Breaking: ಭಾರತದಲ್ಲಿ ಸರ್ವಾಧಿಕಾರದ ಆರಂಭ ಕಾಣುತ್ತಿದೆ: ರಾಹುಲ್
ನವದೆಹಲಿ, ಆ.05: "ಪ್ರತಿಪಕ್ಷ ನಾಯಕರ ವಿರುದ್ಧ ಕೇಂದ್ರೀಯ ಸಂಸ್ಥೆಗಳನ್ನು ನರೇಂದ್ರ ಮೋದಿ ಸರಕಾರ ಬಳಸುತ್ತಿರುವ ರೀತಿ ಭಾರತ ಸರ್ವಾಧಿಕಾರದ ಆರಂಭವನ್ನು ಕಾಣುತ್ತಿದೆ ಎಂಬುದನ್ನು ಸೂಚಿಸುತ್ತಿದೆ" ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದರು.
ನಿರುದ್ಯೋಗ, ಬೆಲೆ ಏರಿಕೆ ಮತ್ತು ಸರಕು ಮತ್ತು ಸೇವಾ ತೆರಿಗೆ ವಿರುದ್ಧ ಕಾಂಗ್ರೆಸ್ ಶುಕ್ರವಾರ ಬೃಹತ್ ಪ್ರತಿಭಟನೆ ಆರಂಭಿಸಿದೆ. ಪ್ರತಿಭಟನೆಗಳ ಹಿನ್ನೆಯಲ್ಲಿ ದೆಹಲಿಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ, ಬ್ಯಾರಿಕೇಡ್ ಗಳ ಹಾಕಲಾಗಿದೆ. ಬೃಹತ್ ಸಭೆಗಳನ್ನು ನಿಷೇಧಿಸಲಾಗಿದೆ.
"ನಮಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶವಿಲ್ಲ, ನಮ್ಮನ್ನು ರಸ್ತೆಯಲ್ಲಿಯೇ ಬಂಧಿಸಲಾಗಿದೆ, ಇದು ಇಂದಿನ ಭಾರತದ ಸ್ಥಿತಿಯಾಗಿದೆ" ಎಂದು ರಾಹುಲ್ ಗಾಂಧಿ ಹೇಳಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯನ್ನು ಪ್ರಶ್ನಿಸಿದ್ದನ್ನು ವಿರೋಧಿಸಿ ಕಳೆದ ವಾರ ನಡೆದ ಮೆರವಣಿಗೆಯಲ್ಲಿ ಇತರ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ರಾಹುಲ್ ಗಾಂಧಿಯವರನ್ನು ಬಂಧಿಸಲಾಗಿತ್ತು.
"ದೇಶದಲ್ಲಿ ಪ್ರಜಾಪ್ರಭುತ್ವದ ಸಾವಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಸುಮಾರು ಒಂದು ಶತಮಾನದ ಹಿಂದೆ ಭಾರತವು ಹಂತ ಹಂತವಾಗಿ ಕಟ್ಟಲ್ಪಟ್ಟಿದೆ, ಅದು ನಿಮ್ಮ ಕಣ್ಣುಗಳ ಮುಂದೆ ನಾಶವಾಗುತ್ತಿದೆ. ಸರ್ವಾಧಿಕಾರದ ಆರಂಭದ ವಿರುದ್ಧ ನಿಂತಿರುವ ಎಲ್ಲರ ಮೇಲೆ ಕ್ರೂರವಾಗಿ ಆಕ್ರಮಣ ಮಾಡಲಾಗುತ್ತಿದೆ. ಅವರನ್ನು ಜೈಲಿಗೆ ಹಾಕಲಾಗುತ್ತದೆ, ಬಂಧಿಸಲಾಗುತ್ತದೆ ಮತ್ತು ಥಳಿಸಲಾಗುತ್ತದೆ. ಇಂದು ದೇಶದಲ್ಲಿ ಪ್ರಜಾಪ್ರಭುತ್ವವಿಲ್ಲ, ನಾಲ್ಕು ಜನರ ಸರ್ವಾಧಿಕಾರವಿದೆ" ಎಂದು ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
'ಗಾಂಧಿ ಕುಟುಂಬದ ಮೇಲೆ ಏಕೆ ದಾಳಿ ಮಾಡುತ್ತಾರೆ ಎಂದರೆ ನಾವು ಒಂದು ಸಿದ್ಧಾಂತಕ್ಕಾಗಿ ಹೋರಾಡುತ್ತೇವೆ. ಹಾಗೂ ನಮ್ಮಂತಹ ಕೋಟಿಗಟ್ಟಲೆ ಜನರಿದ್ದಾರೆ. ನಾವು ಪ್ರಜಾಪ್ರಭುತ್ವಕ್ಕಾಗಿ, ಕೋಮು ಸೌಹಾರ್ದತೆಗಾಗಿ ಹೋರಾಡುತ್ತೇವೆ. ನಾವು ಇದನ್ನು ವರ್ಷಗಳಿಂದ ಮಾಡುತ್ತಿದ್ದೇವೆ. ಇದನ್ನು ನಾನೊಬ್ಬನೇ ಮಾಡುತ್ತಿಲ್ಲ, ಇದು ಹಲವು ವರ್ಷಗಳಿಂದ ನಡೆಯುತ್ತಿದೆ' ಎಂದರು.
Recommended Video
'ಜನರ ಸಮಸ್ಯೆಗಳಾದ ಬೆಲೆ ಏರಿಕೆ, ನಿರುದ್ಯೋಗ, ಸಮಾಜದಲ್ಲಿನ ಹಿಂಸೆಗಳ ಬಗ್ಗೆ ದನಿ ಎತ್ತಬಾರದು. ಇದು ನಾಲ್ಕೈದು ಜನರ ಹಿತಾಸಕ್ತಿ ಕಾಪಾಡಲು ಸರಕಾರದ ಏಕೈಕ ಕಾರ್ಯಸೂಚಿಯಾಗಿದೆ. ಈ ಸರ್ವಾಧಿಕಾರವನ್ನು 2-3 ದೊಡ್ಡ ಉದ್ಯಮಿಗಳ ಹಿತಾಸಕ್ತಿಗಾಗಿ ಇಬ್ಬರು ನಡೆಸುತ್ತಿದ್ದಾರೆ' ಎಂದು ರಾಹುಲ್ ಗಾಂಧಿ ಆರೋಪಿಸಿದರು.