ಕೋವಿಡ್ ಲಸಿಕೆ ಜೊತೆಗೆ ಹಣದುಬ್ಬರದ ಕಡೆಗೂ ಗಮನವಿರಲಿ: ಭಾರತಕ್ಕೆ ಗೀತಾ ಕಿವಿಮಾತು
ನವದೆಹಲಿ, ಅಕ್ಟೋಬರ್ 14: "ಬೇರೆ ರಾಷ್ಟ್ರಗಳು ವರ್ಷಾಂತ್ಯದವರೆಗೆ ತಮ್ಮ ದೇಶದ ಜನಸಂಖ್ಯೆಯ ಶೇಕಡಾ 40ರಷ್ಟು ಜನರಿಗೆ ಕೋವಿಡ್ ಲಸಿಕೆ ಹಾಕಲು ಹೆಣಗುತ್ತಿದ್ದರೂ, ಭಾರತ ಶೇಕಡಾ 50ರಷ್ಟು ಜನಸಂಖ್ಯೆಗೆ ಲಸಿಕೆ ಹಾಕಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ," ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.
"ಕೋವಿಡ್- 19 ಮೂರನೇ ಅಲೆಯ ಆತಂಕ ಇನ್ನೂ ದೂರವಾಗಿಲ್ಲ. ಆದ್ದರಿಂದ ಎಚ್ಚರದಿಂದರಬೇಕು ಮತ್ತು ಹಣದುಬ್ಬರದ ಮೇಲೂ ಒಂದು ದೃಷ್ಟಿಯಿಡಬೇಕಾದ ಅನಿವಾರ್ಯತೆ ಭಾರತ ದೇಶಕ್ಕಿದೆ," ಎಂದಿದ್ದಾರೆ.
ಬುಧವಾರದಂದು ಎನ್ಡಿಟಿವಿ ಜೊತೆ ಮಾತಾಡಿದ ಗೀತಾ ಗೋಪಿನಾಥ್, "ಜಗತ್ತಿನ ಎಲ್ಲಾ ದೇಶಗಳಿಗೆ ತಮ್ಮ ಜನಸಂಖ್ಯೆಯ ಶೇಕಡಾ 40ರಷ್ಟು ಭಾಗಕ್ಕೆ ಕೋವಿಡ್ ಲಸಿಕೆ ಹಾಕಿಸುವ ಟಾರ್ಗೆಟ್ ಇತ್ತು. ಆದರೆ ಬಹಳಷ್ಟು ದೇಶಗಳು ಅಂದುಕೊಂಡ ಗುರಿ ಮುಟ್ಟಿದಿರುವುದು ಚಿಂತೆಗೆ ಕಾರಣವಾಗಿದೆ. ನಮ್ಮ ಗಮನ ಈ ಅಂಶದ ಮೇಲಿರಬೇಕು,'' ಎಂದು ತಿಳಿಸಿದರು.
ಭಾರತದಲ್ಲಿ ಇದುವರೆಗೆ 96.7 ಕೋಟಿ ಕೋವಿಡ್ ಲಸಿಕೆಯ ಡೋಸ್ಗಳನ್ನು ನೀಡಲಾಗಿದ್ದು, ಮುಂದಿನ ವಾರ ಶತಕೋಟಿ ಡೋಸ್ಗಳನ್ನು ದಾಟಿದ ಮೈಲಿಗಲ್ಲನ್ನು ಸ್ಥಾಪಿಸಲಿದೆ. ಈ ಗುರಿ ಬರುವ ಸೋಮವಾರ ಇಲ್ಲವೇ ಮಂಗಳವಾರದಂದು ಸ್ಥಾಪಿಸಲಾಗುವುದೆಂದು ಕೇಂದ್ರ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಅದೇ ಮೂಲಗಳ ಪ್ರಕಾರ ಸುಮಾರು ಶೇ.73ರಷ್ಟು ಜನ ಲಸಿಕೆಯ ಕನಿಷ್ಠ ಒಂದು ಡೋಸ್ನ್ನು ಪಡೆದಿದ್ದಾರೆ ಮತ್ತು ಶೇಕಡಾ 30ರಷ್ಟು ಜನ ಎರಡೂ ಡೋಸ್ಗಳನ್ನು ಪಡೆದುಕೊಂಡಿದ್ದಾರೆ.
"ಭಾರತ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾದರೂ, ಶೇ.50ರಷ್ಟು ಜನಕ್ಕೆ ಲಸಿಕೆ ನೀಡಿರುವುದು ಆತ್ಮವಿಶ್ವಾಸದಿಂದ ತುಳುಕುವಂತೆ ಮಾಡಿದೆ. ಅದರೆ ಕೊರೊನಾ ವೈರಸ್ ಮೂರನೇ ಅಲೆಯ ಭೀತಿ ತಲೆ ಮೇಲೆ ಹೊಯ್ದಾಡುತ್ತಲೇ ಇದೆ," ಎಂದು ಗೀತಾ ಗೋಪಿನಾಥ್ ಹೇಳಿದ್ದಾರೆ.
