ಬೌದ್ಧ ಸಾಹಿತ್ಯ, ಧರ್ಮಗ್ರಂಥಗಳ ಗ್ರಂಥಾಲಯ ರೂಪಿಸಲು ಮೋದಿ ಪ್ರಸ್ತಾಪ
ನವದೆಹಲಿ, ಡಿಸೆಂಬರ್ 21: ಪುರಾತನ ಬೌದ್ಧ ಸಾಹಿತ್ಯ ಹಾಗೂ ಧರ್ಮ ಗ್ರಂಥಗಳಿಗೆ ಭಾರತದಲ್ಲಿ ಗ್ರಂಥಾಲಯ ರೂಪಿಸುವ ಪ್ರಸ್ತಾವವನ್ನು ಸೋಮವಾರ ನರೇಂದ್ರ ಮೋದಿ ಜಪಾನ್ ಸರ್ಕಾರದ ಮುಂದಿಟ್ಟಿದ್ದಾರೆ.
ಭಾರತ-ಜಪಾನ್ ಸಂವಾದ್ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಭಾರತದಲ್ಲಿ ಬೌದ್ಧ ಧರ್ಮದ ಕುರಿತ ಸಾಹಿತ್ಯ, ಧರ್ಮಗ್ರಂಥಗಳಿಗೆ ಗ್ರಂಥಾಲಯ ರೂಪಿಸಬೇಕು. ಭಾರತ ಇದಕ್ಕೆ ಅಗತ್ಯ ಸಹಕಾರ ನೀಡಲು ಸಿದ್ಧ" ಎಂದು ಪ್ರಸ್ತಾವ ಇಟ್ಟಿದ್ದಾರೆ. ಸಂವಾದ್ ಕಾರ್ಯಕ್ರಮದ ಮೂಲಕ ಭಾರತಕ್ಕೆ ನಿರಂತರ ಬೆಂಬಲ ನೀಡುತ್ತಿರುವುದಕ್ಕೆ ಜಪಾನ್ ಸರ್ಕಾರಕ್ಕೆ ಧನ್ಯವಾದವನ್ನೂ ಅರ್ಪಿಸಿದ್ದಾರೆ.
"ಬಾಂಗ್ಲಾ ಜೊತೆ ಸಂಬಂಧ ಗಟ್ಟಿಗೊಳಿಸುವುದೇ ಪ್ರಥಮ ಆದ್ಯತೆ"
ಸಮಕಾಲೀನ ಸವಾಲುಗಳಿಗೆ ಪೂರಕವಾಗಿ ಈ ಆಧುನಿಕ ಜಗತ್ತಿನಲ್ಲಿ ಬುದ್ಧನ ಸಂದೇಶಗಳನ್ನು ಹೇಗೆ ಅನ್ವಯಿಸಬಹುದು ಎಂಬುದನ್ನು ಗ್ರಂಥಾಲಯ ಸಂಶೋಧನಾ ವಿಭಾಗವು ಒಳಗೊಳ್ಳಬೇಕು. ವಿವಿಧ ದೇಶಗಳಲ್ಲಿರುವ ಬೌದ್ಧ ಸಾಹಿತ್ಯದ ಡಿಜಿಟಲ್ ಪ್ರತಿಗಳನ್ನು ಗ್ರಂಥಾಲಯಕ್ಕೆ ತರಿಸಿಕೊಳ್ಳಲಾಗುವುದು. ಎಲ್ಲಾ ಬೌದ್ಧ ಭಿಕ್ಷುಗಳಿಗೆ ಹಾಗೂ ವಿದ್ವಾಂಸರಿಗೆ ಉಚಿತವಾಗಿ ದೊರೆಯುವಂತೆ ಭಾಷಾಂತರವನ್ನೂ ಮಾಡುವ ಗುರಿಯಿದೆ ಎಂದು ತಿಳಿಸಿದರು.
ಬುದ್ಧನ ಸಿದ್ಧಾಂತ, ತತ್ವಗಳನ್ನು ಜಗತ್ತಿಗೆ ಸಾರುವಲ್ಲಿ, ಅದರಲ್ಲೂ ಯುವಜನತೆಗೆ ತಲುಪಿಸುವಲ್ಲಿ ನಿರತರಾಗಿರುವ ವೇದಿಕೆಯ ಕಾರ್ಯವನ್ನು ಶ್ಲಾಘಿಸಿದರು. "ಭಾರತದಿಂದ ವಿಶ್ವದೆಲ್ಲೆಡೆ ಬುದ್ಧನ ಜ್ಞಾನದ ಬೆಳಕು ಆವರಿಸಿದೆ" ಎಂದರು.
ಈ ಒಂದು ಪ್ರಯಾಣದಲ್ಲಿ ಸಂವಾದ್, ತಮ್ಮ ಮೂಲ ಗುರಿಗಳನ್ನು ಪ್ರಾಮಾಣಿಕವಾಗಿ ಮುನ್ನಡೆಸುತ್ತಿದೆ. ಬೌದ್ಧ ಧರ್ಮದ ಸಂದೇಶಗಳ ಕುರಿತ ಚರ್ಚೆಯನ್ನು ಉತ್ತೇಜಿಸುವ, ಸಿದ್ಧಾಂತಗಳನ್ನು ಸಾರುವ, ಪ್ರಾಚೀನ ಸಿದ್ಧಾಂತ, ಆಧ್ಯಾತ್ಮ ಹಾಗೂ ವಿದ್ವತ್ಪೂರ್ಣ ಅನುಭವಗಳನ್ನು ವಿನಿಮಯ ಮಾಡುವ ತನ್ನ ಗುರಿಗಳನ್ನು ಮುಂದುವರೆಸಿಕೊಂಡು ಬಂದಿದೆ ಎಂದರು.
2015ರಲ್ಲಿ ಬೋದ್ ಗಯಾದಲ್ಲಿ ಮೊದಲ ಸಂವಾದ್ 1 ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ವಾಂಸರು, ಧಾರ್ಮಿಕ ಮುಖಂಡರು, ರಾಜಕೀಯ ವ್ಯಕ್ತಿಗಳು ಸಂವಾದದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.