ಲಡಾಖ್ ಗಡಿ ಸಂಘರ್ಷ: ಚೀನಾದ ಮೇಲೆ ನಿರಂತರ ಕಣ್ಣಿಟ್ಟಿರಬೇಕು ಎಂದ ಭಾರತೀಯ ಸೇನೆ
ನವದೆಹಲಿ, ಜುಲೈ 16: ಲಡಾಖ್ ಗಡಿಯಿಂದ ಚೀನಾ ಸೇನೆ ಹಿಂದೆ ಸರಿದಿದ್ದರೂ ಕೂಡ ಒಂದು ಕಣ್ಣಿಟ್ಟಿರಬೇಕು ಎಂದು ಭಾರತೀಯ ಸೇನೆ ಹೇಳಿದೆ.
Recommended Video
ಸಂಘರ್ಷದಿಂದ ಸಂಪೂರ್ಣ ಹಿಂದೆ ಸರಿಯುವ ಉದ್ದೇಶಕ್ಕೆ ಎರಡೂ ಕಡೆಯವರು ಬದ್ಧರಾಗಿರುತ್ತಾರೆ. ಆದರೆ ಸೇನೆ ಹಿಂಪಡೆಯುವ ಪ್ರಕ್ರಿಯೆಯು ಸಂಕೀರ್ಣವಾಗಿದ್ದು, ನಿರಂತರ ಪರಿಶೀಲನೆಯ ಅಗತ್ಯವಿದೆ ಎಂದು ಭಾರತೀಯ ಸೇನೆ ಹೇಳಿದೆ.
ಭಾರತ-ಚೀನಾ ಯೋಧರ ಘರ್ಷಣೆ; ವೈರಲ್ ಆದ ವಿಡಿಯೋ
ಪೂರ್ವ ಲಡಾಖ್ ನ ವಾಸ್ತವ ಗಡಿ ನಿಯಂತ್ರಣ(ಎಲ್ ಎಸಿ) ರೇಖೆಯಿಂದ ಸೇನೆಯನ್ನು ಸಂಪೂರ್ಣ ಹಿಂದಕ್ಕೆ ಪಡೆದುಕೊಳ್ಳುವುದಕ್ಕೆ ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ. ಆದರೆ ಪಿಎಲ್ಎಯಿಂದ ಚೀನಾ ಹಿಂದಕ್ಕೆ ಸರಿಯುವ ಕುರಿತು "ನಿರಂತರ ಪರಿಶೀಲನೆಯ ಅಗತ್ಯವಿದೆ ಎಂದು ಭಾರತೀಯ ಸೇನೆ ಒತ್ತಿ ಹೇಳಿದೆ.
ಎರಡು ಸ್ಥಳಗಳಿಂದ(ಪೆಟ್ರೋಲಿಂಗ್ ಪಾಯಿಂಟ್ಸ್ 14 ಮತ್ತು 15) ಸೇನೆಯನ್ನು ಸಂಪೂರ್ಣ ಹಿಂಪಡೆಯಲು ಉಭಯ ಸೇನೆಗಳು ಒಪ್ಪಿಕೊಂಡಿವೆ. ಹಾಟ್ ಸ್ಪ್ರಿಂಗ್ಸ್ ಮತ್ತು ಪ್ಯಾಂಗಾಂಗ್ ತ್ಸೋನಿಂದ ಭಾಗಶಃ ಸೇನೆಯನ್ನು ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಪ್ರದೇಶಗಳಿಂದಲೂ ಸೇನೆ ಹಿಂಪಡೆಯುವ ನಿರೀಕ್ಷೆಯಿದೆ ಎಂದು ಭಾರತೀಯ ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಉಭಯ ಸೇನೆಗಳ ಹಿರಿಯ ಕಮಾಂಡರ್ ಗಳ ನಡುವಿನ ಸಂಕೀರ್ಣ ಮಾತುಕತೆ ಸುಮಾರು 15 ಗಂಟೆಗಳ ಕಾಲ ನಡೆದಿದ್ದು, ಭಾರತೀಯ ನಿಯೋಗ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಗೆ ರೆಡ್ ಲೈನ್ಸ್ ಬಗ್ಗೆ ಮಾಹಿತಿ ನೀಡಿದ್ದು, ಈ ನಿರ್ದಿಷ್ಟ ಪ್ರದೇಶದಲ್ಲಿ ಸಂಪೂರ್ಣ ಪರಿಸ್ಥಿತಿಯ ಸುಧಾರಣೆಯ ಜವಾಬ್ದಾರಿ ಚೀನಾದ ಮೇಲಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.
ಎಲ್ಎಸಿಯಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣದ ಸುಧಾರಣೆಗಾಗಿ ನಡೆದ ಕಮಾಂಡರ್ ಮಟ್ಟದ ನಾಲ್ಕನೇ ಮಾತುಕತೆಯಲ್ಲಿ, ಈಗಿನ ಸ್ಥಳದಿಂದ ಪೂರ್ವನಿರ್ಧರಿತ ದೂರಕ್ಕೆ ಸೈನ್ಯವನ್ನು ಹಿಂತಿರುಗಿಸಲು ಎರಡೂ ಕಡೆಯವರು ನಿರ್ಧರಿಸಿದ್ದಾರೆ.