"ದೇಶದಲ್ಲಿ ಕೋವಿಡ್ ಲಸಿಕೆಯ ಪ್ರಮಾಣ ಹೆಚ್ಚಾದರೆ ಅದು ಭಾರತದ ಆರ್ಥಿಕ ಸ್ಥಿತಿಗೆ ನೆರವಾಗಲಿದೆ. ಮತ್ತೆ ಆರ್ಥಿಕ ವಲಯ ಪುಟಿದೇಳಲಿದೆ," ಎಂದು ಗೀತಾ ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್ ಲಸಿಕೆ ವಿಷಯದಲ್ಲಿ ಅಮೆರಿಕ ಜೊತೆ ಭಾರತವನ್ನು ಪರ್ಯಾಯವಾಗಿಟ್ಟು ಮಾತಾಡಿದ ಗೀತಾ ಗೋಪಿನಾಥ್, "ಅಮೆರಿಕಾದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನರಲ್ಲಿ ಅನ್ಯಮನಸ್ಕತೆ ಕಾಣುತ್ತಿದ್ದು, ಅದು ಆ ದೇಶದ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತಿದೆ," ಎಂದು ತಿಳಿಸಿದರು.
"ಅಮೆರಿಕಾದಲ್ಲಿ ನಾವು ಲಸಿಕೆ ಬಳಕೆ ಪ್ರಮಾಣ ಇಳಿಮುಖಗೊಂಡಿರುವದನ್ನು ನಾವು ಗಮನಿಸಿದ್ದೇವೆ. ಅಮೆರಿಕದ ಬೆಳವಣಿಗೆಯನ್ನು ಕೆಳಮಟ್ಟಕ್ಕೆ ಇಳಿಸಲು ಇದೂ ಒಂದು ಅಂಶವಾಗಿದೆ. ಡೆಲ್ಟಾ ರೂಪಾಂತರಿಯು ಬೆಳವಣಿಗೆಯ ವೇಗ ಕುಂಠಿತಗೊಳಿಸಿದ್ದೂ ಅಲ್ಲದೆ, ಲಸಿಕೆ ವಿತರಣೆಯ ಮೇಲೂ ಪರಿಣಾಮ ಬೀರಿದೆ,'' ಎಂದು ಅವರು ಹೇಳಿದರು.
"ಅಮೆರಿಕಾದಂತಹ ಮುಂದುವರಿದ ದೇಶದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನ ಹಿಂಜರಿಯುತ್ತಿದ್ದಾರೆ, ಮೂರನೇ ಅಲೆ ಭೀತಿಯಲ್ಲಿ ಲಸಿಕೆ ಪ್ರಮಾಣ ಹೆಚ್ಚಾಗಬೇಕೆನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ,'' ಎಂದು ಗೀತಾ ಹೇಳಿದರು.
ಕೋವಿಡ್ ವೈರಸ್ನಿಂದಾಗಿ ಆರ್ಥಿಕ ಮಾರುಕಟ್ಟೆಯಲ್ಲಿ ಹಲವಾರು ಸಮಸ್ಯೆಗಳನ್ನು ಭಾರತ ಎದುರಿಸುತ್ತಿದ್ದರೂ, ಅದು ಹಣದುಬ್ಬರದ ಮೇಲೆ ಕಣ್ಣಿಟ್ಟಿರಲೇಬೇಕಾದ ಅನಿವಾರ್ಯತೆ ಇದೆ.
"ಭಾರತದಲ್ಲಿ ತೈಲಗಳ ಬೆಲೆ ಹೆಚ್ಚುತ್ತಿದೆ, ವಿದ್ಯುಚ್ಛಕ್ತಿ ಸರಬರಾಜಿನಲ್ಲಿ ವ್ಯತ್ಯಯಗಳು ಉಂಟಾಗುತ್ತಿವೆ, ಇಂಧನದ ಬೆಲೆಯೂ ಜಾಸ್ತಿಯಾಗುತ್ತಿದೆ. ಈ ಎಲ್ಲ ಅಂಶಗಳ ನಡುವೆ ನಾವು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೇನೆಂದರೆ ಕೋವಿಡ್ ಪಿಡುಗನ್ನು ಇಲ್ಲವಾಗಿಸಬೇಕು. ಹೆಚ್ಚು ಹೆಚ್ಚು ಜನರಿಗೆ ಲಸಿಕೆಗಳನ್ನು ಹಾಕಿಸುವ ಮೂಲಕ ಆತ್ಮವಿಶ್ವಾಸವನ್ನು ಎತ್ತರದ ಸ್ಥಾನದಲ್ಲಿಟ್ಟುಕೊಳ್ಳಬೇಕು,'' ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.