ಸಿಎಂ ಕುಮಾರಸ್ವಾಮಿಯನ್ನು ಕ್ಲರ್ಕ್ ಮಾಡಿಕೊಂಡಿದೆ ಕಾಂಗ್ರೆಸ್: ಮೋದಿ
ನವದೆಹಲಿ, ಜನವರಿ 12: ದೇಶಕ್ಕೆ ಬಲಶಾಲಿಯಾದ (ಮಜಬೂತ್) ಸರ್ಕಾರ ಬೇಕಾಗಿದೆ ಆದರೆ ಕಾಂಗ್ರೆಸ್, ಮಹಾಘಟಬಂಧನ್ ಮೂಲಕ ಅಸಹಾಯಕ (ಮಜ್ಬೂರ್) ಸರ್ಕಾರ ರಚಿಸುವ ಯತ್ನ ಮಾಡುತ್ತಿದೆ ಎಂದು ನರೇಂದ್ರ ಮೋದಿ ಹೇಳಿದರು.
ಮೋದಿ ಮಾತಿಗೆ, ಕುಮಾರಸ್ವಾಮಿ ನೆಮ್ಮದಿಗೆ ಇರುವ ಆ ರಹಸ್ಯ ಲಿಂಕ್ ಏನು?
ನವದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು ಕರ್ನಾಟಕದ ಉದಾಹರಣೆ ನೀಡುತ್ತಾ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಮಿತ್ರ ಪಕ್ಷದ ಸಿಎಂ ಅನ್ನು ಕ್ಲರ್ಕ್ನಂತೆ ಬಳಸಿಕೊಳ್ಳುತ್ತಿದೆ ಎಂದರು.
'ಮೋದಿ ಏನೂ ವಾಜಪೇಯಿ ಅಲ್ಲ, ಬಿಜೆಪಿ ಜತೆ ಮೈತ್ರಿ ಸಾಧ್ಯವಿಲ್ಲ'
ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಪೂರ್ಣ ಬಹುಮತದೊಂದಿಗೆ ಬಂದ ಸರ್ಕಾರವೊಂದು ಒಂದೂ ಭ್ರಷ್ಟಾಚಾರದ ಆರೋಪಗಳಿಲ್ಲದೆ ಆಡಳಿತ ನಡೆಸಿದೆ. ಇದು ಬಿಜೆಪಿಗೆ ಹೆಮ್ಮೆ ಎಂದು ಮೋದಿ ಬೆನ್ನುತಟ್ಟಿಕೊಂಡರು.
ಯುಪಿಎ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಮೋದಿ, ನಮಗೆ ಹಿಂದೆ ಇದ್ದ ಸರ್ಕಾರ ಭಾರತವನ್ನು ಅಂಧಕಾರಕ್ಕೆ ತಳ್ಳಿತ್ತು ಭ್ರಷ್ಟಾಚಾರ-ಹಗರಣಗಳಲ್ಲಿ ಮುಳುಗಿ ಭಾರತದ ಅಮೂಲ್ಯ 10 ವರ್ಷವನ್ನು ಅದು ಹಾಳು ಮಾಡಿತು ಎಂದು ಮೋದಿ ಹೇಳಿದರು.
'ಭೇಟಿ ಪಡಾವೋ, ಭೇಟಿ ಬಚಾವೋ ಬಗ್ಗೆ ವ್ಯಂಗ್ಯ'
ಕಳೆದ ನಾಲ್ಕು ವರ್ಷಗಳಲ್ಲಿ ನಾವು ಹಲವು ಸಾಮಾಜಿಕ ಉನ್ನತಿಯ ಕೆಲಸಗಳನ್ನು ಮಾಡಿದ್ದೇವೆ. ನಮ್ಮ 'ಭೇಟಿ ಪಡಾವೊ, ಭೇಟಿ ಬಚಾವೊ' ಯೋಜನೆಯನ್ನು ಕೆಲವು ರಾಜಕಾರಣಿಗಳು ರಾಜಕೀಯ ಲಾಭಕ್ಕಾಗಿ ಗೇಲಿ ಮಾಡುತ್ತಿದ್ದಾರೆ. ಆದರೆ ನಾವು ಮಹಿಳೆಯನ್ನು ಶತಮಾನಗಳಿಂದ ಶೋಷಿಸಲಾಗುತ್ತಿದ್ದ ಕೆಟ್ಟ ಸಂಪ್ರದಾಯಗಳಿಂದ ಪಾರು ಮಾಡಿದ್ದೇವೆ ಎಂದು ಮೋದಿ ಹೇಳಿದರು.
'ಆರು ವರ್ಷದಲ್ಲಿ 34 ಲಕ್ಷ ಕೋಟಿ ಸಾಲ ನೀಡಲಾಗಿದೆ'
ಬ್ಯಾಂಕುಗಳು ಕಳೆದ 60 ವರ್ಷದಲ್ಲಿ 18 ಲಕ್ಷ ಕೋಟಿ ಹಣವನ್ನು ಸಾಲವಾಗಿ ನೀಡಿದ್ದವು ಆದರೆ ಕಳೆದ 6 ವರ್ಷಗಳಲ್ಲಿ 34 ಲಕ್ಷ ಕೋಟಿ ಹಣವನ್ನು ಸಾಲ ನೀಡಲಾಗಿದೆ. ದೇಶದಲ್ಲಿ ಎರಡು ರೀತಿಯ ಸಾಲ ಪಡೆವ ನಿಯಮ ಇದೆ, ಒಂದು ಬ್ಯಾಂಕ್ನದ್ದು ಮತ್ತೊಂದು ಕಾಂಗ್ರೆಸ್ನದ್ದು ಎಂದು ಮೋದಿ ಗೇಲಿ ಮಾಡಿದರು.
