ನಾಗರಿಕರ ಮೇಲೆ ದೌರ್ಜನ್ಯ: ಶೆಹ್ಲಾ ರಶೀದ್ ಆರೋಪ ನಿರಾಕರಿಸಿದ ಸೇನೆ
ನವದೆಹಲಿ, ಆಗಸ್ಟ್ 19: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ದೌರ್ಜನ್ಯ ನಡೆಯುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್ ನಾಯಕಿ ಶೆಹ್ಲಾ ರಶೀದ್ ಅವರ ಆರೋಪವನ್ನು 'ಆಧಾರರಹಿತ' ಎಂದು ಸೇನೆ ತಳ್ಳಿಹಾಕಿದೆ.
'ಶೆಹ್ಲಾ ರಶೀದ್ ಅವರ ಆರೋಪಗಳು ಆಧಾರರಹಿತ ಮತ್ತು ತಿರಸ್ಕೃತವಾಗಿವೆ. ಅಪಾಯಕಾರಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಅರಿವಿಲ್ಲದ ಜನರನ್ನು ಪ್ರಚೋದಿಸಲು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ' ಎಂದು ಸೇನೆ ಹೇಳಿಕೆ ನೀಡಿದೆ.
'ಅಕ್ಬರ್' ದಿ ಗ್ರೇಟ್: ಸೈಯದ್ ಅಕ್ಬರುದ್ದೀನ್ ಉತ್ತರಕ್ಕೆ ಪಾಕ್ ಪತ್ರಕರ್ತರು ಗಪ್ಚುಪ್!
ಭಾನುವಾರ ಸರಣಿ ಟ್ವೀಟ್ಗಳನ್ನು ಮಾಡಿದ್ದ ಶೆಹ್ಲಾ ರಶೀದ್, 'ಜಮ್ಮು ಮತ್ತು ಕಾಶ್ಮೀರದ ಪೊಲೀಸರಿಗೆ ಕಾನೂನು ಸುವ್ಯವಸ್ಥೆಯ ಮೇಲೆ ಯಾವುದೇ ಅಧಿಕಾರ ಇಲ್ಲ ಎಂದು ಜನರು ಹೇಳುತ್ತಿದ್ದಾರೆ. ಅವರನ್ನು ಅಧಿಕಾರಹೀನರನ್ನಾಗಿ ಮಾಡಲಾಗಿದೆ. ಎಲ್ಲವೂ ಸಂಸದೀಯ ಶಕ್ತಿಗಳ ಕೈಯಲ್ಲಿವೆ. ಸಿಆರ್ಪಿಎಫ್ ಸಿಬ್ಬಂದಿಯೊಬ್ಬರ ದೂರಿನ ಮೇರೆಗೆ ಒಬ್ಬ ಸ್ಟೇಷನ್ ಹೌಸ್ ಮಾಸ್ಟರ್ (ಎಸ್ಎಚ್ಓ) ಅವರನ್ನು ವರ್ಗಾವಣೆ ಮಾಡಲಾಗಿದೆ. ಎಸ್ಎಚ್ಓಗಳು ಲಾಠಿಗಳನ್ನು ಹಿಡಿದು ಓಡಾಡುತ್ತಿದ್ದಾರೆ. ಅವರ ಬಳಿ ಸರ್ವೀಸ್ ರಿವಾಲ್ವರ್ಗಳು ಕಾಣಿಸುತ್ತಿಲ್ಲ' ಎಂದು ಹೇಳಿದ್ದರು.
ಮನೆಗೆ ನುಗ್ಗುತ್ತಿದ್ದಾರೆ
'ಸೇನಾ ಪಡೆಗಳು ರಾತ್ರಿ ವೇಳೆ ಮನೆಗಳಿಗೆ ನುಗ್ಗಿ, ಯುವಕರನ್ನು ಬಂಧಿಸುತ್ತಿವೆ. ಮನೆಗಳನ್ನು ದೋಚಿ, ಧಾನ್ಯಗಳು, ಎಣ್ಣೆ, ಅಕ್ಕಿ ಮುಂತಾದವುಗಳನ್ನು ಉದ್ದೇಶಪೂರ್ವಕವಾಗಿ ನೆಲಕ್ಕೆ ಸುರಿಯುತ್ತಿವೆ' ಎಂದು ಶೆಹ್ಲಾ ರಶೀದ್ ಮತ್ತೊಂದು ಟ್ವೀಟ್ನಲ್ಲಿ ಆರೋಪಿಸಿದ್ದರು.
