೇ ದಿನವಾದ ಗುರುವಾರ ರಾಜ್ಯಸಭೆಯಲ್ಲಿ ಅವರು ಮಾತನಾಡಿದರು. "ಈ ಬೇಹುಗಾರಿಕೆ ಆರೋಪದ ಹಿಂದೆ ಎಲ್ಲ ಪ್ರತಿಪಕ್ಷಗಳ ಕೈವಾಡವಿದೆ. ಪೆಗಾಸಸ್ ಮೂಲಕ ಗೂಢಾಚಾರಿಕೆ ನಡೆಸಿರುವ ಬಗ್ಗೆ ಯಾವುದೇ ಆಧಾರಗಳಿಲ್ಲದೇ ಆರೋಪಿಸಲಾಗುತ್ತಿದೆ," ಎಂದು ಹೇಳಿದರು.
ಪೆಗಾಸಸ್ ಗೂಢಾಚಾರಿಕೆ ಬಗ್ಗೆ ತನಿಖೆ ವರದಿ ಪ್ರಕಟ
ಜಾಗತಿಕ ಸುದ್ದಿ ಸಂಸ್ಥೆಗಳಾಗಿರುವ ವಾಶಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್, ಲೇ ಮೊಂಡೆ ಜೊತೆ ಸಹಯೋಗ ಹೊಂದಿರುವ 'ದಿ ವೈರ್' ಪೆಗಾಸಸ್ ಬೇಹುಗಾರಿಕೆ ಕುರಿತು ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಮಾಧ್ಯಮ ಪಾಲುದಾರ ಸಂಸ್ಥೆ ಆಗಿರುವ ಪ್ಯಾರಿಸ್ ಮೂಲದ 'ನಾನ್ ಪ್ರಾಫಿಟ್ ಆರ್ಗನೈಸೇಷನ್ ಫಾರ್ಬಿಡನ್ ಸ್ಟೋರೀಸ್ ಮತ್ತು ರೈಟ್ಸ್ ಗ್ರೂಪ್ ಅಮ್ನೆಸ್ಟಿ ಇಂಟರ್ ನ್ಯಾಷನಲ್' ಸಂಸ್ಥೆಗಳು ಈ ಕುರಿತು ತನಿಖೆ ನಡೆಸಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿಶ್ವದಲ್ಲಿ ಒಟ್ಟು 50,000 ಮೊಬೈಲ್ ಸಂಖ್ಯೆಗಳ ಸೋರಿಕೆ
ಇಸ್ರೇಲ್ ಕಣ್ಗಾವಲು ಕಂಪನಿ ಎನ್ಎಸ್ಒ ಗ್ರೂಪ್ನ ಪೆಗಾಸಸ್ ತಂತ್ರಾಂಶವನ್ನು ಬಳಸಿಕೊಂಡು ಜಗತ್ತಿನಾದ್ಯಂತ ಸಾವಿರಾರು ಗಣ್ಯರ ಮೊಬೈಲ್ ಸಂಖ್ಯೆಯನ್ನು ಕದಿಯಲಾಗಿದೆ ಎಂದು ತನಿಖಾ ವರದಿಯಿಂದ ಗೊತ್ತಾಗಿದೆ. ವಿಶ್ವದಲ್ಲಿ ಒಟ್ಟು 50,000ಕ್ಕೂ ಅಧಿಕ ಮೊಬೈಲ್ ಸಂಖ್ಯೆಗಳನ್ನು ಕದ್ದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.