'ಮಹಾಘಟಬಂಧನ್ ವಿಫಲ ಮಾದರಿ'
ಮಹಾಘಟಬಂಧನ್ ಅನ್ನು ವಿಫಲ ಮಾದರಿ ಎಂದು ವ್ಯಂಗ್ಯ ಮಾಡಿದ ಮೋದಿ. ರಾಜಕೀಯ ಇತಿಹಾಸದಲ್ಲಿ ಮಹಾಘಟಬಂಧನ್ ಸೋತ ಮಾದರಿಯಾಗಿ ಎಲ್ಲರಿಗೂ ಪರಿಚಿತ ಅದನ್ನೇ ಮತ್ತೆ ಜನಗಳ ಮೇಳೆ ಹೊರಲು ಹೊರಟಿದ್ದಾರೆ. ಇವರಿಗೆ ಬಲಶಾಲಿ ಸರ್ಕಾರ ಬೇಕಿಲ್ಲ. ಇವರಿಗೆ ಅಸಹಾಯಕ ಸರ್ಕಾರ ಬೇಕಿದೆ ಎಂದು ವಿರೋಧಿಗಳನ್ನು ಮೋದಿ ಹಣಿದರು.
'ಅಯೋಧ್ಯೆ ಪ್ರಕರಣದ ದಿಕ್ಕು ತಪ್ಪಿಸುತ್ತಿದೆ ಕಾಂಗ್ರೆಸ್'
ಅಯೋಧ್ಯೆ ಪ್ರಕರಣದವನ್ನು ಕಾಂಗ್ರೆಸ್ ದಿಕ್ಕು ತಪ್ಪಿಸಲು ಯತ್ನಿಸುತ್ತಿದೆ. ಕಾಂಗ್ರೆಸ್ ಪಕ್ಷವು ತನ್ನ ವಕೀಲರನ್ನು ಬಳಸಿ ಅಯೋಧ್ಯೆ ಪ್ರಕರಣಕ್ಕೆ ಅಡ್ಡಗಾಲು ಹಾಕುತ್ತಿದೆ ಎಂದು ಮೋದಿ ಆರೋಪ ಮಾಡಿದರು. ಕಾಂಗ್ರೆಸ್ ಪಕ್ಷವಯ ಮುಖ್ಯ ನ್ಯಾಯಾಧೀಶರನ್ನು ಸಹ ಅನುಮಾನದಿಂದ ನೋಡುತ್ತಿದೆ. ಕಾಂಗ್ರೆಸ್ನದ್ದು ಎಂತಹಾ ಹೀನ ಮನಸ್ಥಿತಿ ಎಂದು ಅರ್ಥವಾಗುತ್ತಿಲ್ಲ ಎಂದು ಮೋದಿ ಹೇಳಿದರು.
ಸಿಬಿಐ ಪ್ರವೇಶವನ್ನೇ ನಿಷೇಧಿಸಿವೆ ರಾಜ್ಯಗಳು
ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಚತ್ತೀಸ್ಗಡ ರಾಜ್ಯಗಳು ಸಿಬಿಐ ಸಂಸ್ಥೆ ಪ್ರವೇಶಿಸುವುದನ್ನೇ ನಿಷೇಧ ಮಾಡಿವೆ. ಈ ರಾಜ್ಯಗಳ ಸರ್ಕಾರಕ್ಕೆ ಸಿಬಿಐನಿಂದ ಏಕೆ ಎದರಿಕೆ? ಹೆದರುವಂತಹಾ ತಪ್ಪು ಅವರು ಏನು ಮಾಡಿದ್ದಾರೆ? ಎಂದು ಮೋದಿ ಪ್ರಶ್ನೆ ಮಾಡಿದರು. ಸಿಬಿಐಗೆ ನಿಷೇಧ ಹೇರಿದವರು ಮುಂದೆ ಸೈನ್ಯ, ಸುಪ್ರಿಂಕೋರ್ಟ್, ಪೊಲೀಸ್, ಚುನಾವಣಾ ಆಯೋಗಗಳಂತಾ ಸಂಸ್ಥೆಗಳಿಗೂ ನಿಷೇಧ ಹೇರಬಹುದು ಎಂದು ಮೋದಿ ಅನುಮಾನ ವ್ಯಕ್ತಪಡಿಸಿದರು.
'ಅಮಿತ್ ಶಾ ರನ್ನು ಜೈಲಿಗೆ ಹಾಕಿದ್ದರು'
ಮೋದಿ ಕೆಲವೇ ತಿಂಗಳಲ್ಲಿ ಜೈಲಿಗೆ ಹೋಗುತ್ತಾರೆ ಎಂದು ಆಗಿನ ಕಾಂಗ್ರೆಸ್ ಮಂತ್ರಿ ಒಬ್ಬರು ಹೇಳಿದ್ದರು. ಅಮಿತ್ ಶಾ ಅವರನ್ನಂತೂ ಜೈಲಿಗೆ ಹಾಕಿಸಿಯೂ ಬಿಟ್ಟಿದ್ದರು ಆದರೆ ನಾವು ಸಿಬಿಐಗೆ ನಿಷೇಧ ಹೇರಿರಲಿಲ್ಲ. ನಮಗೆ ದೇಶದ ನ್ಯಾಯ ವ್ಯವಸ್ಥೆಯ ಮೇಲೆ ನಂಬಿಕೆ ಇತ್ತು ಎಂದು ಮೋದಿ ಹೇಳಿದರು.