ಕರ್ನಾಟಕ ಸೇರಿದಂತೆ 13 ರಾಜ್ಯಗಳಲ್ಲಿ ಧೂಳು ಬಿರುಗಾಳಿಯ ಭೀತಿ
ನವದೆಹಲಿ, ಮೇ 08: ದಕ್ಷಿಣ ಭಾರತದ ಕರ್ನಾಟಕ ಸೇರಿದಂತೆ, ಉತ್ತರ ಭಾರತ ಮತ್ತು ಈಶಾನ್ಯದ ಸುಮಾರು 13 ರಾಜ್ಯಗಳಲ್ಲಿ ಇನ್ನು 48 ಗಂಟೆಗಳಲ್ಲಿ ಧೂಳಿನ ಬಿರುಗಾಳಿ(dust storm) ಉಂಟಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಸಂದರ್ಭದಲ್ಲಿ ಜೋರಾಗಿ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಇಲಾಖೆ ಹೇಳಿದೆ. ಮುನ್ಸೂಚನೆಯಂತೆ ಈಗಾಗಲೇ ರಾಜಧಾನಿ ದೆಹಲಿಯಲ್ಲಿ ಧೂಳಿನ ಬಿರುಗಾಳಿ ಆರಂಭವಾಗಿದ್ದು, ಆರಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬವಾಗಿದೆ.
ಉತ್ತರ ಭಾರತ ಧೂಳು ಬಿರುಗಾಳಿ: ಸಾವಿಗೀಡಾದವರ ಸಂಖ್ಯೆ 124 ಕ್ಕೆ ಏರಿಕೆ
ಉತ್ತರ ಭಾರತದ ರಾಜ್ಯಗಳಾದ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಪಂಜಾಬ್, ನವದೆಹಲಿ, ಚಂಡಿಘರ್ ಗಳಲ್ಲಿ ಧೂಳಿನ ಬಿರುಗಾಳಿ ಸಂಭವಿಸಲಿದೆ. ಹಾಗೆಯೇ ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪೂರ್ವದಲ್ಲಿ ಪಶ್ಚಿಮ ಬಂಗಾಳ, ಬಿಹಾರ ರಾಜ್ಯಗಳು ಈ ಹೊಡೆತಕ್ಕೆ ಸಿಕ್ಕಬಹುದು ಎನ್ನಲಾಗಿದೆ.
ಹಾಗೆಯೇ ಈಶಾನ್ಯ ರಾಜ್ಯಗಳಾದ ಅಸ್ಸಾಮ್, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಮ್, ತ್ರಿಪುರಗಳೂ ಧೂಳು ಬಿರುಗಾಳಿ ಹೊಡೆತಕ್ಕೆ ನಲುಗಲಿವೆ. ಮುನ್ಸೂಚನೆಯ ಮಾಹಿತಿ ಸಿಕ್ಕುತ್ತಿದ್ದಂತೆಯೇ ಎಲ್ಲಾ 13 ರಾಜ್ಯಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ಕಳೆದ ವಾರವಷ್ಟೇ ಉತ್ತರ ಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ ಸಂಭವಿಸಿದ ಧೂಳು ಬಿರುಗಾಳಿಗೆ 125 ಜನ ಮೃತರಾಗಿದ್ದರೆ, 300 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.