ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ಲಸಿಕೆ ಹಾಕುತ್ತೇವೆ: ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್
ನವದೆಹಲಿ, ಮೇ 28: ಭಾರತದ ಪ್ರತಿಯೊಬ್ಬರಿಯೂ ಈ ವರ್ಷದ ಡಿಸೆಂಬರ್ ಅಂತ್ಯದ ಒಳಗೆ ಲಸಿಕೆಯನ್ನು ಹಾಕಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಘೋಷಿಸಿದ್ದಾರೆ. ಭಾರತದಲ್ಲಿ ಲಸಿಕೆ ಅಭಿಯಾನ ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ರಾಹುಲ್ ಗಾಂಧಿ ಟೀಕಿಸಿದ ನಂತರ ಈ ರೀತಿ ತಿರುಗೇಟು ನೀಡಿದ್ದಾರೆ.
ಆರೋಗ್ಯ ಸಚಿವಾಲಯ ರೂಪಿಸಿದ ನೀಲನಕ್ಷೆಯನ್ನು ಉಲ್ಲೇಖಿಸಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ರಾಹುಲ್ ಗಾಂಧಿ ಮಾತಿಗೆ ಪ್ರತ್ಯುತ್ತರವನ್ನು ನೀಡಿದ್ದಾರೆ. ಡಿಸೆಂಬರ್ ವೇಳೆಗೆ ಭಾರತದ 108 ಕೋಟಿ ಜನರಿಗೆ ಲಸಿಕೆಯನ್ನು ನೀಡುವುದನ್ನು ಖಚಿತಪಡಿಸುತ್ತೇವೆ. ವೇಗವಾಗಿ ಲಸಿಕೆ ನೀಡುವುದರಲ್ಲಿ ಭಾರತ ಸ್ಥಾನದಲ್ಲಿದೆ. ಇಲ್ಲಿಯ ವರೆಗೆ 20 ಕೋಟಿ ಡೋಸ್ಗಳನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕೇಂದ್ರಕ್ಕೆ ಕೋವಿಡ್ 19 ಅರ್ಥವೇ ಆಗಿಲ್ಲ, ಈ ಪರಿಸ್ಥಿತಿಗೆ ಸರ್ಕಾರವೇ ಹೊಣೆ: ರಾಹುಲ್ ಗಾಂಧಿ
"2021ರ ಅಂತ್ಯದ ಒಳಗೆ ಭಾರತದ ಲಸಿಕಾ ಅಭಿಯಾನ ಅಂತ್ಯವಾಗುತ್ತದೆ. ಇದಕ್ಕೆ ಪೂರಕವಾದ ನೀಲನಕ್ಷೆಯನ್ನು ಆರೋಗ್ಯ ಸಚಿವಾಲಯ ರೂಪಿಸಿದೆ. 108 ಕೋಟಿ ಜನರು, 216 ಕೋಟಿ ಡೋಸ್ಗಳು. ನಾವು ಡಿಸೆಂಬರ್ ಒಳಗೆ ಸಂಪೂರ್ಣವಾಗಿ ಲಸಿಕೆ ಹಾಕಲಾಗುತ್ತದೆ ರಾಹುಲ್ ಅವರೇ" ಎಂದು ಪ್ರಕಾಶ್ ಜಾವಡೇಕರ್ ಉತ್ತರಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ಲಸಿಕೆಯ ಕೊರತೆಯಿದೆ ಎಂದು ಹೇಳುತ್ತಿರುವ ಕೆಲ ರಾಜ್ಯಗಳ ಮೇಲೆಯೂ ಆರೋಪವನ್ನು ಹೊರಿಸಿದ್ದಾರೆ. ಮೇ 1 ರಿಂದ ನೀಡಲಾಗುತ್ತಿರುವ 18-44 ವರ್ಷದೊಳಗಿನವರ ಲಸಿಕೆಯ ಕೋಟಾವನ್ನು ಕೆಲ ರಾಜ್ಯಗಳು ಪಡೆದುಕೊಳ್ಳುತ್ತಿಲ್ಲ ಎಂದಿದ್ದಾರೆ.
ಕೋವಿಡ್ 19: ಮೇ 28ರಂದು ವಿಶ್ವದಲ್ಲಿ ಎಷ್ಟು ಮಂದಿ ಚೇತರಿಕೆ?
ಇನ್ನು ಇದೇ ಸಂದರ್ಭದಲ್ಲಿ ಭಾರತ್ ಬಯೋಟೆಕ್ ಉತ್ಪಾದಿಸಿದ ಕೊವಾಕ್ಸಿನ್ ಲಸಿಕೆಯ ಸುರಕ್ಷತೆಯ ಬಗ್ಗೆ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಅನುಮಾನವನ್ನು ವ್ಯಕ್ತಪಡಿಸಿದರು ಎಂದು ಟೀಕಿಸಿದ್ದಾರೆ. ಕೊವಾಕ್ಸಿನ್ಗೆ ಜನವರಿಯಲ್ಲಿಯೇ ಒಪ್ಪಿಗೆ ದೊರೆತಿತ್ತು. ಆದರೆ ವೈದ್ಯಕೀಯ ತಜ್ಞರು, ಸಿವಿಲ್ ಸೊಸೈಟಿ ಗ್ರೂಪ್ಗಳು ಮತ್ತು ಕಾಂಗ್ರೆಸ್ನ ನಾಯಕರು ಲಸಿಕೆಯ ಸುರಕ್ಷತೆಯ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದರು. ಆದರೆ ಮಾರ್ಚ್ ತಿಂಗಳಲ್ಲಿ ಆ ಪ್ರಶ್ನೆಗಳಿಗೆ ಉತ್ತರ ದೊರೆತಿದ್ದು 81 ಪ್ರತಿಶತ ಪರಿಣಾಮಕಾರಿಯಾಗಿದೆ ಎಂದು ಖಚಿತವಾಗಿದೆ ಎಂದಿದ್ದಾರೆ ಪ್ರಕಾಶ್ ಜಾವಡೇಕರ್.