ಜನರ ಓಡಾಟಕ್ಕೆ ಅನುಮತಿ ನೀಡುತ್ತಿಲ್ಲ
ಶ್ರೀನಗರದಲ್ಲಿ ಮತ್ತು ನೆರೆಯ ಜಿಲ್ಲೆಗಳಲ್ಲಿ ಜನರ ಓಡಾಟಕ್ಕೆ ಹೆಚ್ಚೂ ಕಡಿಮೆ ಅನುಮತಿ ನೀಡುತ್ತಿಲ್ಲ. ಸ್ಥಳೀಯ ಪತ್ರಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಅಡುಗೆ ಅನಿಲಗಳಿಗೆ ಕೊರತೆ ಉಂಟಾಗಿದೆ. ಅನಿಲ್ ಸಂಸ್ಥೆಗಳು ಮುಚ್ಚಿಕೊಂಡಿವೆ. ಅನಿಲ ಸ್ಟೇಷನ್ಗಳು ರಾತ್ರಿ ಏಳು ಗಂಟೆಯ ಬಳಿಕ ತೆರೆಯುತ್ತಿವೆ. ಪೆಟ್ರೋಲ್ ಮತ್ತು ಡೀಸೆಲ್ಗಳು ನಗರ ಪ್ರದೇಶದಲ್ಲಿ ಲಭ್ಯವಾಗುತ್ತಿವೆ. ಹೈವೇಗಳಲ್ಲಿ ಕೆಲವು ಪ್ರದೇಶಗಳಲ್ಲಿ ಬಂಕ್ಗಳು ತೆರೆದಿವೆ. ಪೂರೈಕೆ ಇದುವರೆಗೂ ಲಭ್ಯವಾಗುತ್ತಿವೆ. ಶಿಶು ಆಹಾರ ಸಿಗುವುದು ಕಷ್ಟವಾಗಿದೆ. ಜನರಿಗೆ ಔಷಧಗಳಿಗಾಗಿ ಸಂಕಷ್ಟಪಡುತ್ತಿದ್ದಾರೆ ಎಂದಿದ್ದರು.
370ನೇ ವಿಧಿ ರದ್ದು ಮಾಡಿದ ಮೋದಿ ನಿರ್ಧಾರವನ್ನು ಹಾಡಿ ಹೊಗಳಿದ ಭಗವಾನ್
ಉದ್ಯೋಗ ಪತ್ರಗಳು ಸಿಗುತ್ತಿಲ್ಲ
ಸಂವಹನ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಜನರಿಗೆ ಉದ್ಯೋಗ ಸಂದರ್ಶನದ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಸಂದರ್ಶನದ ಪತ್ರಗಳು ಬಂದ ಅಭ್ಯರ್ಥಿಗಳ ಮನೆಗಳಿಗೆ ನಾನು ವೈಯಕ್ತಿಕವಾಗಿ ಜನರನ್ನು ಕಳುಹಿಸಿ ಅವುಗಳನ್ನು ತಲುಪಿಸುತ್ತಿದ್ದೇನೆ. ಓಟಿಪಿ ಸಂದೇಶದ ಮೂಲಕ ಬರುತ್ತಿರುವುದರಿಂದ ಅವರ ಸ್ನೇಹಿತರು ಸಂದರ್ಶನ ಪತ್ರಗಳನ್ನು ಡೌನ್ಲೋಡ್ ಮಾಡಲು ಆಗುತ್ತಿಲ್ಲ ಎಂದು ತಿಳಿಸಿದ್ದರು.
ಭಯ ಹುಟ್ಟಿಸಲಾಗುತ್ತಿದೆ
ಜನರ ಸ್ಯಾಟಲೈಟ್ ಟಿವಿಗಳ ಚಂದಾದಾರಿಕೆ ಅಂತ್ಯಗೊಳ್ಳುತ್ತಿವೆ. ಹೊರರಾಜ್ಯದಿಂದ ರೀಚಾರ್ಜ್ ಮಾಡುವುದೊಂದೇ ಮಾರ್ಗವಾಗಿದೆ. ನಾನೇ ಕೆಲವು ಜನರ ಡಿ2ಎಚ್ ಸಂಪರ್ಕಗಳನ್ನು ರಿಚಾರ್ಜ್ ಮಾಡಿದ್ದೇನೆ. ಶೋಪಿಯಾನ್ನಲ್ಲಿ ನಾಲ್ಕು ಜನರನ್ನು ಸೇನಾ ಶಿಬಿರಕ್ಕೆ ಕರೆಯಿಸಿ ಅವರನ್ನು 'ವಿಚಾರಣೆ' (ಹಿಂಸೆ) ಮಾಡಲಾಗಿದೆ. ಅವರ ಬಳಿ ಮೈಕ್ ಇರಿಸಿ ಅವರ ಕೂಗಾಟವನ್ನು ಇಡೀ ಪ್ರದೇಶ ಕೇಳಿಸಿಕೊಳ್ಳುವಂತೆ ಮಾಡಿ ಭಯಹುಟ್ಟಿಸಲಾಗಿದೆ. ಇದು ಇಡೀ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ ಎಂದು ಅವರು ಟ್ವೀಟ್ ಮಾಡಿದ್ದರು.
ಮೋದಿ ಸರಕಾರದ ಹಿಡಿತದಲ್ಲಿ ಅಣ್ವಸ್ತ್ರ ಇರುವುದೇ ನಮ್ಮ ಆತಂಕ: ಇಮ್ರಾನ್ ಖಾನ್