ಗಡಿ ದಾಟಿ ಬಂದಿದ್ದ ಸೈನಿಕನನ್ನು ಚೀನಾಗೆ ಹಸ್ತಾಂತರಿಸಿದ ಭಾರತ
ನವದೆಹಲಿ, ಜನವರಿ 11: ಮೂರು ದಿನಗಳ ಹಿಂದೆ ಪೂರ್ವ ಲಡಾಖ್ ಸಮೀಪ ಬಂಧಿಸಲಾಗಿದ್ದ ಚೀನಾ ಸೈನಿಕನನ್ನು ಸೋಮವಾರ ಭಾರತ ಚೀನಾಗೆ ಹಸ್ತಾಂತರಿಸಿದೆ.
ಗಡಿ ನಿಯಂತ್ರಣ ರೇಖೆ ದಾಟಿ ಅಕ್ರಮವಾಗಿ ಭಾರತ ಪ್ರವೇಶಿಸಿದ ಆರೋಪದ ಮೇಲೆ ಭಾರತೀಯ ಸೈನಿಕರು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಸೇರಿದ ಸೈನಿಕನನ್ನು ಶುಕ್ರವಾರ ಬೆಳಿಗ್ಗೆ ಪೂರ್ವ ಲಡಾಖ್ ನ ಪಾಗೊಂಗ್ ತ್ಸೊನಲ್ಲಿ ಬಂಧಿಸಿದ್ದರು. ನಿಯಂತ್ರಣ ರೇಖೆ ದಾಟಿದ್ದ ವ್ಯಕ್ತಿಯನ್ನು ಸೇನೆ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.
ಭಾರತದ ಗಡಿಯೊಳಗೆ ಸೆರೆ ಸಿಕ್ಕ ಚೀನಾ ಸೈನಿಕ: ಸೇನೆಯಿಂದ ವಿಚಾರಣೆ
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಚೀನಾ, "ನಮ್ಮ ಸೈನಿಕನನ್ನು ಈಗಲೇ ವಾಪಸ್ ಕಳುಹಿಸಬೇಕು. ಕತ್ತಲೆಯಲ್ಲಿ ಚೀನಾ-ಭಾರತ ಗಡಿ ಪ್ರದೇಶದಲ್ಲಿ ನಮ್ಮ ಸೈನಿಕ ದಾರಿ ತಪ್ಪಿ ನಿಯಂತ್ರಣ ರೇಖೆ ದಾಟಿ ಬಂದಿದ್ದಾರೆ" ಎಂದು ತಿಳಿಸಿತ್ತು.
ಸೋಮವಾರ, ಪೂರ್ವ ಲಡಾಖ್ ನ ಚುಶಲ್-ವವೋಲ್ವೊ ಗಡಿ ಭಾಗದಲ್ಲಿ ಬಂಧಿತ ಸೈನಿಕನನ್ನು ಭಾರತ ಚೀನಾಗೆ ಹಸ್ತಾಂತರಿಸಿದೆ. ಪೂರ್ವ ಲಡಾಖ್ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ನಿಯಂತ್ರಣಕ್ಕೆ ಉಭಯ ದೇಶಗಳು ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಸೈನಿಕರನ್ನು ನಿಯೋಜಿಸಿದೆ.