'ಭಾರತ ಎಲ್ಲೆಡೆ ಅಧಿಕಾರ ಕಳೆದುಕೊಳ್ತಿದೆ' ಮೋದಿ ಸರ್ಕಾರದ ವಿರುದ್ಧ ರಾಹುಲ್ ಕಿಡಿ
ದೆಹಲಿ, ಜುಲೈ 15: ಭಾರತ ಸರ್ಕಾರದ ವಿದೇಶಾಂಗ ನೀತಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ವಾಗ್ದಾಳಿ ನಡೆಸಿದ್ದಾರೆ.
'ಭಾರತವೂ ಎಲ್ಲೆಡೆ ಅಧಿಕಾರ ಮತ್ತು ಗೌರವವನ್ನು ಕಳೆದುಕೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ಸಹ ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ' ಎಂದು ಟೀಕಿಸಿದ್ದಾರೆ.
ಭಾರತಕ್ಕೆ ಕೈ ಕೊಟ್ಟ ಇರಾನ್: ಚೀನಾ ಜೊತೆ ಚಬಹಾರ್ ಬಂದರಿನ ರೈಲು ಯೋಜನೆ ಒಪ್ಪಂದ
ಚಬಹಾರ್ ರೈಲು ಯೋಜನೆಯಿಂದ ಭಾರತವನ್ನು ಇರಾನ್ ಕೈಬಿಟ್ಟಿದೆ ಎಂಬ ವರದಿಯನ್ನು ಟ್ವಿಟ್ಟರ್ನಲ್ಲಿ ಉಲ್ಲೇಖಿಸಿರುವ ರಾಹುಲ್ ಗಾಂಧಿ ''ಭಾರತ ಎಲ್ಲೆಡೆ ಅಧಿಕಾರ ಮತ್ತು ಗೌರವ ಕಳೆದುಕೊಳ್ಳುತ್ತಿದೆ' ಎಂದಿದ್ದಾರೆ.
ಇರಾನ್ನ ಚಬಹಾರ್-ಜಹೇದಾನ್ ರೈಲು ಯೋಜನೆಯಿಂದ ಭಾರತ ಅಂತರ ಕಾಯ್ದುಕೊಂಡಿದೆ. ಹಾಗಾಗಿ, ಭಾರತವನ್ನು ಈ ಪ್ರಾಜೆಕ್ಟ್ನಿಂದ ಇರಾನ್ ತೆಗೆದುಹಾಕಿದೆ ಎಂದು ಹೇಳಲಾಗಿದೆ. ಮತ್ತೊಂದೆಡೆ ಅಮೆರಿಕಾ ಹಾಗೂ ಭಾರತಕ್ಕೆ ಶತ್ರುವಾಗಿ ಪರಿಣಮಿಸಿರುವ ಚೀನಾ ಜೊತೆಗೆ ಕೈಜೋಡಿಸಿರುವ ಇರಾನ್ 400 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ.
ಆದರೆ, ಈ ಸುದ್ದಿಯನ್ನು ನಿರಾಕರಿಸಿರುವ ಭಾರತ ವಿದೇಶಾಂಗ ಕಚೇರಿ 'ಅಫ್ಘಾನಿಸ್ತಾನದ ಗಡಿಯಲ್ಲಿರುವ ಚಬಹಾರ್ ಬಂದರಿನಿಂದ ಜಹೇದಾನ್ ವರೆಗೆ ರೈಲು ಮಾರ್ಗವನ್ನು ನಿರ್ಮಿಸುವ ಕಾರ್ಯದಲ್ಲಿ ಭಾರತವೂ ಪ್ರಮುಖ ಪಾತ್ರ ವಹಿಸಲಿದೆ, ಈ ಯೋಜನೆಯಿಂದ ಹಿಂದೆ ಸರಿದಿದೆ ಎನ್ನುವುದು ಕೇವಲ ವದಂತಿ' ಎಂದಿದೆ.