ಭಾರತವು ಮುಸ್ಲಿಮರಿಗೆ "ಸ್ವರ್ಗ'ವಿದ್ದಂತೆ, ಅವರ ಹಕ್ಕುಗಳೂ ಸುರಕ್ಷಿತ: ನಖ್ವಿ
ನವದೆಹಲಿ ಏಪ್ರಿಲ್ 21: ಭಾರತವು ಮುಸ್ಲಿಮರಿಗೆ ಸ್ವರ್ಗವಿದ್ದಂತೆ, ಅವರ ಹಕ್ಕುಗಳು ಕೂಡ ಇಲ್ಲಿ ಸುರಕ್ಷಿತವಾಗಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಇಸ್ಲಾಮೋಫೋಬಿಯಾ(ಇಸ್ಲಾಂ ಭಯ) ಆವರಿಸಿದೆ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ(OIC) ಹೇಳಿಕೆ ನೀಡಿದ ಬೆನ್ನಲ್ಲೇ, ಮುಕ್ತಾರ್ ಅಬ್ಬಾಸ್ ನಖ್ವಿ ಭಾರತ ಮುಸಲ್ಮಾನರಿಗೆ ಸ್ವರ್ಗವಿದ್ದಂತೇ ಎಂದು ಪ್ರತ್ಯುತ್ತರ ನೀಡಿದ್ದಾರೆ
ಮುಸ್ಲಿಮರು ಭಾರತದ ನೆಲದಲ್ಲಿ ಅನುಭವಿಸಿದಷ್ಟು ಸುರಕ್ಷಿತ ಭಾವನೆಯನ್ನು ಮತ್ತೆಲ್ಲೂ ಅನುಭವಿಸಲು ಸಾಧ್ಯವಿಲ್ಲ ಈ ನೆಲ ಅವರಿಗೆ ಸ್ವರ್ಗವಿದ್ದಂತೆ ಎಂದು ಹೇಳಿದ್ದಾರೆ.
ಮುಸ್ಲಿಮರಿಗೆ ಭಾರತ ಸುರಕ್ಷಿತ ನೆಲ
ಮುಸ್ಲಿಮರಿಗೆ ಭಾರತ ಅತ್ಯಂತ ಸುರಕ್ಷಿತ ನೆಲವಾಗಿದ್ದು, ಇದಕ್ಕೆ ವ್ಯತಿರಿಕ್ತವಾಗಿ ಮುಸ್ಲಿಮರ ಮನದಲ್ಲಿ ಬಹುಸಂಖ್ಯಾತರ ಕುರಿತು ವಿರೋಧಿ ಭಾವನೆ ಮೂಡಿಸಲು ನಡೆದಿರುವ ಪ್ರಯತ್ನ ಫಲ ನೀಡದು ಎಂದು ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಹಿಂದೂ-ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸುವ ಪ್ರಯತ್ನ
ಕೆಲವು ಮಂದಿ ಹಿಂದೂ-ಮುಸ್ಲಿಮರ ನಡುವೆ ದ್ವೇಷ ಉಂಟುಮಾಡುವ ಕೆಲಸ ಮಾಡುತ್ತಿದ್ದಾರೆ. ಅವರ ಭಾವನೆಗಳನ್ನು ಕೆರಳಿಸುತ್ತಿದ್ದಾರೆ. ಆದರೆ ಆ ಪ್ರಯತ್ನ ಪ್ರಯತ್ನ ಎಂದೂ ಕೈಗೂಡುವುದಿಲ್ಲ ಎಂದಿದ್ದಾರೆ.
ಭಿನ್ನತೆ ಬಗ್ಗೆ ಮಾತನಾಡುವವರು ಮುಸ್ಲಿಮರ ಗೆಳೆಯರಾಗಲು ಸಾಧ್ಯವಿಲ್ಲ
ಭಿನ್ನತೆಯ ಮಾತನಾಡುವವರು ಭಾರತೀಯ ಮುಸ್ಲಿಮರ ಗೆಳೆಯರಾಗಲು ಸಾಧ್ಯವೇ ಇಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಕೊರೊನಾ ವೈರಸ್ ಹಾವಳಿಯನ್ನು ಮುಸ್ಲಿಮರ ತಲೆಗೆ ಕಟ್ಟುವ ಪ್ರಯತ್ನ ನಡೆಯುತ್ತಿದ್ದು, ಇದನ್ನೂ ಕೂಡಲೇ ತಡೆಗಟ್ಟಬೇಕು ಎಂದು ಓಐಸಿ ಆಗ್ರಹಿಸಿತ್ತು. ಅಲ್ಲದೇ ಮಾಧ್ಯಮಗಳು ಮುಸ್ಲಿಮರ ವಿರುದ್ಧ ನಡೆಸುತ್ತಿರುವ ಅಪಪ್ರಚಾರವನ್ನು ನಿಲ್ಲಿಸುವಂತೆಯೂ ಸಂಘಟನೆ ಒತ್ತಾಯಿಸಿತ್ತು.
ಭಾರತದಲ್ಲಿ ಮುಸ್ಲಿಮರನ್ನು ಕಡೆಗಣಿಸಿಲ್ಲ
ಓಐಸಿಯ ಈ ಆಪಾದನೆಗೆ ಪ್ರತ್ಯುತ್ತರ ನೀಡಿರುವ ನಖ್ವಿ, ಭಾರತದಲ್ಲಿ ಮುಸ್ಲಿಮರನ್ನು ಎಂದಿಗೂ ಕಡೆಗಣಿಸಿಲ್ಲ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾರಕ ಕೊರೊನಾ ವೈರಸ್ ಹೊಡೆದೋಡಿಸುವ ಕಾರ್ಯದಲ್ಲಿ ತೊಡಗಿದೆಯೇ ಹೊರತು ಜಾತಿ-ಧರ್ಮದ ಕುರಿತು ಏನೂ ಕ್ರಮ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.