ಭಾರತದಲ್ಲಿ ಕೊರೊನಾ 3ನೇ ಅಲೆ ತಡೆಗೆ ಲಾಕ್ಡೌನ್ ಅನಿವಾರ್ಯ: ಏಮ್ಸ್ ನಿರ್ದೇಶಕ
ನವದೆಹಲಿ, ಮೇ 05: ಭಾರತದಲ್ಲಿ ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಅನಿವಾರ್ಯವಾಗಿದೆ ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಸಲಹೆ ನೀಡಿದ್ದಾರೆ.
ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಈ ಸಂದರ್ಭದಲ್ಲಿ ಕಠಿಣ ಲಾಕ್ಡೌನ್ ವಿಧಿಸಲೇಬೇಕು ಇಲ್ಲದಿದ್ದರೆ ನಿಯಂತ್ರಣಕ್ಕೆ ತರುವುದು ಕಷ್ಟವಾಗುತ್ತದೆ ಎಂದಿದ್ದಾರೆ.
ಎಲ್ಲಾ ರಾಜ್ಯಗಳಲ್ಲಿ ಕೋವಿಡ್ ಲಸಿಕೆ ಎಷ್ಟಿದೆ?: ಕೇಂದ್ರ ಮಾಹಿತಿ
ಕೊರೊನಾ ಸೋಂಕು ಹೀಗೆ ರೂಪಾಂತರ ಕಾಣುತ್ತಾ ಹೋದರೆ ಪರಿಸ್ಥಿತಿ ಬಹಳ ಹದಗೆಡಬಹುದು ಎಂದು ಎಚ್ಚರಿಕೆ ನೀಡಿದ ಅವರು, ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯ ಲಾಕ್ಡೌನ್ಗಳಿಂದ ವೈರಸ್ ಸರಪಳಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಮಾನವ ಸಂಪರ್ಕವನ್ನು ಆದಷ್ಟು ಕಡಿಮೆ ಮಾಡಬೇಕಿದೆ. ಹಾಗಾದಾಗ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಕೊರೊನಾ ಸೋಂಕಿತ ಪ್ರಕರಣಗಳ ಪ್ರಮಾಣ ಶೇ.10ಕ್ಕಿಂತ ಹೆಚ್ಚಿರುವ ಅಥವಾ ಆಸ್ಪತ್ರೆ ಹಾಸಿಗೆಗಳು ಶೇ.60ಕ್ಕಿಂತ ಹೆಚ್ಚು ಭರ್ತಿಯಾಗಿದ್ದರೆ ಅಲ್ಲಿ ಲಾಕ್ಡೌನ್ ಹಾರಿಗೊಳಿಸಬೇಕು ಎಂದು ಹೇಳಿದ್ದರು.
ಕೊರೊನಾ ಪ್ರಕರಣ ಹೆಚ್ಚಾಗಿರುವ ಪ್ರದೇಶದಿಂದ ಕಡಿಮೆ ಇರುವ ಸ್ಥಳಗಳಿಗೆ ಜನರು ಪ್ರಯಾಣ ಬೆಳೆಸುವುದನ್ನು ಆದಷ್ಟು ಕಡಿಮೆ ಮಾಡಬೇಕು ಅಥವಾ ಅಂತಹ ಸಂದರ್ಭದಲ್ಲಿ ಕಠಿಣ ನಿಯಮ ರೂಪಿಸಬೇಕಿದೆ.
ಭಾರತದಲ್ಲಿ ಕೊರೊನಾ ಮೂರನೇ ಅಲೆ ಕಂಡುಬರುವ ಸಾಧ್ಯತೆ ಇದೆ, ಆದರೆ, ಹೆಚ್ಚು ಮಂದಿ ಲಸಿಕೆ ತೆಗೆದುಕೊಂಡರೆ ಸದ್ಯದ ಪರಿಸ್ಥಿತಿಯಷ್ಟು ಕೆಟ್ಟ ದಿನವನ್ನು ನಾವು ಮುಂದೆ ನೋಡಬೇಕಾಗಿ ಬರುವುದಿಲ್ಲ ಎಂದು ವಿವರಿಸಿದರು.
ದೇಶಾದ್ಯಂತ ಲಸಿಕೆ ಅಭಿಐಆನ ಚುರುಕುಗೊಳಿಸುವುದು, ಆಸ್ಪತ್ರೆಗಳ ಮೂಲ ಸೌಕರ್ಯವನ್ನು ಅಭಿವೃದ್ಧಿ ಪಡಿಸುವುದು ಹಾಗೂ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುವಂತೆ ನೋಡಿಕೊಳ್ಳುವುದು ಮುಖ್ಯವಾಗಿರುತ್ತದೆ.